ಚಿತ್ರದುರ್ಗ ಐದು ಅಸ್ಥಿ ಪಂಜರ ಪ್ರಕರಣಕ್ಕೆ ಕಡೆಗೂ ಮುಕ್ತಿ

KannadaprabhaNewsNetwork |  
Published : May 17, 2024, 12:39 AM ISTUpdated : May 17, 2024, 05:08 AM IST
ಚಿತ್ರದುರ್ಗ ಐದು ಅಸ್ಥಿ ಪಂಜರ ಪ್ರಕರಣಕ್ಕೆ ಮುಕ್ತಿ | Kannada Prabha

ಸಾರಾಂಶ

ಪಾಳು ಬಿದ್ದ ಮನೆಯಲ್ಲಿ ಕಳೆದ ಡಿಸೆಂಬರ್ 28ರಂದು ಐವರ ಅಸ್ಥಿ ಪಂಜರಗಳು ದೊರೆತಿದ್ದ ಪ್ರಕರಣಕ್ಕೆ ಕಡೆಗೂ ಮುಕ್ತಿ ದೊರೆತ್ತಿದ್ದು, ಜಗನ್ನಾಥ ರೆಡ್ಡಿ ಕುಟುಂಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಫ್‌ ಎಸ್ ಎಲ್ ವರದಿಯಿಂದ ದೃಢಪಟ್ಟಿದೆ.

 ಚಿತ್ರದುರ್ಗ :  ಚಿತ್ರದುರ್ಗ ನಗರದ ಹೊರವಲಯದ ಪಾಳು ಬಿದ್ದ ಮನೆಯಲ್ಲಿ ದೊರೆತಿದ್ದ ಐದು ಅಸ್ಥಿ ಪಂಜರ ಪ್ರಕರಣಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಜಗನ್ನಾಥ ರೆಡ್ಡಿ ಕುಟುಂಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಗುರುವಾರ ಚಿತ್ರದುರ್ಗ ಪೊಲೀಸರ ಕೈ ಸೇರಿದ ಎಫ್‌ ಎಸ್ ಎಲ್ ವರದಿಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ದೃಢವಾಗಿದೆ. ಇದರಿಂದಾಗಿ ಸಾಕಷ್ಟು ಅನುಮಾನಗಳನ್ನು ಮೂಡಿಸಿದ್ದ ಅಸ್ಥಿಪಂಜರಪ್ರಕರಣಕ್ಕೆ ಪೂರ್ಣ ವಿರಾಮ ದೊರೆತಂತಾಗಿದೆ. ಐದು ತಿಂಗಳ ಬಳಿಕ ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದೆ.

ಪಾಳು ಬಿದ್ದ ಮನೆಯಲ್ಲಿ ಕಳೆದ ಡಿಸೆಂಬರ್ 28ರಂದು ಐವರ ಅಸ್ಥಿ ಪಂಜರಗಳು ದೊರೆತಿದ್ದವು. ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ಅವರ ಅಸ್ಥಿ ಪಂಜರಗಳಾಗಿದ್ದವು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು. ಮಗನ ಮದುವೆ, ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಜಗನ್ನಾಥರೆಡ್ಡಿ ಕುಟುಂಬ ಬಳಲಿತ್ತು. ಐದಾರು ವರ್ಷಗಳಿಂದ ನೆಂಟರು, ಸಂಬಂಧಿಕರು, ಸ್ನೇಹಿತರ ಸಂಪರ್ಕ ಕಡಿದುಕೊಂಡಿತ್ತು. ಮಾನಸಿಕ ಖಿನ್ನತೆಯಿಂದಾಗಿ ಅಕ್ಕ ಪಕ್ಕದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿ ಪಂಜರ ಸಿಕ್ಕಾಗ ಇಡೀ ವಾತಾವರಣ ಅಸ್ತವ್ಯಸ್ತ ಸ್ಥಿತಿಯಲ್ಲಿತ್ತು. ಈ ಬಗ್ಗೆ ಮೃತರ ಸಂಬಂಧಿಕ ಪವನ್ ಕುಮಾರ್ ಕೇಸ್ ದಾಖಲಿಸಿದ್ದರು. ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಸಲಾಗಿತ್ತು. ಇದು ಜಗನ್ನಾಥ ರೆಡ್ಡಿ ಕುಟುಂಬವೇ ಎಂದು ಪವನ್ ದೂರು ನೀಡಿದ್ದರು. ಪ್ರಕರಣದ ಮುಂದಿನ ತನಿಖೆಗಾಗಿ ಎಫ್ ಎಸ್ ಎಲ್ ತಂಡ ಕರೆಯಿಸಿ ಜವಾಬ್ದಾರಿ ನೀಡಲಾಗಿತ್ತು ಎಂದರು.

ಎಫ್ ಎಸ್ ಎಲ್ ತಂಡ ಆ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಿತ್ತು. ಎಲ್ಲಾ ಸ್ಯಾಂಪಲ್ಸ್ ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದು ತುಂಬಾ ಸೂಕ್ಷ್ಮ ಪ್ರಕರಣವಾದ್ದರಿಂದ ವರದಿ ತಡವಾಗಿ ಬಂದಿದೆ. ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಸಾವಿನ ಸುತ್ತ ಮತ್ತೆ ಏನಾದರೂ ಇರಬಹುದಾ ಎಂಬ ಕಾರಣಕ್ಕೆ ತನಿಖೆಯನ್ನು ಸಿಪಿಐ ನೇತೃತ್ವದಲ್ಲಿ ಮುಂದುವರಿಸಲಾಗಿದೆ ಎಂದು ಎಸ್ಪಿ ಧರ್ಮೇಂದರ್ ಕುಮಾರ ಮೀನಾ ಹೇಳಿದರು.

ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಐದು ಮಂದಿ ನಿದ್ದೆ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆದ್ರೆ ಕಿಚನ್‌ನಲ್ಲಿ ಇರುವ ಎರಡು ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು ಎಫ್ ಎಸ್ ಎಲ್ ವರದಿಯಲ್ಲಿ ತಿಳಿಸಲಾಗಿದೆ.

4 ವರ್ಷಗಳಿಗೂ ಮೊದಲೇ ಸಾವು!

ಆದ್ರೆ ಅಸ್ಥಿಪಂಜರಗಳ ದೇಹದಲ್ಲಿ ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಆ ಮನೆಯಲ್ಲಿ‌ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ತನಿಖೆ ಪ್ರಕಾರ ಫೆಬ್ರವರಿ ಇಲ್ಲವೇ ಮಾರ್ಚ್ 2019ರಲ್ಲಿ ಸಾವನ್ನಪ್ಪಿದ್ದಾರೆ. ಅಂದರೆ ನಾಲ್ಕು ವರ್ಷಗಳಿಗೂ ಮೊದಲೇ ಸಾವಾಗಿರಬಹುದೆಂದು ಶಂಕಿಸಲಾಗಿದೆ. ಸಾವು ಯಾವಾಗ ಆಗಿದೆ ಎಂದು ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ತಂಡದ ಎಲ್ಲಾ ರೀತಿ ಆಯಾಮದ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ 12 ಲಕ್ಷಕ್ಕೂ ಹೆಚ್ಚು ವಂಚನೆ
ನಾಯಿ ಮೂತ್ರ ವಿಸರ್ಜನೆ ವಿಚಾರಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಮಧ್ಯೆ ಮಾರಾಮಾರಿ