ಶಾಸಕರ ಮೇಲೆ ‘ಕೈ’ ಗರಂ

| Published : Jun 25 2025, 01:18 AM IST

ಸಾರಾಂಶ

ವಿವಿಧ ಇಲಾಖೆಗಳ ವಿರುದ್ಧ ಲಂಚದ ಆರೋಪ, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಅಸಮಾಧಾನ ಹಾಗೂ ಅನುದಾನಕ್ಕಾಗಿ ಬೇಡಿಕೆ ಇಟ್ಟು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುತ್ತಿರುವ ಸ್ವಪಕ್ಷೀಯ ಶಾಸಕರಿಗೆ ಸ್ಪಷ್ಟ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸೂಚಿಸಿದೆ.

- ಸರ್ಕಾರದ ವಿರುದ್ಧವೇ ಸಿಡಿದ ‘ಕೈ’ ಶಾಸಕರ ಬಾಯಿ ಮುಚ್ಚಿಸಿ

- ಶಾಸಕರಿಗೆ ಬುದ್ಧಿವಾದ ಹೇಳಿ: ಸಿಎಂಗೆ ಹೈಕಮಾಂಡ್‌ ತಾಕೀತು

- ಸಿಡಿದ ಶಾಸಕರು ಈಗಾದರೂ ಸುಮ್ಮನಾಗ್ತಾರಾ ಎಂಬುದೇ ಪ್ರಶ್ನೆ==ನಮ್ಮದು ಗಂಡ-ಹೆಂಡಿರ ಜಗಳಸರ್ಕಾರ ಹಾಗೂ ನಮ್ಮ ನಡುವಿನದು ಗಂಡ-ಹೆಂಡತಿ ಜಗಳ ಇದ್ದಂತೆ. ಸಂಸಾರ ಅಂದಮೇಲೆ ಗಂಡ-ಹೆಂಡತಿ ಜಗಳ ಇದ್ದೇ ಇರುತ್ತದೆ. ವಸತಿ ಇಲಾಖೆಯ ಭ್ರಷ್ಟಾಚಾರದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಬಳಿ ಜೂ.25ರಂದು ಬೆಂಗಳೂರಿನಲ್ಲಿ ಮಾತನಾಡುವೆ.

- ಬಿ.ಆರ್. ಪಾಟೀಲ, ಕಾಂಗ್ರೆಸ್‌ ಶಾಸಕ--‘ಬುದ್ಧಿ’ ಹೇಳಲು ಖುದ್ದು ಜು.13ಕ್ಕೆ ರಾಜ್ಯಕ್ಕೆ

ಸುರ್ಜೇವಾಲಾ ಭೇಟಿ

ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಬುದ್ದಿ ಹೇಳಲು ಜು.13ಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೇ ಖುದ್ದು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಭೇಟಿ ಸಂದರ್ಭದಲ್ಲೇ ಸುರ್ಜೇವಾಲ ಅವರು ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ಭೇಟಿ ವೇಳೆ ಅಸಮಾಧಾನಿತ ಶಾಸಕರನ್ನು ಕರೆಸಿ ಮಾತನಾಡುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

---ಎಂಎಲ್ಸಿ ಪಟ್ಟಿ ಶೀಘ್ರ ಅಂತಿಮಗೊಳಿಸಿ: ವರಿಷ್ಠರಿಗೆ ಸಿದ್ದು ಮನವಿ

--

ಮಂಗಳವಾರ ದಿಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್‌ ಆಗುಹೋಗುಗಳ ಚರ್ಚೆ ಮಾಡಿದರು.-ಹೈಕಮಾಂಡ್‌ ಖಡಕ್‌ ಸೂಚನೆ- ಶಾಸಕರು ಸಮಸ್ಯೆ ಏನೇ ಇದ್ದರೂ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಿ ಬಗೆಹರಿಸಿಕೊಳ್ಳಬೇಕು

- ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ಆರೋಪ ಮಾಡಿದರೆ ಜನತೆಗೆ ತಪ್ಪು ಸಂದೇಶ ರವಾನೆ- ಪ್ರತಿಪಕ್ಷ ಇದನ್ನು ಉಪಯೋಗಿಸಿ ಸರ್ಕಾರದ ವಿರುದ್ಧ ಮುಗಿಬೀಳುತ್ತದೆ, ಮುಜುಗರ ಆಗುತ್ತದೆ

- ಶಾಸಕರ ಇಂಥ ಅಶಿಸ್ತಿನ ನಡೆ ಸಹಿಸಲು ಆಗದು. ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತೆ

- ಎಲ್ಲ ಶಾಸಕರ ಕರೆಸಿ ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಸೂಚಿಸಿ:ಸಿದ್ದುಗೆ ವರಿಷ್ಠರ ಸೂಚನೆ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಿಧ ಇಲಾಖೆಗಳ ವಿರುದ್ಧ ಲಂಚದ ಆರೋಪ, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಅಸಮಾಧಾನ ಹಾಗೂ ಅನುದಾನಕ್ಕಾಗಿ ಬೇಡಿಕೆ ಇಟ್ಟು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುತ್ತಿರುವ ಸ್ವಪಕ್ಷೀಯ ಶಾಸಕರಿಗೆ ಸ್ಪಷ್ಟ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸೂಚಿಸಿದೆ.

ಶಾಸಕರ ಸಮಸ್ಯೆಗಳು ಏನೇ ಇದ್ದರೂ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸ್ವಪಕ್ಷೀಯ ಶಾಸಕರೇ ಈ ರೀತಿ ಸರ್ಕಾರದ ವಿರುದ್ಧ ಆರೋಪ, ಅಸಮಾಧಾನ ಹೊರಹಾಕಿದರೆ ಕಾರ್ಯಕರ್ತರಿಗೆ, ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಜತೆಗೆ ಪ್ರತಿಪಕ್ಷಗಳು ಇದನ್ನು ಉಪಯೋಗಿಸಿಕೊಂಡು ಸರ್ಕಾರದ ವಿರುದ್ಧ ಟೀಕೆ, ಮುಗಿಬೀಳಲು ದಾರಿಯಾಗುತ್ತದೆ. ಶಾಸಕರ ಇಂಥ ನಡೆ ಸಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೂಡಲೇ ಸಂಬಂಧಿಸಿದ ಎಲ್ಲ ಶಾಸಕರನ್ನು ಕರೆಸಿ ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಸೂಚನೆ ನೀಡಿ ಎಂದು ತಿಳಿಸಿದ್ದಾರೆ.

ಆದರೆ ಇಷ್ಟು ಖಡಕ್‌ ಸೂಚನೆ ಬಳಿಕವೂ ಸಿಡಿದೆದ್ದಿದ್ದ ಶಾಸಕರು ಸುಮ್ಮನಾಗುತ್ತಾರಾ ಎಂಬುದೇ ಪ್ರಶ್ನೆ.

ಸುರ್ಜೇವಾಲ ಜತೆ ಸಿಎಂ ಭೇಟಿ:

ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತನಾಡಿದರು. ಈ ವೇಳೆ, ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ವಸತಿ ಇಲಾಖೆ ವಿರುದ್ಧ ಮಾಡಿರುವ ಮನೆಗಳ ಮಂಜೂರಾತಿಗೆ ಲಂಚದ ಆರೋಪ, ಕಾಗವಾಡ ಶಾಸಕ ರಾಜು ಕಾಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ಬೆದರಿಕೆ ಹಾಕಿರುವುದು, ರಸ್ತೆ, ಚರಂಡಿ ನಿರ್ಮಾಣಕ್ಕೂ ಹಣ ಸಿಗುತ್ತಿಲ್ಲ ಎಂಬ ಮೊಳಕಾಲ್ಮೂರು ಶಾಸಕ ಎನ್‌.ವೈ ಗೋಪಾಲ ಕೃಷ್ಣ ಅವರ ಹೇಳಿಕೆ ಸೇರಿ ಶಾಸಕರ ಅಸಮಾಧಾನ, ಸಚಿವರ ಕಾರ್ಯವೈಖರಿ ವಿರುದ್ಧ ಈ ಹಿಂದೆ ಕೆಲ ಶಾಸಕರು ಬರೆದಿದ್ದ ಪತ್ರ, ಆರೋಪದ ವಿಚಾರಗಳ ಬಗ್ಗೆ ಸುರ್ಜೇವಾಲ ಅವರಿಗೆ ಮಾಹಿತಿ ನೀಡಲಾಗಿದೆ.

ಇದಕ್ಕೆ ಸುರ್ಜೇವಾಲ ಅವರು ಎಲ್ಲ ಅಸಮಾಧಾನಿತ ಶಾಸಕರನ್ನು ಕರೆಸಿ ಬುದ್ದಿ ಹೇಳಿ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಜನಪ್ರಿಯ ಗ್ಯಾರಂಟಿ ಯೋಜನೆಗಳ ಜಾರಿ ಸೇರಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಕೊಂಡು ಸಾಗುತ್ತಿದೆ. ಬರುವ ದಿನಗಳಲ್ಲಿ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ದೊರೆಯಲಿದೆ ಎಂದು ತಿಳಿಸಿ, ಯಾವುದೇ ಕಾರಣಕ್ಕೂ ಮತ್ತೆ ಸರ್ಕಾರದ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಅಸಮಾಧಾನ, ಆರೋಪಗಳನ್ನು ಮಾಡದಂತೆ ಸ್ಪಷ್ಟ ಸೂಚನೆ ನೀಡುವಂತೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

====ಸಿದ್ದು ಮೊದಲಿನಂತಿಲ್ಲ, ಸಚಿವರು ಸ್ಪಂದಿಸ್ತಿಲ್ಲ: ಮತ್ತೆ ಸಿಡಿದ ಕಾಗೆ

- ಕೆಪಿಸಿಸಿ ಅಧ್ಯಕ್ಷರು ನಮ್ಮ ಕಡೆ ತಿರುಗಿಯೂ ನೋಡಲ್ಲ

- ನಾವು ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್‌ನಲ್ಲಿಬೇಕು?------

- ಸಚಿವರ ಬಗ್ಗೆ ಹಿಂದೆ ಸಿಎಲ್ಪಿ ಸಭೆಯಲ್ಲೇ ಹೇಳಿದ್ದೆ- ಶಾಸಕರ ಜತೆ ಮಾತನಾಡೋ ಸೌಜನ್ಯ ಅವರಿಗಿಲ್ಲ

- ಹೀಗಾಗಿ ರಾಜೀನಾಮೆ ಮಾತು ಆಡಿದ್ದೆ: ಕೈ ಶಾಸಕ==

ಕನ್ನಡಪ್ರಭ ವಾರ್ತೆ ಬೆಂಗಳೂರು‘ಆಡಳಿತ ಪಕ್ಷದ ಶಾಸಕನಾಗಿದ್ದರೂ ನಮ್ಮ ಸಚಿವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಕೆಪಿಸಿಸಿ ಅಧ್ಯಕ್ಷರು ನಮ್ಮನ್ನು ನೋಡುವುದೇ ಇಲ್ಲ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹಿಂದಿನಂತಿಲ್ಲ. ಹೀಗಿರುವಾಗ ಆಡಳಿತ ಪಕ್ಷದಲ್ಲಿ ಯಾವ ಪುರುಷಾರ್ಥಕ್ಕಾಗಿ ನಾವು ಇರಬೇಕು’ ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಡಳಿತ ಪಕ್ಷದ ಶಾಸಕನಾಗಿದ್ದರೂ ಸಚಿವರು ನಮಗೆ ಸಿಗುವುದೇ ಇಲ್ಲ. ಈ ಬಗ್ಗೆ ಹಿಂದೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದೆ. ಅದಾದ ನಂತರವೂ ಶಾಸಕರನ್ನು ಕರೆದು ಮಾತನಾಡುವ ಸೌಜನ್ಯ ಸಚಿವರಿಗಿಲ್ಲ. ಸಚಿವರು ಯಾವಾಗ ಸಿಗುತ್ತಾರೆ ಎಂಬುದನ್ನು ಅವರೇ ಘೋಷಣೆ ಮಾಡಿಕೊಳ್ಳಲಿ. ಒಂದು ಸಮಯ ನಿಗದಿ ಮಾಡಲಿ. ಆಗ ನಾವು ಬಂದು ಅವರನ್ನು ಭೇಟಿ ಮಾಡುತ್ತೇವೆ. ಇಲ್ಲದಿದ್ದರೆ ಅವರನ್ನು ಎಲ್ಲಿ ಹುಡುಕಬೇಕು?. ನಮ್ಮ ಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಿಲ್ಲ’ ಎಂದರು.ಈ ಹಿಂದೆಯೂ ಮುಖ್ಯಮಂತ್ರಿ ಅವರ ಬಳಿ ಈ ಬಗ್ಗೆ ಹೇಳಿದ್ದೆ. ಆದರೂ, ಅದು ಸರಿ ಹೋಗಿಲ್ಲ. ಪ್ರತಿದಿನವೂ ಇದನ್ನೇ ಹೇಳುತ್ತಾ ಇರಬೇಕಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಹಿರಿಯ ಶಾಸಕರಿಗೆ ಹೀಗಾದರೆ ಹೊಸ ಶಾಸಕರ ಪರಿಸ್ಥಿತಿ ಏನಾಗಬೇಡ? ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಬಿಜೆಪಿಯಿಂದ ಶಾಸಕನಾಗಿದ್ದೆ. ಆಗಲೇ ನನ್ನ ಕ್ಷೇತ್ರದ ಕೆಲಸ ಮಾಡಿಕೊಡುತ್ತಿದ್ದರು. ಈಗ ಆಡಳಿತ ಪಕ್ಷದ ಶಾಸಕನಾಗಿದ್ದರೂ ಕೆಲಸ ಮಾಡಿಕೊಡುತ್ತಿಲ್ಲ. ಸಿದ್ದರಾಮಯ್ಯ ಅವರೂ ಬದಲಾಗಿದ್ದಾರೆ. ಹಾಗೆಯೇ, ಕೆಪಿಸಿಸಿ ಅಧ್ಯಕ್ಷರು ಮನೆಗೆ ಹೋದರೂ ನಮ್ಮ ಕಡೆ ನಡೆಯುವುದಿಲ್ಲ. ಈ ವ್ಯವಸ್ಥೆಯಲ್ಲಿ ಯಾವ ಪುರುಷಾರ್ಥಕ್ಕಾಗಿ ನಾವು ಆಡಳಿತ ಪಕ್ಷದಲ್ಲಿರಬೇಕು ಎಂದು ಪ್ರಶ್ನಿಸಿದರು.

‘ಸಚಿವರ ವರ್ತನೆ ಬಗ್ಗೆ ನಾನು ಬೇಸರ, ನೋವಿನಿಂದ ಮಾತನಾಡಿದ್ದೇನೆ. ನಮ್ಮ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಒಂದೂವರೆ ವರ್ಷದ ಹಿಂದೆ ಚಾಲನೆ ನೀಡಿದ್ದರೂ ಈವರೆಗೆ ಕೆಲಸವಾಗಿಲ್ಲ. ಅಧಿಕಾರಿಗಳಲ್ಲಿ ಆ ಬಗ್ಗೆ ಕೇಳಿದರೆ ಗುತ್ತಿಗೆದಾರರ ಮೇಲೆ ಹಾಕುತ್ತಾರೆ. ಗುತ್ತಿಗೆದಾರರು ಬಿಲ್‌ ಪಾವತಿಸದೆ ಕೆಲಸ ಮಾಡುವುದಿಲ್ಲ. ಆಡಳಿತ ಪಕ್ಷದ ಶಾಸಕರ ಕ್ಷೇತ್ರದಲ್ಲೇ ಹೀಗಾದರೆ ಹೇಗೆ? ನಾವೆಲ್ಲರೂ ಮತದಾರರ ಅಧೀನದಲ್ಲಿದ್ದೇವೆ. ಅವರಿಗೆ ಉತ್ತರಿಸಬೇಕಲ್ಲ. ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು 200 ಕೋಟಿ ರು. ಅವಶ್ಯಕತೆಯಿದೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.‘ಕ್ಷೇತ್ರದ ಕೆಲಸವಾಗುತ್ತಿಲ್ಲ ಎಂದು ನೊಂದು ರಾಜೀನಾಮೆ ಬಗ್ಗೆ ಹೇಳಿದ್ದೆ. ಆದರೆ, ಕ್ಷೇತ್ರದ ಜನ ರಾಜೀನಾಮೆ ನೀಡಬೇಡಿ, 10 ಸಾವಿರ ಜನರೊಂದಿಗೆ ವಿಧಾನಸೌಧದ ಎದುರು ಧರಣಿ ನಡೆಸೋಣ ಎಂದು ಹೇಳಿದ್ದಾರೆ. ಆದರೆ, ನಾನೇ ಸಮರ್ಥನಿದ್ದೇನೆ, ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಮಾಧಾನ ಮಾಡಿದ್ದೇನೆ‘ ಎಂದರು.

ಅಧಿಕಾರಿಗಳೇ ಮುಖ್ಯವಾಗಿದ್ದಾರೆ:‘ಸರ್ಕಾರದ ಕುರಿತು ಬಹಿರಂಗವಾಗಿ ಮಾತನಾಡಬೇಡಿ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ನನಗೆ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ಅವಮಾನ ಮಾಡಿದ್ದರು. ಆ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪಿಸಿ ಹಕ್ಕುಚ್ಯುತಿ ತಂದಿದ್ದೆ. ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿ, 60 ಮಂದಿ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೆವು. ಆದರೂ, ಈವರೆಗೆ ಕ್ರಮವಾಗಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಅವರಿಗೆ ಅಧಿಕಾರಿ ಮುಖ್ಯವೇ? ಶಾಸಕರು ಮುಖ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮಗೆ ಮಾನ, ಮರ್ಯಾದೆ ಇಲ್ಲವೇ?’ ಎಂದು ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದರು.