ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸುವುದಾಗಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ 83 ವರ್ಷದ ವೃದ್ಧೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ಗೊಳಪಡಿಸಿ ಸೈಬರ್ ವಂಚಕರು ₹1.34 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯ ಬ್ರಿಗೇಡ್ ಗೇಟ್ ವೇ ಅಪಾರ್ಟ್ಮೆಂಟ್ ನಿವಾಸಿ ವಸಂತ ಕೋಕಿಲಂ ಮೋಸ ಹೋಗಿದ್ದು, ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ವಸಂತ ಅವರ ಮೊಬೈಲ್ಗೆ ಅಪರಿಚಿತನಿಂದ ಕರೆ ಬಂದಿದ್ದು, ತನ್ನನ್ನು ಮುಂಬೈ ಪೊಲೀಸ್ ಅಧಿಕಾರಿ ಎಂದು ಆತ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಮೊಬೈಲ್ ಹಾಗೂ ಆಧಾರ್ ನಂಬರ್ಅನ್ನು ದುರ್ಬಳಕ್ಕೆ ಮಾಡಿ ಕೆಲವರು ಅಕ್ರಮ ಹಣ ವರ್ಗಾವಣೆ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಿಮ್ಮ ಜತೆಗೆ ಹಿರಿಯ ಅಧಿಕಾರಿಗಳು ಫೋನ್ನಲ್ಲಿ ಮಾತನಾಡಲಿದ್ದಾರೆ ಎಂದಿದ್ದಾನೆ. ಇದಾದ ಕೆಲ ಹೊತ್ತಿನ ನಂತರ ವಸಂತ ಅವರಿಗೆ ವಾಟ್ಸಾಪ್ ಕರೆಯಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿ ಕರೆ ಸ್ಥಗಿತ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಕ್ಕೆ ವಾಟ್ಸಾಪ್ ಕರೆ ಮಾಡಿದ ಮತ್ತೊಬ್ಬ ಅಪರಿಚಿತ, ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. ವರ್ಚುವಲ್ ವಿಚಾರಣೆ ನಡೆಸಬೇಕಿದೆ. ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಆಧಾರ್, ಪಾನ್ ನಂಬರ್ ವಿವರಬೇಕೆಂದು ಪಡೆದಿದ್ದಾನೆ. ನಿಮ್ಮ ಹೆಸರು ಬಳಸಿಕೊಂಡು ಕೋಟ್ಯಂತರ ರು. ಅಕ್ರಮ ವಹಿವಾಟು ನಡೆದಿದೆ. ಆದರಿಂದ ನಿಮ್ಮನ್ನು ಬಂಧಿಸಬೇಕಿದೆ ಎಂದು ನಕಲಿ ಸಿಬಿಐ ಅಧಿಕಾರಿ ಹೇಳಿದ್ದಾನೆ.
ಈ ಮಾತು ಕೇಳಿ ವಸಂತ ಅವರಿಗೆ ಭೀತಿಯಾಗಿದೆ. ಆಗ ನೀವು ಅಮಾಯಕರು ಎಂಬುದು ನನಗೆ ಗೊತ್ತಾಗುತ್ತಿದೆ. ನೀವು ಒಪ್ಪಿದರೇ ಆನ್ಲೈನ್ನಲ್ಲಿಯೇ ವಿಚಾರಣೆ ನಡೆಸಿ ಆರೋಪ ಮುಕ್ತ ಮಾಡುತ್ತೇವೆ ಎಂದು ಆರೋಪಿ ಆಫರ್ ಕೊಟ್ಟಿದ್ದಾನೆ. ಈ ಮಾತಿಗೆ ವಸಂತ ಸಹಮತ ವ್ಯಕ್ತಪಡಿಸಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್ಬಿಐ ಖಾತೆಗೆ ವರ್ಗಾವಣೆ ಮಾಡಿ ತನಿಖೆ ಪೂರ್ಣವಾದ ಮೇಲೆ ನಿಮ್ಮ ಖಾತೆಗೆ ಮರು ಜಮೆ ಮಾಡುತ್ತೇವೆ ಎಂದು ಆತ ಸೂಚಿಸಿದ್ದಾನೆ.
ಇದಕ್ಕೊಪ್ಪಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ₹1.34 ಕೋಟಿ ಹಣವನ್ನು ಹಂತ ಹಂತವಾಗಿ ಆರ್ಟಿಜಿಎಸ್ ಮೂಲಕ ಆರೋಪಿಗಳು ನೀಡಿದ ಖಾತೆಗೆ ವರ್ಗಾಯಿಸಿದ್ದಾರೆ. ಇದಾದ ಕೂಡಲೇ ಅಪರಿಚಿತರ ಕರೆಗಳು ಸ್ಥಗಿತವಾಗಿವೆ. ಈ ವಂಚನೆ ಬಗ್ಗೆ ತಮ್ಮ ಸಂಬಂಧಿಕರ ಬಳಿ ವಸಂತ ಹೇಳಿಕೊಂಡಿದ್ದಾರೆ. ಬಳಿಕ ಸಿಸಿಬಿ ಸೈಬರ್ ಠಾಣೆಗೆ ತೆರಳಿ ಪೊಲೀಸರನ್ನು ಭೇಟಿಯಾದಾಗ ಅವರಿಗೆ ಆನ್ಲೈನ್ ವಂಚನೆಗೊಳಗಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.