ಬೆಂಗಳೂರು : ವೈದ್ಯಕೀಯ ಸೀಟು ಕೊಡಿಸೋದಾಗಿ 8 ವಿದ್ಯಾರ್ಥಿಗೆ ₹6.38 ಕೋಟಿ ವಂಚನೆ

KannadaprabhaNewsNetwork |  
Published : Oct 29, 2024, 01:49 AM ISTUpdated : Oct 29, 2024, 05:25 AM IST
Money Horoscope

ಸಾರಾಂಶ

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ಬರೋಬ್ಬರಿ ₹6.38 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆಯೊಬ್ಬಳ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು : ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ಬರೋಬ್ಬರಿ ₹6.38 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆಯೊಬ್ಬಳ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವೈಟ್‌ಫೀಲ್ಡ್‌ ನಿವಾಸಿ ದೀಪ್ತಿ ಕೆ.ಸಿಂಹ ಎಂಬುವವರು ನೀಡಿದ ದೂರಿನ ಮೇರೆಗೆ ಚೆನ್ನೈ ಮೂಲದ ಅನ್ನಾ ಜೇಕಬ್‌ ಎಂಬಾಕೆ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ: ದೂರುದಾರರಾದ ದೀಪ್ತಿ ಅವರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸದ್ಯ ಮನೆ ಪಾಠ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವಸುಂಧರ ಎಂಬುವವರ ಮುಖಾಂತರ ಅನ್ನಾ ಜೇಕಬ್‌ ಪರಿಚಯವಾಗಿದೆ. ಈ ವೇಳೆ ಅನ್ನಾ ಜೇಕಬ್‌, ತಾನು ಕೋರಮಂಗಲದ ಸೇಂಟ್‌ ಜಾನ್ ಮೆಡಿಕಲ್ ಕಾಲೇಜು ಹಾಗೂ ವೆಲ್ಲೂರಿನ ಸಿಎಂಸಿ ಮೆಡಿಕಲ್ ಕಾಲೇಜುಗಳಲ್ಲಿ ಟ್ರಸ್ಟಿ ಆಗಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಈ ಎರಡೂ ಕಾಲೇಜುಗಳಲ್ಲಿ ಎಂಬಿಬಿಎಸ್‌ ಮತ್ತು ಎಂಡಿ ಮ್ಯಾನೇಜ್‌ಮೆಂಟ್‌ ಸೀಟುಗಳು ಖಾಲಿ ಇದ್ದು, ಕೊಡಿಸುವುದಾಗಿ ಹೇಳಿದ್ದಾರೆ. ಯಾರಿಗಾದರೂ ಸೀಟುಗಳು ಬೇಕಿದ್ದಲ್ಲಿ ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಬಳಿಕ ದೀಪ್ತಿ ಅವರು ಈ ವಿಚಾರವನ್ನು ಕೆಲ ಪರಿಚಿತ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಎಂಟು ವಿದ್ಯಾರ್ಥಿಗಳ ಪೋಷಕರು ನಗರದ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಆರೋಪಿ ಅನ್ನಾ ಜೇಕಬ್‌ಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಣ ಕೊಟ್ಟರೆ ಸೀಟು ಕೊಡಿಸುವುದಾಗಿ ಅನ್ನಾ ಜೇಕಬ್‌ ಭರವಸೆ ನೀಡಿದ್ದಾರೆ.

ಬಳಿಕ ಐದು ವಿದ್ಯಾರ್ಥಿಗಳ ಪೋಷಕರು ದೀಪ್ತಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆ ಹಣವನ್ನು ದೀಪ್ತಿ ಅವರು ಚೆನ್ನೈನ ಬ್ಯಾಂಕ್‌ವೊಂದರ ಆರೋಪಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳ ಪೋಷಕರು ನೇರವಾಗಿ ಅನ್ನಾ ಜೇಕಬ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಒಟ್ಟು 8 ಮಂದಿಯಿಂದ ₹6.38 ಕೋಟಿ ಹಣ ಪಡೆದಿರುವ ಆರೋಪಿ ಅನ್ನಾ ಜೇಕಬ್‌ ಯಾವುದೇ ಸೀಟು ಕೊಡಿಸದೆ ವಂಚಿಸಿದ್ದಾರೆ. ಈ ಸಂಬಂಧ ದೀಪ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಸ್ಪತ್ರೆಯ ಬಟ್ಟೆ ಬದಲಿಸುವ ಮಹಿಳೆ ದೃಶ್ಯ ಸೆರೆ ಹಿಡಿದ ಸಿಬ್ಬಂದಿ ಬಂಧನ
ಹನಿಮೂನ್‌ ಅರ್ಧಕ್ಕೆ ಬಿಟ್ಟು ಬಂದು ಆತ್ಮಹತ್ಯೆ ಯತ್ನಿಸಿದಳು: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ