ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ₹35.35 ಲಕ್ಷ ಪಡೆದು ವಂಚನೆ

KannadaprabhaNewsNetwork |  
Published : Oct 19, 2024, 01:32 AM ISTUpdated : Oct 19, 2024, 04:58 AM IST
ಐಪಿಒ | Kannada Prabha

ಸಾರಾಂಶ

ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ವಿವಿಧ ಹಂತಗಳಲ್ಲಿ ₹35.35 ಲಕ್ಷ ಪಡೆದು ವಂಚಿಸಿದ ಪ್ರಕರಣದಲ್ಲಿ ಹವಾಲಾ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

 ಬೆಂಗಳೂರು : ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ವಿವಿಧ ಹಂತಗಳಲ್ಲಿ ₹35.35 ಲಕ್ಷ ಪಡೆದು ವಂಚಿಸಿದ ಪ್ರಕರಣದಲ್ಲಿ ಹವಾಲಾ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಸೈಯದ್‌ ಸುಲ್ತಾನ್(29), ಶೇಖ್ ದಸ್ತಗಿರ್ (26) ಹಾಗೂ ಹುಬ್ಬಳ್ಳಿ ಮೂಲದ ಕಾರ್ತಿಕ್ (19) ಬಂಧಿತರು. ಇತ್ತೀಚೆಗೆ ಅಪರಿಚಿತರು ಎಚ್‌ಎಸ್‌ಆರ್‌ ಲೇಔಟ್‌ನ ವೆಂಕಟಾಪುರ ನಿವಾಸಿ ದೀಪಾ ಕಾಮಾ ಎಂಬುವವರನ್ನು ವ್ಯಾಟ್ಸಾಪ್‌ನಲ್ಲಿ ಸಂಪರ್ಕಿಸಿ, ‘ಗಣೇಶ್‌ ಗ್ರೀನ್‌ ಭಾರತ್‌ ಲಿಮಿಟೆಡ್‌ ಐಪಿಒ’ ಕಂಪನಿಯಲ್ಲಿ ಹಣ ಹೂಡಿದರೆ ಆ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ್ದರು. ಬಳಿಕ ದೀಪಾ ಅವರಿಂದ ವಿವಿಧ ಹಂತಗಳಲ್ಲಿ ₹35.35 ಲಕ್ಷವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾರ್‌ಮಿನಾರ್‌ ಬಳಿ ಇಬ್ಬರ ಬಂಧನ:

ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆಗಿಳಿದ ಪೊಲೀಸರು, ದೂರುದಾರೆಯಿಂದ ದುಷ್ಕರ್ಮಿಗಳು ದೇಶದ ವಿವಿಧ ರಾಜ್ಯಗಳ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬ್ಯಾಂಕ್‌ ಖಾತೆಗಳಿಂದ ಹಣ ವಿತ್‌ ಡ್ರಾ ಮಾಡಿದ್ದ ಆರೋಪಿಗಳಾದ ಸೈಯದ್‌ ಸುಲ್ತಾನ್‌ ಮತ್ತು ಶೇಖ್‌ ದಸ್ತಗಿರ್‌ ಈ ಇಬ್ಬರನ್ನೂ ಹೈದರಾಬಾದ್‌ನ ಚಾರ್‌ಮಿನಾರ್‌ ಬಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ, ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪೈಕಿ ಆರೋಪಿ ಸೈಯದ್‌ ಸುಲ್ತಾನ್‌ ಸಹೋದರ ಸೈಯದ್‌ ಸುಲೇಮಾನ್‌ ದುಬೈನಲ್ಲಿ ನೆಲೆಸಿದ್ದಾನೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಹವಾಲಾ ಮೂಲಕ ಹಣ ಸ್ವೀಕಾರ

ದುಬೈನಲ್ಲಿ ನೆಲೆಸಿರುವ ಆರೋಪಿ ಸೈಯದ್‌ ಸುಲೇಮಾನ್‌, ಈ ಮೂವರು ಆರೋಪಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಬ್ಯಾಂಕ್‌ ತೆರೆಸಿದ್ದಾನೆ. ದೂರುದಾರೆಗೆ ಈ ಬ್ಯಾಂಕ್‌ ಖಾತೆಗಳ ಮಾಹಿತಿ ನೀಡಿ ಹಣವನ್ನು ವರ್ಗಾಯಿಸಿಕೊಂಡಿದ್ದ. ಬಳಿಕ ಈ ಮೂವರು ಆರೋಪಿಗಳ ಮುಖಾಂತರ ಹಣವನ್ನು ವಿತ್‌ ಡ್ರಾ ಮಾಡಿಸಿ ಬಳಿಕ ಹವಾಲ ಮುಖಾಂತರ ದುಬೈನಲ್ಲಿ ಹಣ ಪಡೆದುಕೊಳ್ಳುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಶೇ.3 ಕಮಿಷನ್‌:

ಮುಂದುವರೆದ ತನಿಖೆ ವೇಳೆ ಇತರೆ ಬ್ಯಾಂಕ್‌ಗಳ ಖಾತೆಗಳ ಕೆವೈಸಿ ಹಾಗೂ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದಾಗ, ಹುಬ್ಬಳ್ಳಿಯ ಗಾಂಧಿನಗರ ನಿವಾಸಿಯಾಗಿರುವ ಆರೋಪಿ ಕಾರ್ತಿಕ್‌ ಸುಳಿವು ಸಿಕ್ಕಿದೆ. ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮತ್ತೊಬ್ಬ ವ್ಯಕ್ತಿಯ ಜತೆ ಸೇರಿ ಹವಾಲಾ ಮತ್ತು ಕ್ರಿಪ್ಟೋ ಕರೆನ್ಸಿ ಮುಖಾಂತರ ಅಹಮದಾಬಾದ್‌ನಲ್ಲಿರುವ ವ್ಯಕ್ತಿಯೊಬ್ಬನಿಗೆ ಹಣ ಕಳುಹಿಸುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಇದಕ್ಕೆ ಶೇ.3ರಷ್ಟು ಕಮಿಷನ್‌ ಪಡೆಯುತ್ತಿದ್ದೆ ಎಂದು ಹೇಳಿದ್ದಾನೆ.

ಈ ಹಣವನ್ನು ಸ್ನೇಹಿತರ ಜತೆಗೆ ಸೇರಿ ಚೆಕ್‌, ಎಟಿಎಂ ಮೂಲಕ ವಿತ್‌ ಡ್ರಾ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಡೆಬಿಟ್‌ ಕಾರ್ಡ್‌ ಬಳಸಿ ಪೆಟ್ರೋಲ್‌ ಬಂಕ್‌ನಲ್ಲಿ ಸ್ವೈಪ್‌ ಮಾಡಿ ನಗದು ಹಣ ಪಡೆಯುತ್ತಿದ್ದರು. ಇದಕ್ಕೆ ಬಂಕ್‌ ಮಾಲೀಕರಿಗೆ ಶೇ.3ರಷ್ಟು ಕಮಿಷನ್‌ ನೀಡುತ್ತಿದ್ದ ವಿಚಾರ ವಿಚಾರಣೆಯಿಂದ ತಿಳಿದು ಬಂದಿದೆ.

ಈ ವಂಚನೆ ಪ್ರಕರಣದ ಕಿಂಗ್‌ ಪಿನ್‌ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ವಂಚನೆ ಹಿಂದೆ ವ್ಯವಸ್ಥಿತ ಜಾಲವೊಂದು ಕಾರ್ಯ ನಿರ್ವಹಿಸುತ್ತಿದ್ದು, ಹಲವರು ಈ ಜಾಲದಲ್ಲಿ ಸಕ್ರಿಯರಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ