ಶ್ರೀರಂಗಪಟ್ಟಣ : ತಾಲೂಕಿನ ಮಂಡ್ಯದಕೊಪ್ಪಲು ಗ್ರಾಮದ ಹೊರವಲಯದ ಶ್ರೀಕಾವೇರಿ ಬೋರೇದೇವರ ದೇವಾಲಯ ಬಳಿ ನೀರಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರು ಶವಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಕಾರಿಯಾಗಿದ್ದ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.
ಮೈಸೂರಿನ ಉದಯಗಿರಿಯ ಹಜಿರ ನಿಶ್ವಾನ್ ಅರೇಬಿಕ್ ಶಾಲೆಯ ಹನಿ (14), ಅಫ್ರಿನ್ (13), ಜಾನಿಯಾ ತರ್ವೀನ್ (13) ಎಂಬ ಬಾಲಕಿಯರ ಶವಗಳು ಪತ್ತೆಯಾಗಿವೆ.
ರಾಮಸ್ವಾಮಿ ಅಣೆಕಟ್ಟೆ ನಾಲೆಯಲ್ಲಿ ಶನಿವಾರ ಸಂಜೆ ನೀರಲ್ಲಿ 6 ಮಂದಿ ಕೊಚ್ಚಿ ಹೋಗಿದ್ದರು. ಇದರಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿತ್ತು. ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವಿದ್ಯಾರ್ಥಿ ಸೇರಿದಂತೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದರು.
ಉಳಿದ ಮೂವರು ಕೊಚ್ಚಿ ಹೋಗಿದ್ದರು. ಭಾನುವಾರ ಮೃತರ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಕಾರ್ಯಚರಣೆ ನಡೆಸಿದ್ದರು. ಹನಿ ಎಂಬ ಬಾಲಕಿಯ ಶವ ಘಟನಾ ಸ್ಥಳದ ಬಳಿಯೇ ದೊರೆತ್ತಿತ್ತು. ಅಫ್ರಿನ್ ಹಾಗೂ ತರ್ವೀನ್ ಶವಗಳು ಟಿ.ನರಸೀಪುರದ ಬಳಿ ದೊರೆತಿವೆ.
ಮೈಸೂರಿನಿಂದ ಅರೇಬಿಕ್ ಶಾಲೆಯ ನಾಲ್ವರು ಗಂಡು ಮಕ್ಕಳು ಸೇರಿ ಒಟ್ಟು 15 ಮಕ್ಕಳು ಟಾಟಾ ಎಸ್ ನಲ್ಲಿ ಮಂಡ್ಯದಕೊಪ್ಪಲು ಬಳಿಯ ರಾಮಸ್ವಾಮಿ ಅಣೆಕಟ್ಟೆಯ ನಾಲೆ ಬಳಿ ಬಂದು ತಮ್ಮ ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದು ಒಣಗಲು ಹಾಕಿದ್ದರು.
ನಂತರ ಎಲ್ಲರೂ ಮೈಸೂರಿಗೆ ಮತ್ತೆ ಹೊರಡುವ ವೇಳೆ ಅಣೆಕಟ್ಟೆ ಬಳಿ ಬಟ್ಟೆ, ಪಾತ್ರೆಗಳನ್ನು ತರಲು ಹೋದ ಓರ್ವ ವಿದ್ಯಾರ್ಥಿ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಇದನ್ನು ನೋಡಿದ ಇತರೆ ವಿದ್ಯಾರ್ಥಿನಿಯರು ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಸೇರಿ ಒಟ್ಟು ಆರು ಮಂದಿ ನಾಲೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದರು.
ಇದರಲ್ಲಿ ಶನಿವಾರ ಸಂಜೆಯೇ ಸ್ಥಳೀಯರು ಮೂವರನ್ನು ನೀರಿನಿಂದ ರಕ್ಷಣೆ ಮಾಡಿ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದರು. ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವಿದ್ಯಾರ್ಥಿ ಸೇರಿದಂತೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿಯಿಂದಲೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡು ಭಾನುವಾರ ಮುಂದುವರೆಸಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಶವಗಳನ್ನು ಹುಡುಕಿದ್ದಾರೆ.
ಕಾವೇರಿ ಬೋರೇ ದೇವರ ದೇವಾಲಯ ಬಳಿಯ ರಾಮಸ್ವಾಮಿ ಅಣೆಕಟ್ಟೆ ಬಳಿ ನಾಲೆಯಲ್ಲಿ ವಿದ್ಯಾರ್ಥಿನಿಯರು ನೀರಲ್ಲಿ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭಾನುವಾರ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಎಎಸ್ಪಿ ಸಿ.ಇ.ತಿಮ್ಮಯ್ಯ ಭೇಟಿ ಕೊಟ್ಟಿ ಸ್ಥಳ ಪರಿಶೀಲಿಸಿ ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಮಳವಳ್ಳಿ: ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ನೆಲ್ಲೂರು ಗ್ರಾಮದ ವಾಸಿ ನಂದೀಶ್ (40) ಮೃತ ವ್ಯಕ್ತಿ. ಭಾನುವಾರ ಮಧ್ಯಾಹ್ನ ನಂದೀಶ್ ತಮ್ಮ ಬೈಕ್ನಲ್ಲಿ ನೆಲ್ಲೂರಿಗೆ ಹೋಗುತ್ತಿದ್ದ ವೇಳೆ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ತೀವ್ರ ಗಾಯವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.