ಯಾದಗಿರಿ/ದಾವಣಗೆರೆ: ಫೇಸ್ಬುಕ್ನಲ್ಲಿ ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಅತ್ತೆ-ಮಾವ ಮೂವರನ್ನು ಬರ್ಬರವಾಗಿ ಕೊಂದು ಹಾಕಿದ ಪೈಶಾಚಿಕ ಕೃತ್ಯ ಯಾದಗಿರಿ ಸಮೀಪದ ಸೈದಾಪುರದಲ್ಲಿ ನಡೆದಿದೆ.
ದಾವಣಗೆರೆ ನಿವಾಸಿ ಬಸವರಾಜಪ್ಪ ಅಲಿಯಾಸ್ ಬಸಪ್ಪ (61), ಪತ್ನಿ ಕವಿತಾ (57) ಹಾಗೂ ಪುತ್ರಿ ಅನ್ನಪೂರ್ಣ (30) ಹತ್ಯೆಯಾದ ದುರ್ದೈವಿಗಳು. ಮೃತ ಅನ್ನಪೂರ್ಣ ಅವರ ಪತಿ ನವೀನ್ ಹಾಗೂ ಆತನ ತಂದೆ ದೇವಿಂದ್ರಪ್ಪ (ನಿವೃತ್ತ ಶಿಕ್ಷಕ) ಅವರನ್ನು ಸೈದಾಪುರ ಪೊಲೀಸರು ಗುರುವಾರ ಬಂಧಿಸಿದ್ದು, ಒಂದೂವರೆ ವರ್ಷದ ಮಗುವನ್ನು ರಕ್ಷಿಸಿದ್ದಾರೆ.ಸೈದಾಪುರದ ನವೀನ್ ಹಾಗೂ ದಾವಣಗೆರೆಯ ಅನ್ನಪೂರ್ಣ ಫೇಸ್ಬುಕ್ ಮೂಲಕ ಪ್ರೀತಿಸಿ ಮದುವೆಯಾಗಿದ್ದರು. ಕಳೆದ 1 ವರ್ಷದಿಂದ ದಂಪತಿ ನಡುವೆ ಬಿರುಕು ಮೂಡಿತ್ತು. ಮತ್ತೊಂದು ಮದುವೆಯಾಗಲು ಮುಂದಾಗಿದ್ದ ನವೀನ್ ವಿಚ್ಛೇದನ ನೀಡುವಂತೆ ಅನ್ನಪೂರ್ಣಗೆ ಒತ್ತಾಯಿಸಿದ್ದ. ಈ ಬಗ್ಗೆ ರಾಜಿ ಪಂಚಾಯಿತಿ ಮಾಡಲು ಮೂವರನ್ನು ಸೋಮವಾರ ನವೀನ್ ಕುಟುಂಬದವರು ಕರೆಸಿಕೊಂಡಿದ್ದರು. ಆದರೆ, ಅವರನ್ನು ಮುನುಗಲ್ನ ಮನೆಗೆ ಕರೆದುಕೊಂಡು ಹೋಗದ ಸೈದಾಪುರದ ಲಾಡ್ಜ್ನಲ್ಲಿ ವಸತಿ ಮಾಡಿಸಲಾಗಿತ್ತು.