ಮಂಡ್ಯ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ...!

KannadaprabhaNewsNetwork |  
Published : Feb 17, 2026, 01:30 AM IST
೧೬ಕೆಎಂಎನ್‌ಡಿ-೩ಬಾಂಬ್ ಬೆದರಿಕೆ ಸಂದೇಶದಿಂದ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ.  | Kannada Prabha

ಸಾರಾಂಶ

ಮಂಡ್ಯ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ, ವಕೀಲರು, ನ್ಯಾಯಾಧೀಶರು, ಕಕ್ಷಿದಾರರಲ್ಲಿ ತೀವ್ರ ಆತಂಕ, ಬಾಂಬ್ ಬೆದರಿಕೆ ಸಂದೇಶ ಇರುವ ವಿಷಯ ತಿಳಿಸಿ ಕುರ್ಚಿಯಿಂದ ಎದ್ದು ಹೋದ ನ್ಯಾಯಾಧೀಶರು. ಗಲಿಬಿಲಿ, ಗೊಂದಲಕ್ಕೀಡಾದ ವಕೀಲರು, ವಿಷಯವೇನೆಂಬುದು ಆರಂಭದಲ್ಲಿ ತಿಳಿಯದೆ ಪೇಚಿಗೆ ಸಿಲುಕಿದ ಕಕ್ಷಿದಾರರು...!

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ, ವಕೀಲರು, ನ್ಯಾಯಾಧೀಶರು, ಕಕ್ಷಿದಾರರಲ್ಲಿ ತೀವ್ರ ಆತಂಕ, ಬಾಂಬ್ ಬೆದರಿಕೆ ಸಂದೇಶ ಇರುವ ವಿಷಯ ತಿಳಿಸಿ ಕುರ್ಚಿಯಿಂದ ಎದ್ದು ಹೋದ ನ್ಯಾಯಾಧೀಶರು. ಗಲಿಬಿಲಿ, ಗೊಂದಲಕ್ಕೀಡಾದ ವಕೀಲರು, ವಿಷಯವೇನೆಂಬುದು ಆರಂಭದಲ್ಲಿ ತಿಳಿಯದೆ ಪೇಚಿಗೆ ಸಿಲುಕಿದ ಕಕ್ಷಿದಾರರು. ಕಲವು ಗಂಟೆಗಳ ಕಾಲ ನ್ಯಾಯಾಲಯ ಸಂಕೀರ್ಣದಲ್ಲಿ ಆತಂಕದ ವಾತಾವರಣ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ಅಗ್ನಿಶಾಮಕ ಸಿಬ್ಬಂದಿ ಭೇಟಿ, ಪರಿಶೀಲನೆ. ನ್ಯಾಯಾಲಯದ ಕಲಾಪ ಸಂಪೂರ್ಣ ಸ್ಥಗಿತ. ಹುಸಿ ಬಾಂಬ್ ಬೆದರಿಕೆ ಎನ್ನುವುದು ಖಚಿತಪಟ್ಟ ನಂತರ ನಿರಾಳ ಸ್ಥಿತಿ..!

ಸೋಮವಾರ ಬೆಳಗ್ಗೆ ೧೦.೩೦ರ ಸಮಯಕ್ಕೆ ಎಂದಿನಂತೆ ವಕೀಲರು, ಕಕ್ಷಿದಾರರು ನ್ಯಾಯಾಲಯದ ಸಂಕೀರ್ಣಕ್ಕೆ ಆಗಮಿಸಿದ್ದರು. ೧೧ ಗಂಟೆ ಸಮಯಕ್ಕೆ ನ್ಯಾಯಾಧೀಶರೂ ಆಗಮಿಸಿ ತಮ್ಮ ಸ್ಥಾನದಲ್ಲಿ ಕುಳಿತರು. ಕಲಾಪ ಆರಂಭವಾದ ಸುಮಾರು ೧೧.೩೦ರ ವೇಳೆಗೆ ಬಾಂಬ್ ಬೆದರಿಕೆ ಸಂದೇಶ ನ್ಯಾಯಾಧೀಶರಿಗೆ ತಲುಪಿದೆ. ಕೂಡಲೇ ಅವರು ವಕೀಲರಿಗೆ ವಿಷಯ ತಿಳಿಸಿ ತಾವು ಕುಳಿತಿದ್ದ ಕುರ್ಚಿಯಿಂದ ಎದ್ದುಹೋದರು. ವಕೀಲರಲ್ಲಿ ಆತಂಕ ಮನೆ ಮಾಡಿತು. ಕಕ್ಷಿದಾರರಿಗೆ ಏನು ನಡೆಯುತ್ತಿದೆ ಎನ್ನುವುದು ತಿಳಿಯದೆ ಪೇಚಿಗೆ ಸಿಲುಕಿದರು. ವಕೀಲರು ಸೇರಿದಂತೆ ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು, ನೌಕರರು, ಸಿಬ್ಬಂದಿ ಎಲ್ಲರೂ ಕಚೇರಿಗಳಿಂದ ಭಯದಿಂದಲೇ ಹೊರಬರಲಾರಂಭಿಸಿದರು. ಆ ನಂತರದಲ್ಲಿ ವಿಷಯ ತಿಳಿದು ಜನರೂ ಸಹ ನ್ಯಾಯಾಲಯದ ಕಟ್ಟಡದಿಂದ ಕೆಳಗಿಳಿದು ಬಂದರು.

ನ್ಯಾಯಾಧೀಶರು, ವಕೀಲರು ನ್ಯಾಯಾಲಯದ ಆವರಣದಲ್ಲಿದ್ದ ತಮ್ಮ ಕಾರುಗಳು, ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೊರ ನಡೆದರು. ನ್ಯಾಯಾಲಯದ ಸಂಕೀರ್ಣದ ಒಳಗಿದ್ದವರೆಲ್ಲರೂ ಹೊರಗಡೆ ಧಾವಿಸಿ ಬಂದರು. ನ್ಯಾಯಾಲಯದ ಸಭಾಂಗಣಗಳು, ಕಚೇರಿಗಳೆಲ್ಲವೂ ಬಿಕೋ ಎನ್ನಲಾರಂಭಿಸಿದವು. ಇದೇ ವೇಳೆಗೆ ಪೊಲೀಸರು ನ್ಯಾಯಾಲಯದ ಆವರಣಕ್ಕೆ ಆಗಮಿಸಿದರು. ಯಾವುದೇ ತಳ್ಳಾಟ-ನೂಕಾಟಕ್ಕೆ ಅವಕಾಶವಾಗದಂತೆ ಕೋರ್ಟ್ ಆವರಣದಿಂದ ಸಾರ್ವಜನಿಕರನ್ನು ಹೊರಗೆ ಕಳುಹಿಸಿದರು. ನ್ಯಾಯಾಲಯದ ಕಲಾಪ ಸಂಪೂರ್ಣವಾಗಿ ಸ್ಥಗಿತಗೊಂಡಿತು.

ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆಗೆ ಮುಂದಾದರು. ಅಗ್ನಿಶಾಮಕ ವಾಹನದೊಂದಿಗೆ ಆಗಮಿಸಿದ ಸಿಬ್ಬಂದಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದರು. ನ್ಯಾಯಾಲಯದ ಸಂಕೀರ್ಣವನ್ನೆಲ್ಲಾ ಬಾಂಬ್ ನಿಷ್ಕ್ರೀಯದಳ, ಶ್ವಾನ ದಳ ಒಂದು ಗಂಟೆ ಕಾಲ ಜಾಲಾಡಿದರೂ ಎಲ್ಲಿಯೂ ಬಾಂಬ್ ಇರುವ ಬಗ್ಗೆ ಸಣ್ಣ ಕುರುಹೂ ಸಿಗಲಿಲ್ಲ. ಆನಂತರದಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಸಾಬೀತಾದ ಬಳಿಕ ಎಲ್ಲರೂ ನಿರಾಳರಾದರು. ಮಧ್ಯಾಹ್ನದ ನಂತರವೂ ಕಲಾಪ ಆರಂಭಗೊಳ್ಳದೆ ಸಂಪೂರ್ಣ ಸ್ಥಗಿತಗೊಂಡಿತ್ತು.ಮೊದಲ ಬಾಂಬ್ ಬೆದರಿಕೆ ಸಂದೇಶ

ಮಂಡ್ಯ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಇದೇ ಮೊದಲು. ಇದುವರೆಗೆ ಯಾವಾಗಲೂ ಇಂತಹ ಬಾಂಬ್ ಬೆದರಿಕೆ ಕರೆಯಾಗಲೀ, ಸಂದೇಶವಾಗಲೀ ಬಂದಿರಲಿಲ್ಲ. ಕೃಷ್ಣರಾಜಸಾಗರ ಅಣೆಕಟ್ಟೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದನ್ನು ಬಿಟ್ಟರೆ ನ್ಯಾಯಾಲಯಗಳಿಗೆ ಇಂತಹ ಸಂದೇಶಗಳು ಇದುವರೆಗೂ ಬಂದಿರಲಿಲ್ಲ. ಹಾಗಾಗಿ ಇಲ್ಲಿನ ನ್ಯಾಯಾಧೀಶರು, ವಕೀಲರು, ಕಕ್ಷಿದಾರರಿಗೆ ಇದೊಂದು ಹೊಸ ಅನುಭವವಾದಂತಾಗಿದೆ.

ನ್ಯಾಯಾಧೀಶರು, ವಕೀಲರನ್ನು ಹೆದರಿಸುವುದಕ್ಕಾಗಿ ಇಂತಹದೊಂದು ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ. ಸಮಾಜಘಾತುಕ ಶಕ್ತಿಗಳು ಕೆಲವೊಮ್ಮೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಇಂತಹ ಬೆದರಿಕೆ ಹಾಕುವುದು ಸಾಮಾನ್ಯ. ಇದಕ್ಕೆ ಯಾರೂ ಹೆದರುವ, ಆತಂಕಪಡುವ ಅಗತ್ಯವಿಲ್ಲ.

- ಟಿ.ಎಸ್.ಸತ್ಯಾನಂದ, ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ

ರಾಜ್ಯದ ಏಳೆಂಟು ನ್ಯಾಯಾಲಯಗಳಿಗೆ ಒಂದೇ ಮೇಲ್‌ನಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಅದೇ ಮೇಲ್‌ನಿಂದ ಮಂಡ್ಯ ನ್ಯಾಯಾಲಯಕ್ಕೂ ಬಂದಿದೆ. ಆ ಮೇಲ್ ವಿಳಾಸವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

- ಸಿ.ಈ.ತಿಮ್ಮಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ನ್ಯಾಯಾಧೀಶರಿಗೆ ಬಂದ ಇ-ಮೇಲ್‌ನಲ್ಲಿ ಏನಿತ್ತು?

’ನಿಮ್ಮ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ 12 ಆರ್‌ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದ್ದು, ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ. ತಮಿಳುನಾಡಿನಲ್ಲಿ ಇಡಬ್ಲ್ಯೂಎಸ್ ರಿಸರ್ವೇಶನ್ ಅನುಷ್ಠಾನವನ್ನು ತಡೆಯಿರಿ’

- ಈ ಸಂದೇಶ ಹೊತ್ತ ಇ-ಮೇಲ್‌ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೆ ಸುಮಾರು 11.30ರ ವೇಳೆಗೆ ಬಂದಿದೆ. ಇದರಿಂದ ಆತಂಕಗೊಂಡ ಜಿಲ್ಲಾ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಅವರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಜೊತೆಗೆ ಎಲ್ಲ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ತಕ್ಷಣವೇ ಕೊಠಡಿಯಿಂದ ಹೊರ ನಡೆಯುವಂತೆ ಸೂಚನೆ ನೀಡಿದ್ದಾರೆ.ಮದ್ದೂರು ನ್ಯಾಯಾಲಯದಲ್ಲೂ ತಪಾಸಣೆ

ಮದ್ದೂರು: ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಬಾಂಬ್ ನಿಷ್ಕ್ರಿಯದಳದ ತಂಡ ಪಟ್ಟಣದ ನ್ಯಾಯಾಲಯಕ್ಕೂ ಭೇಟಿ ನೀಡಿ ತಪಾಸಣೆ ನಡೆಸಿತು. ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ನ್ಯಾಯಾಲಯ ಗಳಲ್ಲಿ ನ್ಯಾಯಾಧೀಶರು, ಸಿಬ್ಬಂದಿಗಳು, ವಕೀಲರು, ಹಾಗೂ ಕಕ್ಷಿದಾರರನ್ನು ಹೊರಗೆ ಕಳುಹಿಸಿ ತಂಡ ತಪಾಸಣೆ ನಡೆಸಿತು. ನಂತರ ನ್ಯಾಯಾಲಯದ ಆವರಣದಲ್ಲಿರುವ ನ್ಯಾಯಾಧೀಶರ ಕಾರುಗಳ ನಿಲ್ದಾಣ, ದ್ವಿಚಕ್ರ ವಾಹನ ನಿಲ್ದಾಣ ಹಾಗೂ ವಕೀಲರ ಸಂಘದ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿ ತೆರಳಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಗ್ರಾಪಂ ಅವಧಿ ಮುಗಿದ ಬಳಿಕ 3.70 ಲಕ್ಷ ರು.ಗೆ ಕಾಮಗಾರಿ ಬಿಲ್‌..!
ಅಮೆರಿಕದಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಸಾಕೇತ್‌ ಆತ್ಮ*ತ್ಯೆ ಶಂಕೆ : ನಡವಳಿಕೆಯು ಬದಲಾಗಿತ್ತು