ಕಾರು ಡಿಕ್ಕಿ ವಿಚಾರಕ್ಕೆ ಪಬ್‌ ಬೌನ್ಸರ್‌ನಿಂದ ಗಲಾಟೆ

KannadaprabhaNewsNetwork |  
Published : Aug 21, 2024, 12:40 AM IST
ROAD 1 | Kannada Prabha

ಸಾರಾಂಶ

ರಸ್ತೆಯಲ್ಲಿ ದಿಢೀರನೇ ಬ್ರೇಕ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ನಿರ್ಲಕ್ಷ್ಯಿಸಿದರು ಎಂದು ಸಿಟ್ಟಿಗೆದ್ದು ಸಾಫ್ಟ್‌ವೇರ್ ಉದ್ಯೋಗಿ ದಂಪತಿ ಕಾರನ್ನು ಅಡ್ಡಗಟ್ಟಿ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಪಬ್ ಬೌನ್ಸರ್‌ವೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯಲ್ಲಿ ದಿಢೀರನೇ ಬ್ರೇಕ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ನಿರ್ಲಕ್ಷ್ಯಿಸಿದರು ಎಂದು ಸಿಟ್ಟಿಗೆದ್ದು ಸಾಫ್ಟ್‌ವೇರ್ ಉದ್ಯೋಗಿ ದಂಪತಿ ಕಾರನ್ನು ಅಡ್ಡಗಟ್ಟಿ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಪಬ್ ಬೌನ್ಸರ್‌ವೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬೆಳ್ಳಂದೂರು ನಿವಾಸಿ ನವೀನ್ ರೆಡ್ಡಿ ಬಂಧಿತನಾಗಿದ್ದು, ಸರ್ಜಾಪುರ ರಸ್ತೆಯ ಮೇಲ್ಸೇತುವೆ ಬಳಿ ಸೋಮವಾರ ರಾತ್ರಿ ರೆಡ್ಡಿ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಗಲಾಟೆ ನಡೆದಿದೆ. ತಮ್ಮ ಕಾರಿನ ಮೇಲೆ ರೆಡ್ಡಿ ಹಲ್ಲೆ ನಡೆಸಿದ್ದ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿ ನಗರ ಪೊಲೀಸ್ ಆಯುಕ್ತರಿಗೆ ಸಾಫ್ಟ್‌ವೇರ್ ಉದ್ಯೋಗಿ ಜಿತಿನ್ ದೂರು ನೀಡಿದ್ದರು. ಈ ಗಲಾಟೆ ವಿಡಿಯೋ ವೈರಲ್ ಆಗಿ ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬೈಕ್‌ ಬಿದ್ದರು ಕೇಳದ ಟೆಕ್ಕಿ

ಸರ್ಜಾಪುರ ಮೇಲ್ಸೇತುವೆ ಇಳಿಯುವಾಗ ದಿಢೀರನೇ ತಮ್ಮ ಕಾರಿಗೆ ಜಿತಿನ್ ರಾಜ್‌ ಬ್ರೇಕ್ ಹಾಕಿದ್ದಾರೆ. ಆ ವೇಳೆ ಕಾರಿನ ಹಿಂದೆ ಬರುತ್ತಿದ್ದ ಕಂಗಾಲಾಗಿ ನವೀನ್ ರೆಡ್ಡಿ, ಟೆಕ್ಕಿ ಕಾರಿಗೆ ಬೈಕ್ ಗುದ್ದಿಸಿ ಕೆಳಗೆ ಬಿದ್ದಿದ್ದಾನೆ. ಆದರೆ ಕೆಳಗೆ ಬಿದ್ದರು ವಿಚಾರಿಸದೆ ಜಿತಿನ್ ಮುಂದುವರೆದಿದ್ದಾರೆ. ತಕ್ಷಣವೇ ಬೈಕ್ ಅನ್ನು ಓಡಿಸಿಕೊಂಡು ಕಾರಿನ ಮುಂದೆ ಬಂದ ನವೀನ್‌, ಕಾರು ನಿಲ್ಲಿಸುವಂತೆ ಸೂಚಿಸಿದ್ದಾನೆ. ಆದರೆ ಈ ಮಾತಿಗೆ ಕ್ಯಾರೇ ಎನ್ನದೆ ಕಾರು ಚಾಲಾಯಿಸಲು ಜಿತಿನ್ ಮುಂದಾಗಿದ್ದಾರೆ. ಈ ನಿರ್ಲಕ್ಷ್ಯತನ ವರ್ತನೆಯಿಂದ ಕೆರಳಿದ ನವೀನ್‌, ತಕ್ಷಣವೇ ಕಾರಿನ ವೈಫರ್‌ ಕಿತ್ತು ಹಾಕಿ ಗಲಾಟೆ ಮಾಡಿದ್ದಾನೆ. ಈ ದುಂಡಾವರ್ತನೆಗೆ ಭಯಗೊಂಡ ಜಿತಿನ್‌ ರಾಜ್‌ ದಂಪತಿ, ಕಾರಿನಲ್ಲಿ ಮಗುವಿದೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಕೊನೆಗೆ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆ ವಿಡಿಯೋವನ್ನು ‘ಎಕ್ಸ್‌’ ತಾಣದಲ್ಲಿ ಹಂಚಿಕೊಂಡು ನಗರ ಪೊಲೀಸ್ ಆಯುಕ್ತರಿಗೆ ಜಿತಿನ್ ದೂರು ಕೊಟ್ಟಿದ್ದರು. ಇನ್ನು ಕೋರಮಂಗಲದ ಪಬ್‌ನಲ್ಲಿ ಆರೋಪಿ ನವೀನ್ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರ ಜಿತಿನ್ ದಂಪತಿ ಮೂಲತಃ ಒಡಿಶಾ ರಾಜ್ಯದವರಾಗಿದ್ದು, ನಗರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಹರಳೂರು ರಸ್ತೆಯಲ್ಲಿ ದಂಪತಿ ನೆಲೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ