ಮಂಗಳೂರು : ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ನಿಂದ ಪಿತೂರಿ ನಡೆದಿದೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಚ್ಚರಿಯ ವಿಚಾರಗಳು ಹೊರಬೀಳುತ್ತಿದವೆ.
ಈ ಪ್ರಕರಣ ಮುನ್ನೆಲೆಗೆ ಬರುವುದಕ್ಕೂ ಮೊದಲೇ ಬುರುಡೆ ಗ್ಯಾಂಗ್ ಇದಕ್ಕೆ ಸಂಬಂಧಿಸಿದ ಎಲ್ಲ ಪೂರ್ವ ತಯಾರಿಯನ್ನು ಮಾಡಿಕೊಂಡಿತ್ತು. ಧರ್ಮಸ್ಥಳದ ನೇತ್ರಾವತಿ ತೀರ, ಬಂಗ್ಲೆಗುಡ್ಡೆ ಕಾಡು ಸುತ್ತಿ 30 ಜಾಗಗಳನ್ನು ಗುರುತು ಮಾಡಿ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಬುರುಡೆ ಕಥೆ ಸೃಷ್ಟಿಸಲು ಸಂಚು ರೂಪಿಸಿತ್ತು ಎನ್ನುವ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ತೋರಿಸಿದ ಕಡೆಗಳಲ್ಲಿ ಎಸ್ಐಟಿ ತಂಡ ಉತ್ಖನನ ಆರಂಭಿಸಿದ ಬಳಿಕ ಪ್ರತಿದಿನವೂ ತಿಮರೋಡಿ ಮನೆಯಲ್ಲಿ ಈ ಬ್ಲೂಪ್ರಿಂಟ್ ಹಿಡಿದು ಚರ್ಚೆ ನಡೆಯುತ್ತಿತ್ತು. ತಾನು ತೋರಿಸಿದ ಜಾಗಗಳಲ್ಲೇ ಶವ ಹೂತಿದ್ದೆ ಎಂದು ಗಿರೀಶ್ ಮಟ್ಟಣ್ಣವರ್ ಬಳಿ ಚಿನ್ನಯ್ಯ ಹೇಳಿಕೊಳ್ಳುತ್ತಿದ್ದ. ಆದರೆ ಅಗೆದಷ್ಟೂ ಅಸ್ಥಿಪಂಜರ ಸಿಗದೆ ಲೆಕ್ಕಾಚಾರ ತಲೆಕೆಳಗಾದಾಗ ಬುರುಡೆ ಗ್ಯಾಂಗ್ನಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಒಂದು ವೇಳೆ ಬುರುಡೆ ಸಿಗದೆ ಇದ್ದರೆ ಮುಂದೇನು ಎಂಬ ಚರ್ಚೆಯನ್ನೂ ನಡೆಸಲಾಗಿತ್ತು ಎಂದು ಚಿನ್ನಯ್ಯ ಎಸ್ಐಟಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಚಿನ್ನಯ್ಯನನ್ನು ಮತ್ತೆ ಕಸ್ಟಡಿಗೆ
ಕೇಳಲಿದೆ ಎಸ್ಐಟಿ ತಂಡ?
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಆರೋಪಿಸಿರುವ ಚಿನ್ನಯ್ಯನ ಎಸ್ಐಟಿ ಪೊಲೀಸ್ ಕಸ್ಟಡಿ ಅವಧಿ ಸೆ.3ರಂದು ಮುಗಿಯಲಿದ್ದು, ಅಷ್ಟರೊಳಗೆ ಈ ‘ಬುರುಡೆ ಟೀಂ’ನ ಇತರ ಸದಸ್ಯರಿಗೆ ಎಸ್ಐಟಿ ಖೆಡ್ಡಾ ತೋಡುವ ಸಾಧ್ಯತೆ ದಟ್ಟವಾಗಿದೆ. ಆರೋಪಿ ಚಿನ್ನಯ್ಯನನ್ನು ಬುಧವಾರ ಕೋರ್ಟ್ಗೆ ಹಾಜರುಪಡಿಸಲಿರುವ ಎಸ್ಐಟಿ ಅಧಿಕಾರಿಗಳು, ಆತನನ್ನು ಮತ್ತೆ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಕೋರ್ಟ್ ಕಸ್ಟಡಿಗೆ ಒಪ್ಪಿಸದೆ ಇದ್ದರೆ ತನಿಖೆ ಮುಂದುವರಿಸುವ ನಿಟ್ಟಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಅವರಿಗೆ ನೋಟಿಸ್ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಈ ವಾರದಲ್ಲೇ ಕ್ಲೈಮ್ಯಾಕ್ಸ್?:
ಈಗಾಗಲೇ ಚಿನ್ನಯ್ಯನನ್ನು ಆತ ತಂಗಿದ್ದ ತಿಮರೋಡಿ ನಿವಾಸ, ಬೆಂಗಳೂರಿನ ಜಯಂತ್ ನಿವಾಸ ಹಾಗೂ ಸರ್ವಿಸ್ ಅಪಾರ್ಟ್ಮೆಂಟ್ ಮತ್ತಿತರ ಸ್ಥಳಗಳಿಗೆ ಕರೆದೊಯ್ದು ಮಹಜರು ಕಾರ್ಯ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಇವರಿಬ್ಬರಿಗೂ ನೋಟಿಸ್ ನೀಡುವ ನಿಟ್ಟಿನಲ್ಲಿ ಎಸ್ಐಟಿ ತಂಡ ಚರ್ಚೆ ನಡೆಸಿದೆ. ಚಿನ್ನಯ್ಯನನ್ನು ಕಸ್ಟಡಿಗೆ ನೀಡಿದರೂ ಗರಿಷ್ಠ ಮೂರು ದಿನ ಮಾತ್ರ. ಏನಿದ್ದರೂ ಈ ವಾರದಲ್ಲೇ ಧರ್ಮಸ್ಥಳ ಕೇಸ್ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಲಿದೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತುರ್ತು ಕೆಲಸಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದು, ಮಂಗಳವಾರ ಬೆಳಗ್ಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಕಸ್ಟಡಿಯ ಕೊನೆ ಹಂತದಲ್ಲಿ ಚಿನ್ನಯ್ಯನ ವಿಚಾರಣೆ ನಡೆಸಿ ಮತ್ತಷ್ಟು ಮಹತ್ವದ ಸಾಕ್ಷ್ಯ ಸಂಗ್ರಹ ನಡೆಸಲಿದ್ದಾರೆ.
ಈ ನಡುವೆ ಸೋಮವಾರ ಬೆಳಗ್ಗೆ ಚಿನ್ನಯ್ಯನ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಎಸ್ಐಟಿ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ತನಿಖಾಧಿಕಾರಿ ದಯಾಮ ಆಗಮನದ ಬಳಿಕವಷ್ಟೆ ಮುಂದಿನ ಹಂತದ ತನಿಖಾ ಪ್ರಕ್ರಿಯೆ ನಡೆಯಲಿದೆ.
ಜಯಂತ್ ಮನೇಲಿ ಬುರುಡೆ
ಮೊದಲ ವಿಡಿಯೋ ಶೂಟ್!
ಬುರುಡೆ ಪ್ರಕರಣದ ಮೊದಲ ವಿಡಿಯೋ ಶೂಟ್ ನಡೆದದ್ದೇ ಜಯಂತ್ ಅವರ ಬೆಂಗಳೂರು ನಿವಾಸದಲ್ಲಿ ಎಂಬ ಅಂಶ ಎಸ್ಐಟಿ ತನಿಖೆ ವೇಳೆ ಬಯಲಾಗಿದೆ. ಈ ವಿಚಾರ ಬಾಯ್ಬಿಟ್ಟಿರುವ ಚಿನ್ನಯ್ಯ, ಕೋರ್ಟ್ ಮತ್ತು ವಕೀಲರಿಗೆ ಸಲ್ಲಿಸುವ ಉದ್ದೇಶದಿಂದ ವಿಡಿಯೋ ಶೂಟ್ ಅನ್ನು ಜಯಂತ್ ತನ್ನದೇ ಫೋನ್ನಲ್ಲಿ ಮಾಡಿರುವುದಾಗಿ ತಿಳಿಸಿದ್ದಾನೆ. ರೆಕಾರ್ಡ್ ಮಾಡಿ ಗಿರೀಶ್ ಮಟ್ಟಣ್ಣವರ್ಗೆ ಜಯಂತ್ ಕಳುಹಿಸಿದ್ದು, ಬಳಿಕ ಅವರ ಸೂಚನೆಯಂತೆ ಡಿಲೀಟ್ ಮಾಡಿದ್ದಾನೆ ಎಂಬಿತ್ಯಾದಿ ಮಹತ್ವದ ವಿಚಾರಗಳನ್ನು ಚಿನ್ನಯ್ಯ ತಿಳಿಸಿದ್ದಾನೆ ಎನ್ನಲಾಗಿದೆ.
ಬುರುಡೆ ಇಡಲು
ಪ್ರತ್ಯೇಕ ಕೊಠಡಿ!
ಚಿನ್ನಯ್ಯನನ್ನು ಬೆಂಗಳೂರಿನ ತನ್ನ ನಿವಾಸಕ್ಕೆ ಕರೆದೊಯ್ದಿದ್ದ ಜಯಂತ್, ಆತ ತಂದಿದ್ದ ತಲೆ ಬುರುಡೆಯನ್ನು ತನ್ನ ಮನೆಯಲ್ಲಿ ಇಡದೆ, ಫ್ಲ್ಯಾಟ್ನ ಮೇಲಿದ್ದ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದ ಮಾಹಿತಿಯೂ ಬಯಲಾಗಿದೆ. ಈ ಒಂಟಿ ಕೊಠಡಿಯನ್ನು ಜಯಂತ್ ಬಾಡಿಗೆಗೆ ಪಡೆದುಕೊಂಡಿದ್ದು, ಅಲ್ಲಿಂದಲೇ ಬುರುಡೆಯನ್ನು ದೆಹಲಿಗೂ ಕೊಂಡುಹೋಗಿದ್ದರು. ಬುರುಡೆಯನ್ನು ವಾಸದ ಮನೆಯಲ್ಲೇ ಇಟ್ಟರೆ ಪತ್ನಿ, ಮಕ್ಕಳಿಗೆ ವಿಷಯ ತಿಳಿಯುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು ಎಂದು ಚಿನ್ನಯ್ಯ ತನಿಖೆ ವೇಳೆ ತಿಳಿಸಿದ್ದಾನೆ.
ಹೂತಿಟ್ಟ ಜಾಗ ಬ್ಲೂಪ್ರಿಂಟ್
ತಯಾರಿಸಿದ್ದ ಬುರುಡೆ ಟೀಂ
ಪ್ರಕರಣ ಮುನ್ನೆಲೆಗೆ ಬರುವುದಕ್ಕೂ ಮೊದಲೇ ಬುರುಡೆ ಗ್ಯಾಂಗ್ ಇದಕ್ಕೆ ಸಂಬಂಧಿಸಿದ ಎಲ್ಲ ಪೂರ್ವ ತಯಾರಿಯನ್ನು ಮಾಡಿಕೊಂಡಿತ್ತು. ಧರ್ಮಸ್ಥಳದ ನೇತ್ರಾವತಿ ತೀರ, ಬಂಗ್ಲೆಗುಡ್ಡೆ ಕಾಡು ಸುತ್ತಿ 30 ಜಾಗಗಳನ್ನು ಗುರುತು ಮಾಡಿ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಬುರುಡೆ ಕಥೆ ಸೃಷ್ಟಿಸಲು ಸಂಚು ರೂಪಿಸಿತ್ತು. ಚಿನ್ನಯ್ಯ ತೋರಿಸಿದ ಕಡೆಗಳಲ್ಲಿ ಎಸ್ಐಟಿ ತಂಡ ಉತ್ಖನನ ಆರಂಭಿಸಿದ ಬಳಿಕ ಪ್ರತಿದಿನವೂ ತಿಮರೋಡಿ ಮನೆಯಲ್ಲಿ ಈ ಬ್ಲೂಪ್ರಿಂಟ್ ಹಿಡಿದು ಚರ್ಚೆ ನಡೆಯುತ್ತಿತ್ತು. ತಾನು ತೋರಿಸಿದ ಜಾಗಗಳಲ್ಲೇ ಶವ ಹೂತಿದ್ದೆ ಎಂದು ಗಿರೀಶ್ ಮಟ್ಟಣ್ಣವರ್ ಬಳಿ ಚಿನ್ನಯ್ಯ ಹೇಳಿಕೊಳ್ಳುತ್ತಿದ್ದ. ಆದರೆ ಅಗೆದಷ್ಟೂ ಅಸ್ಥಿಪಂಜರ ಸಿಗದೆ ಲೆಕ್ಕಾಚಾರ ತಲೆಕೆಳಗಾದಾಗ ಬುರುಡೆ ಗ್ಯಾಂಗ್ನಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಒಂದು ವೇಳೆ ಬುರುಡೆ ಸಿಗದೆ ಇದ್ದರೆ ಮುಂದೇನು ಎಂಬ ಚರ್ಚೆಯನ್ನೂ ನಡೆಸಲಾಗಿತ್ತು ಎಂದು ಚಿನ್ನಯ್ಯ ಬಾಯಿ ಬಿಟ್ಟಿದ್ದಾನೆ.