ಡಿಕೆಶಿ ಸಂಯಮದ ನುಡಿ : ಸಿದ್ದು ‘ಅಧಿಕಾರ ಹಂಚಿಕೆ ಇಲ್ಲ’ ಹೇಳಿಕೆಗೆ ತಿರುಗೇಟು, ಪ್ರತ್ಯುತ್ತರ ಇಲ್ಲ!

| N/A | Published : Jul 12 2025, 01:48 AM IST / Updated: Jul 12 2025, 05:46 AM IST

ಡಿಕೆಶಿ ಸಂಯಮದ ನುಡಿ : ಸಿದ್ದು ‘ಅಧಿಕಾರ ಹಂಚಿಕೆ ಇಲ್ಲ’ ಹೇಳಿಕೆಗೆ ತಿರುಗೇಟು, ಪ್ರತ್ಯುತ್ತರ ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆ, ಜವಾಬ್ದಾರಿ ನೀಡಿದೆ. ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಉಳಿದ ಯಾವ ವಿಚಾರಗಳಿಗೂ ನಾನು ಪ್ರತಿಕ್ರಿಯಿಸಲ್ಲ. ನನ್ನ ಗಮನವೇನಿದ್ದರೂ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಕಾಪಾಡುವುದರ ಕಡೆಗಿದೆ.

  ಬೆಂಗಳೂರು :  ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆ, ಜವಾಬ್ದಾರಿ ನೀಡಿದೆ. ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಉಳಿದ ಯಾವ ವಿಚಾರಗಳಿಗೂ ನಾನು ಪ್ರತಿಕ್ರಿಯಿಸಲ್ಲ. ನನ್ನ ಗಮನವೇನಿದ್ದರೂ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಕಾಪಾಡುವುದರ ಕಡೆಗಿದೆ.

ಅಧಿಕಾರ ಹಂಚಿಕೆ ಒಪ್ಪಂದವಾಗಿಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಘಂಟಾಘೋಷದ ನುಡಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಯಮದ ಪ್ರತಿಕ್ರಿಯೆಯಿದು.

ಯಾವ ವಿಚಾರವಾದರೂ ಕಡ್ಡಿ ಮುರಿದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಸೇರಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅತ್ಯಂತ ಹಿಡಿತದ ಪ್ರತಿಕ್ರಿಯೆ ನೀಡಿದರು. ಜತೆಗೆ, ಪಕ್ಷ ಇದ್ದರಷ್ಟೇ ನಾನು. ಪಕ್ಷ ಇಲ್ಲದಿದ್ದರೆ ನಾನಿಲ್ಲ ಎಂದು ನುಡಿದರು.

ಅಲ್ಲದೆ, ತಾವು ಮುಖ್ಯಮಂತ್ರಿಯಾಗಬೇಕು ಎಂದು ಯಾರೂ ಹೇಳಿಕೆ ನೀಡುವ ಅವಶ್ಯಕತೆಯಿಲ್ಲ ಎಂದು ದೃಢವಾಗಿ ತಿಳಿಸಿದರು.

ಇನ್ನು ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲು ಶಿವಕುಮಾರ್‌ ನಿರಾಕರಿಸಿದರು. ಶುಕ್ರವಾರ ಒಂದೇ ದಿನ ನಾಲ್ಕೈದು ಬಾರಿ ಮಾಧ್ಯಮಗಳಿಗೆ ಬೇರೆ ಬೇರೆ ವಿಚಾರಗಳಿಗೆ ಪ್ರತಿಕ್ರಿಯಿಸಿದರೂ, ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಯವಾಗಿಯೇ ತಿರಸ್ಕರಿಸಿದರು.

‘ಮಾಧ್ಯಮದವರು ಹೇಗೆ ತಿರುಗಿಸಿ ಕೇಳಿದರೂ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಮಾಧ್ಯಮಗಳ ಪ್ರಶ್ನೆಗೆ ಬಲಿಯಾಗುವುದಿಲ್ಲ. ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಜವಾಬ್ದಾರಿ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಧೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷದಿಂದ ಸ್ವೀಕರಿಸಿದ್ದೇವೆ. ಪಕ್ಷ ಸಂಘಟನೆಯತ್ತ ಹೆಚ್ಚಿನ ಗಮನಹರಿಸಿದ್ದೇನೆ. ಅವುಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.

ಸಿಎಂ ಹೇಳಿಕೆ ಚರ್ಚಿಸಲ್ಲ:

ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕ ಬೆಂಬಲ ಕಡಿಮೆಯಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೂ ನಯವಾಗಿಯೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ, ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ನೋಡಿದ್ದೇನೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಅದನ್ನು ಚರ್ಚೆ ಮಾಡುವುದು ಸೂಕ್ತವಲ್ಲ. ಮಾಧ್ಯಮದವರೂ ಮತ್ತೆ ಆ ವಿಚಾರವಾಗಿ ನನ್ನಲ್ಲಿ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನಮ್ಮ ವಿಚಾರದಲ್ಲಿ ಮಾಧ್ಯಮಗಳು ಏತಕ್ಕಾಗಿ ಗಾಬರಿಯಾಗುತ್ತಿವೆ ಎಂಬುದು ತಿಳಿದಿಲ್ಲ. ಆದರೆ, ನಾವು ಯಾವುದೇ ವಿಚಾರದಲ್ಲೂ ಗಾಬರಿಯಾಗುತ್ತಿಲ್ಲ. ಮಾಧ್ಯಮಗಳಿಗೆ ಸದ್ದು ಬೇಕಿದೆ, ಅದಕ್ಕಾಗಿ ಸದ್ದು ಮಾಡುತ್ತಿದ್ದೀರಿ. ಆದರೆ, ನಮ್ಮಲ್ಲಿ ಯಾವುದೂ ಸದ್ದಿಲ್ಲ ಎಂದು ನಗುತ್ತಲೇ ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂಬ ಆಸೆ ಹಲವರಲ್ಲಿದೆ ಎಂಬ ಪ್ರಶ್ನೆಗೆ, ನಿಮ್ಮಲ್ಲೂ (ಮಾಧ್ಯಮದವರಲ್ಲಿ) ಅನೇಕರಿಗೆ ಅನೇಕ ಆಸೆಗಳಿರುತ್ತವೆ. ಯಾವುದೇ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಅದರ ಅವಶ್ಯಕತೆಯೂ ನನಗಿಲ್ಲ. ಯಾರು ಏನೇನು ಮಾತನಾಡಿದ್ದಾರೆ, ಅವರೇ ಪ್ರಶ್ನೆ ಕೇಳಿ ಅವರೇ ಉತ್ತರವನ್ನೂ ನೀಡಿದ್ದಾರೆ. ಸದ್ಯಕ್ಕೆ ನನ್ನಲ್ಲಿ ಯಾವುದೇ ಉತ್ತರವಿಲ್ಲ ಎಂದು ಹೇಳಿದರು.

2028ರ ನಾಯಕತ್ವ ಸಿಎಂ ವೈಯಕ್ತಿಕ ಹೇಳಿಕೆ:

2028ರ ಚುನಾವಣೆಗೂ ತಮ್ಮದೇ ನಾಯಕತ್ವ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಅದು ಮುಖ್ಯಮಂತ್ರಿ ಅವರ ವೈಯಕ್ತಿಕ ಹೇಳಿಕೆ. ಅದನ್ನು ಹೇಳುವ ಅಧಿಕಾರ ಅವರಿಗಿದೆ. ಆದರೆ, ಪಕ್ಷದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವುದು ನನ್ನ ಜವಾಬ್ದಾರಿ. ಪಕ್ಷ ಹಾಗೂ ಸರ್ಕಾರ ಹಿತ ಕಾಪಾಡುವುದು ನನ್ನ ಕೆಲಸ. ಅದನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಪಕ್ಷ ಇದ್ದರೆ ಮಾತ್ರ ನಾನು:

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಚಿವರ ಮಾತುಗಳಿಗೆ ಪ್ರತಿಕ್ರಿಯಿಸಿ, ನಾನು ಪಕ್ಷದ ಅಧ್ಯಕ್ಷನಾಗಿ ಶುಕ್ರವಾರವೂ ಮಾಜಿ ಸಚಿವೆಯೊಬ್ಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ. ಇನ್ನು, ನಾನು ಪಕ್ಷದ ವಕ್ತಾರನೇ ಹೊರತು, ಬೇರೆ ಯಾವುದೇ ವ್ಯಕ್ತಿಯ ವಕ್ತಾರನಲ್ಲ. ಆ ವಿಚಾರಗಳನ್ನು ಯಾರು ಮಾತನಾಡುತ್ತಾರೋ ಅವರನ್ನೇ ಕೇಳಿ. ಪಕ್ಷ ಇದ್ದರಷ್ಟೇ ನಾನು. ಪಕ್ಷ ಇಲ್ಲದಿದ್ದರೆ ನಾನಿಲ್ಲ ಎಂದರು.

Read more Articles on