ಕುಡಿದು ಬಸ್ ಓಡಿಸುತ್ತಿದ್ದ 9 ಚಾಲಕರ ವಿರುದ್ಧ ಕೇಸ್; ಪೊಲೀಸರಿಂದ ಖಾಸಗಿ ಬಸ್ ಚಾಲಕರ ತಪಾಸಣೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಸಂಚಾರ ಪೊಲೀಸರು ಗುರುವಾರ ರಾತ್ರಿ ನಗರದಲ್ಲಿ ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ಕುಡಿದು ಖಾಸಗಿ ಬಸ್ ಚಾಲನೆ ಮಾಡುತ್ತಿದ್ದ 9 ಮಂದಿ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ನಗರದ ಆನಂದ್ ರಾವ್ ವೃತ್ತ, ಮೌರ್ಯ ವೃತ್ತ, ಕಪಾಲಿ ರಸ್ತೆ, ಗಾಂಧಿನಗರ ಸೇರಿದಂತೆ ಖಾಸಗಿ ಬಸ್ಗಳು ಹೆಚ್ಚಾಗಿ ಓಡಾಡುವ ವಿವಿಧ ಸ್ಥಳಗಳಲ್ಲಿ ನಗರ ಸಂಚಾರ ಪೊಲೀಸರು ಗುರುವಾರ ರಾತ್ರಿ 8 ಗಂಟೆಯಿಂದ 11.30ರ ವರೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ 881 ಖಾಸಗಿ ಬಸ್ಗಳ ಚಾಲಕರನ್ನು ತಪಾಸಣೆ ಮಾಡಿದಾಗ 9 ಮಂದಿ ಚಾಲಕರು ಮದ್ಯಸೇವಿಸಿ ಬಸ್ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಸಂಚಾರ ಪೊಲೀಸರು, ಅವರ ಚಾಲನಾ ಪರವಾನಗಿಯನ್ನು (ಡಿಎಲ್) ಅಮಾನತುಗೊಳಿಸಿಲು ಸಾರಿಗೆ ಇಲಾಖೆಗೆ ಕಳುಹಿಸಿದ್ದಾರೆ.
ಕರ್ಕಶ ಹಾರ್ನ್: 595 ಪ್ರಕರಣ
ದೋಷಪೂರಿತ ಸೈಲೆನ್ಸರ್ ಹಾಗೂ ಕರ್ಕಶ ಹಾರ್ನ್ ಅಳವಡಿಸಿಕೊಂಡು ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಮಾಡುತ್ತಿದ್ದ ವಾಹನಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ದೋಷಪೂರಿತ ಸೈಲೆನ್ಸರ್ ಅಳವಡಿಸಿದ್ದ 100 ಹಾಗೂ ಕರ್ಕಶ ಹಾರ್ನ್ ಅಳವಡಿಸಿ ಸಂಚಾರ ನಿಯಮ ಉಲ್ಲಂಘಿಸಿದ 595 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.