;Resize=(412,232))
ಬೆಂಗಳೂರು : ಅತ್ಯಾ*ರ ಪ್ರಕರಣದ ಕೈದಿ ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರಾಗೃಹದಲ್ಲಿ ಸುಮಾರು ಐದು ತಾಸು ಭದ್ರತಾ ವ್ಯವಸ್ಥೆ ತಪಾಸಣೆ ನಡೆಸಿದ ಡಿಜಿಪಿ ಅವರು, ಇಷ್ಟೆಲ್ಲ ಜಾಗ್ರತೆ ವಹಿಸಿದರೂ ಪ್ರಜ್ವಲ್ ರೇವಣ್ಣ ಸೆಲ್ಗೆ ಮೊಬೈಲ್ ಹೇಗೆ ಪೂರೈಕೆಯಾಗಿದೆ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಸಮಾಜದಲ್ಲಿ ಕಾರಾಗೃಹ ಇಲಾಖೆಯ ಗೌರವ ಹೆಚ್ಚಿಸಲು ಕೆಲವರು (ಅಧಿಕಾರಿ-ಸಿಬ್ಬಂದಿ) ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಇಲಾಖೆಯ ಮರ್ಯಾದೆ ಕಳೆಯುವ ಕೃತ್ಯದಲ್ಲಿ ಕೆಲವರು ನಿರತರಾಗಿದ್ದಾರೆ. ಇದೇ ರೀತಿ ಕರ್ತವ್ಯಲೋಪ ಕಂಡು ಬಂದರೆ ಅಮಾನತ್ತುಗಿಂತ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ನಂತರ ನಟ ದರ್ಶನ್, ಪ್ರಜ್ವಲ್ ರೇವಣ್ಣ ಸೇರಿದಂತೆ ಇತರೆ ಕೈದಿಗಳಿರುವ ಎಲ್ಲ ಬ್ಯಾರೆಕ್ಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮೊಬೈಲ್ ಬಳಕೆ ಬಗ್ಗೆ ಮಾಜಿ ಸಂಸದ ಪ್ರಜ್ವಲ್ ಅವರಿಗೆ ಡಿಜಿಪಿ ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಮಾಡುವ ತಪ್ಪು ನಮಗಿಂತ ನಿಮಗೆ ಕಾನೂನಾತ್ಮಕವಾಗಿ ಸಮಸ್ಯೆಯಾಗಲಿದೆ. ಕಾನೂನು ಚೌಕಟ್ಟು ಮೀರುವ ಪ್ರಯತ್ನ ಮಾಡಬೇಡಿ ಎಂದು ಡಿಜಿಪಿ ತಾಕೀತು ಮಾಡಿದ್ದಾರೆ. ಆದರೆ ತಮ್ಮ ಮೇಲಿನ ಆರೋಪದ ಬಗ್ಗೆ ತುಟಿ ಬಿಚ್ಚದೆ ಪ್ರಜ್ವಲ್ ಅವರು ಡಿಜಿಪಿ ಮುಂದೆ ಕೈ ಕಟ್ಟಿಕೊಂಡು ನಿಂತಿದ್ದರು ಎನ್ನಲಾಗಿದೆ.