ಭಿಕ್ಷಾಟನೆಗೆ ಮಗು ಅಪಹರಣ ಆರೋಪ: ಭಿಕ್ಷುಕಿಗೆ ಜಾಮೀನು

KannadaprabhaNewsNetwork |  
Published : Dec 03, 2025, 02:00 AM IST
ಭಿಕ್ಷಾಟನೆಗೆ ಮಗು ಅಪಹರಣ ಆರೋಪ: ಭಿಕ್ಷುಕಿಗೆ ಜಾಮೀನು | Kannada Prabha

ಸಾರಾಂಶ

ಭಿಕ್ಷಾಟನೆಗೆ ದೂಡಲು ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಒಂದು ವರ್ಷದಿಂದ ಜೈಲಿನಲ್ಲಿದ್ದ ಭಿಕ್ಷುಕಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಿಕ್ಷಾಟನೆಗೆ ದೂಡಲು ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಒಂದು ವರ್ಷದಿಂದ ಜೈಲಿನಲ್ಲಿದ್ದ ಭಿಕ್ಷುಕಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ರಾಧಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣ ಸಂಬಂಧ ಮಗುವಿನ ಅಜ್ಜಿ ಸರೋಜಮ್ಮ ಚಾಮರಾಜನಗರ ಟೌನ್‌ ಪೊಲೀಸ್‌ ಠಾಣೆಗೆ 2024ರ ನ.14ರಂದು ನಾಪತ್ತೆ ದೂರು ನೀಡಿದ್ದರು. ತನ್ನ ಮಗಳು ಅನಿತಾ ಎರಡು ವರ್ಷದ ಹೆಣ್ಣುಮಗುವಿನೊಂದಿಗೆ 2024ರ ನ.8ರಂದು ಕಾಣೆಯಾಗಿದ್ದಾರೆ. ಅನಿತಾ ಮಾನಸಿಕವಾಗಿ ಅಸ್ವಸ್ಥಳು. ನ.15ರಂದು ಅನಿತಾ ಪತ್ತೆಯಾಗಿದ್ದು, ಭಿಕ್ಷಾಟನೆಗಾಗಿ ತನ್ನ ಮಗುವನ್ನು ಮಹಿಳೆಯೊಬ್ಬರು ಕೊಂಡೊಯ್ದಿದ್ದು, ವಾಪಸ್‌ ಕೊಟ್ಟಿಲ್ಲವೆಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಮಹಿಳೆ 2024ರ ನ.19ರಿಂದ ಜೈಲಿನಲ್ಲಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಹೆಚ್ಚಿನ ತನಿಖೆ ಅಗತ್ಯವಿಲ್ಲ. ಹಾಗಾಗಿ ಜಾಮೀನು ನೀಡಬಹುದಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರೆ ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲರು, ರಾಧಾ ಮಗುವನ್ನು ಅಪಹರಿಸಿಲ್ಲ. ಬದಲಾಗಿ ಮಾನಸಿಕವಾಗಿ ಅಸ್ವಸ್ಥಳಾಗಿರುವ ಮಗುವಿನ ತಾಯಿಯೇ ಮಗುವನ್ನು ಅರ್ಜಿದಾರೆಗೆ ನೀಡಿದ್ದಾರೆ. ಈಗಾಗಲೇ ಪೊಲೀಸರು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮುಂದಿನ ತನಿಖೆಗೆ ಆಕೆಯ ಬಂಧನ ಅಗತ್ಯವಿಲ್ಲದ ಕಾರಣ ಪರಿಗಣಿಸಿ ಜಾಮೀನು ನೀಡಬೇಕು ಎಂದು ಕೋರಿದ್ದರು.

ಈ ಮನವಿ ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಭಿಕ್ಷಾಟನೆಗೆ ದೂಡಲು ಮಗುವನ್ನು ತಾಯಿಯಿಂದ ಅರ್ಜಿದಾರೆ ಅಪಹರಿಸಿದ್ದಾರೆ. 2024ರ ನ.19ರಂದು ಮಗುವಿನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾರೆ. ಆಕೆ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಧಾರಗಳು ಮೇಲ್ನೋಟಕ್ಕೆ ಲಭ್ಯವಿದೆ. ಜಾಮೀನು ನೀಡಿದರೆ, ಆಕೆ ತಲೆಮರೆಸಿಕೊಳ್ಳುವ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಲಭ್ಯವಾಗದ ಸಾಧ್ಯತೆಯಿದ್ದು, ಜಾಮೀನು ನೀಡಬಾರದು ಎಂದು ಕೋರಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಗ್ರಾಹಕಗೆ ಬ್ಲ್ಯಾಕ್ಮೇಲ್‌ ಆರೋಪ ಸಂಬಂಧ ರಾಮೇಶ್ವರಂ ಕೆಫೆ ಮಾಲಿಕರ ವಿರುದ್ಧ ಎಫ್‌ಐಆರ್‌
ಜೈಲಲ್ಲಿ ಬೀಡಿ, ಸಿಗರೇಟ್‌ ಕಟ್‌: ಊಟ ಬಿಟ್‌ ಕೈದಿಗಳ ಆಕ್ರೋಶ