ರಾಜಭವನಕ್ಕೆ ಹುಸಿ ಬಾಂಬ್‌ ಕರೆ:ಚಿತ್ತೂರಿನಲ್ಲಿ ಆರೋಪಿಯ ಬಂಧನ

KannadaprabhaNewsNetwork |  
Published : Dec 13, 2023, 01:30 AM IST
ಭಾಸ್ಕರ್‌ | Kannada Prabha

ಸಾರಾಂಶ

ವಿಧಾನಸೌಧದ ಸಮೀಪವೇ ಇರುವ ರಾಜಭವನಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲ ದಿನಗಳ ಹಿಂದೆಯಷ್ಟೇ ನಗರದ ಕೆಲ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದ್ದ ಘಟನೆ ಮಾಸುವ ಮುನ್ನವೇ ವಿಧಾನಸೌಧದ ಸಮೀಪವೇ ಇರುವ ರಾಜಭವನಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಬಂದಿದೆ. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂಬುದು ಖಚಿತವಾಗಿದೆ.

ಇದರ ಬೆನ್ನಲ್ಲೇ ಹುಸಿ ಬಾಂಬ್‌ ಕರೆಯ ಜಾಡು ಹಿಡಿದು ದುಷ್ಕರ್ಮಿಯ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದ ವಿಧಾನಸೌಧ ಠಾಣೆ ಪೊಲೀಸರು, ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ವಡಳ್ಳಿ ಗ್ರಾಮದ ನಿವಾಸಿ ಭಾಸ್ಕರ್‌(34) ಎಂಬಾತನನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬಂಧಿಸಿದ್ದಾರೆ.

ಬಿಕಾಂ ಪದವೀಧರನಾದ ಆರೋಪಿ ಭಾಸ್ಕರ್‌ ಸೋಮವಾರ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ. ರಾಜಭವನದ ಸಮೀಪ ಸೋಮವಾರ ರಾತ್ರಿ 11.30ರ ಹೋಗುವಾಗ ತನ್ನ ಮೊಬೈಲ್‌ ಫೋನ್‌ನಿಂದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಕಚೇರಿಗೆ ಕರೆ ಮಾಡಿ, ರಾಜಭವನಕ್ಕೆ ಬಾಂಬ್‌ ಇರಿಸಿರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಬಳಿಕ ಮೆಜೆಸ್ಟಿಕ್‌ಗೆ ತೆರಳಿ ತನ್ನ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಬಸ್‌ನಲ್ಲಿ ಆಂಧ್ರಪ್ರದೇಶದ ಚಿತ್ತೂರಿಗೆ ಪ್ರಯಾಣಿಸಿದ್ದ.

ಇತ್ತ ರಾಜಭವನ ತಪಾಸಣೆ ನಡೆಸಿದ ಪೊಲೀಸರಿಗೆ ಇದು ಹುಸಿಬಾಂಬ್‌ ಕರೆ ಎಂಬುದು ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹುಸಿ ಬಾಂಬ್‌ ಕರೆಯ ಜಾಡು ಹಿಡಿದು ತನಿಖೆಗೆ ಇಳಿದಿದ್ದ ವಿಧಾನಸೌಧ ಠಾಣೆ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆರೋಪಿ ಭಾಸ್ಕರ್‌ನನ್ನು ಮಂಗಳವಾರ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.---

ಸೋಮವಾರ ತಡರಾತ್ರಿ ಅಪರಿಚಿತ ವ್ಯಕ್ತಿ ಎನ್‌ಐಎ ಕಚೇರಿಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

-ಬಿ.ದಯಾನಂದ್‌, ನಗರ ಪೊಲೀಸ್‌ ಆಯುಕ್ತ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಲ್ಯಾಣ ಮಂಟಪದಲ್ಲಿ ಅತಿಥಿ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ್ದವ ಬಂಧನ
ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದ್ದವನ ಬಂಧನ