ಇನ್ನು ವಾರದಲ್ಲಿ 4 ದಿನ ದರ್ಶನ್‌ ಕೇಸ್‌ ವಿಚಾರಣೆ

Published : Jun 16, 2026, 11:42 AM IST
Darshan

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ‌‌‌ ಕೊಲೆ‌ ಪ್ರಕರಣದ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಯನ್ನು ವಾರದಲ್ಲಿ ನಾಲ್ಕು ದಿನಗಳ‌ ಕಾಲ ಪ್ರತಿನಿತ್ಯ ಆಧಾರದಲ್ಲಿ ನಡೆಸಲು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಧರಿಸಿದೆ.

  ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ‌‌‌ ಕೊಲೆ‌ ಪ್ರಕರಣದ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಯನ್ನು ವಾರದಲ್ಲಿ ನಾಲ್ಕು ದಿನಗಳ‌ ಕಾಲ ಪ್ರತಿನಿತ್ಯ ಆಧಾರದಲ್ಲಿ ನಡೆಸಲು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಧರಿಸಿದೆ.

ರೇಣುಕಾಸ್ವಾಮಿ‌ ಕೊಲೆ ಪ್ರಕರಣವು ಸೋಮವಾರ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು‌. ನಾಲ್ವರನ್ನು ಹೊರತುಪಡಿಸಿ ಜಾಮೀನು ಮೇಲಿದ್ದ 7 ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು‌. ಗೈರಾದ ಆರೋಪಿಗಳ ಪರ ವಕೀಲರು ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ‌ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಪೀಠ ಪುರಸ್ಕರಿಸಿತು.

ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆ

ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ.ಪ್ರಸನ್ನ ಕುಮಾರ್ ಅವರು, ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ಕಳೆದ ಮೇ 15ರಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ.‌ ಪ್ರಕರಣವು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಿಂದ ಈ ಕೋರ್ಟ್‌ಗೆ ವರ್ಗಾವಣೆಯಾದ ನಂತರ ಎರಡು ವಾರ ಸಮಯ ಕಳೆದಿದೆ. ಸುಪ್ರೀಂಕೋರ್ಟ್‌ನ ಈ ಆದೇಶವನ್ನು ಪಾಲಿಸಬೇಕಿದೆ. ಆ ನಿಟ್ಟಿನಲ್ಲಿ ವಾರದಲ್ಲಿ ನಾಲ್ಕು ದಿನ ಕಾಲ ಪ್ರತಿ ನಿತ್ಯದ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕು. ಅದಕ್ಕೆ ತಾವು ಸಿದ್ಧವಿದ್ದು, ದಿನ ನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಲು ಅಗತ್ಯ ಸಹಕಾರ ನಿಡುವುದಾಗಿ ತಿಳಿಸಿದರು.

ಅದಕ್ಕೆ ದರ್ಶನ್ ಹಾಗೂ ಇತರೆ ಆರೋಪಿಗಳ‌ ಪರ ವಕೀಲರು, ದಿನ ನಿತ್ಯದ ಆಧಾರದ ವಿಚಾರಣೆಗೆ ತಾವು ಸಹ ಸಿದ್ಧವಿದ್ದು, ನ್ಯಾಯಾಲಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಅದನ್ನು ಪರಿಗಣಿಸಿದ ನ್ಯಾಯಾಲಯ, ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರು ವಿಚಾರಣೆ ಮುಂದೂಡಿಕೆಗೆ ಮನವಿ ಮಾಡದೆ ತ್ವರಿತಗತಿ ವಿಚಾರಣೆಗೆ ಹಾಗೂ ದಿನನಿತ್ಯದ ವಿಚಾರಣೆಗೆ ಸಹಕಾರ ನೀಡಬೇಕು.‌ ಅಗತ್ಯವಾದರೆ ವಾರದ ಐದನೇ ದಿನವೂ ಸಹ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ವಾರದಲ್ಲಿ ನಾಲ್ಕು ದಿನಗಳ‌ ಕಾಲ ಪ್ರತಿನಿತ್ಯ ಪ್ರಕರಣದ ವಿಚಾರಣೆ

ಒಂದು ವರ್ಷದಲ್ಲಿ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಲು ಸೂಚನೆ ಇದೆ. ಆ ಆದೇಶವನ್ನು ಪಾಲಿಸಬೇಕಿದೆ. ಆನಿಟ್ಟಿನಲ್ಲಿ ವಾರದಲ್ಲಿ ನಾಲ್ಕು ದಿನಗಳ‌ ಕಾಲ ಪ್ರತಿನಿತ್ಯ ಪ್ರಕರಣದ ವಿಚಾರಣೆ ನಡೆಸಲಾಗುವುದು‌‌‌‌‌.

ಅಲ್ಲದೆ, ಪ್ರತಿ ದಿನ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ಮುಖ್ಯ ಪರೀಕ್ಷೆಗೆ ಒಳಪಡಿಸಿದ ನಂತರ ಅದೇ‌ ದಿನವೇ ಆರೋಪಿಗಳ ಪರ ವಕೀಲರು ಪಾಟಿ ಸವಾಲಿಗೆ ಒಳಪಡಿಸಬಹುದು. ವಾರಕ್ಕೆ ಕನಿಷ್ಠ ಇಬ್ಬರ ಸಾಕ್ಷಿಗಳಂತೆ, ತಿಂಗಳಿಗೆ ಕನಿಷ್ಠ 8 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಮತ್ತು ಆರೋಪಿಗಳ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

ಇನ್ನು ಪ್ರಾಸಿಕ್ಯೂಷನ್ ಯಾವ 60 ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಮುಂದಾಗಿದೆ ಎಂಬ ಪಟ್ಟಿ ನೀಡಲು‌ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಸೂಚನೆ ನೀಡಬೇಕು ಎಂದು ದರ್ಶನ್ ಪರ ವಕೀಲ‌ ಸುನೀಲ್ ಕುಮಾರ್ ಮನವಿ‌ ಮಾಡಿದರು.

ಅಂತಿಮವಾಗಿ ನ್ಯಾಯಾಲಯವು ವಿಶೇಷ ಸರ್ಕಾರಿ ಅಭಿಯೋಜಕರ ಮನವಿ ಮೇರೆಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಾಕ್ಷಿ ನಂಬರ್ 39 ಮತ್ತು 40ಕ್ಕೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ರೀಪಿಸ್ ಪಟ್ಟಿಯಿಂದ ಹೊಡೆದು ಹತ್ಯೆ : ಆರೋಪಿ ಸೆರೆ
ವೆನ್ನೆಲ್ಲಾ ಹತ್ಯೆ ಕೇಸ್‌ ಹಂತಕನ ಜತೆಗೆ ಇನ್ಸ್‌ಪೆಕ್ಟರ್‌ ರಿಯಲ್‌ ಎಸ್ಟೇಟ್‌ ನಂಟು