ಕನ್ನಡಪ್ರಭ ವಾರ್ತೆ ಮದ್ದೂರು
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಶೋಕ್ ಪುತ್ರ ಬಸವರಾಜ ಎಲ್ಲಿಗಾರ್ ಮೃತಪಟ್ಟ ಗುತ್ತಿಗೆ ನೌಕರ. 11 ಕೆ.ವಿ ವಿದ್ಯುತ್ ತಂತಿಗಳಿಗೆ ಕೇಬಲ್ ಅಳವಡಿಸುವ ಗುತ್ತಿಗೆದಾರ ನಾಗಭೂಷಣ್ ಎಂಬುವರ ಬಳಿ ಬಸವರಾಜ ಎಲ್ಲಿಗಾರ್ ಕಳೆದ ಐದಾರು ವರ್ಷಗಳಿಂದ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು.
ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೆರೆಗೋಡು ಮತ್ತು ಕೊಪ್ಪ ಮಾರ್ಗದ ರಸ್ತೆಯಲ್ಲಿ ಅಡ್ಡ ಬಂದಿದ್ದ ವಿದ್ಯುತ್ ತಂತಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಕೊಪ್ಪ ವಿದ್ಯುತ್ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಬಳಿಕ ಕೇಬಲ್ ಅಳವಳಿಕೆ ಕಾರ್ಯ ನಡೆಯುತ್ತಿತ್ತು.ಕೇಂದ್ರದ ಸಿಬ್ಬಂದಿ ದಿಢೀರ್ ಆಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನೆಲೆಯಲ್ಲಿ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಬಸವರಾಜ ಎಲ್ಲಿಗಾರ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಕೊನೆ ಉಸಿರಳೆದಿದ್ದಾರೆ.
ಸೆಸ್ಕಾಂನ 2ನೇ ಉಪವಿಭಾಗದ ಎಇಇ ಪಿ.ಮೋಹನ್, ನೌಕರರ ಸಂಘದ ಉಪಾಧ್ಯಕ್ಷ ಚನ್ನೇಗೌಡ, ಕಾರ್ಯದರ್ಶಿ ಶ್ರೀಧರ, ಲೈನ್ ಮ್ಯಾನ್ ಸಂಘದ ತನು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆ ಎಸ್ ಐ ಭೀಮಪ್ಪ ಬಾಣಸಿ ಪ್ರಕರಣ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಗುತ್ತಿಗೆ ನೌಕರ ಬಸವರಾಜ ಎಲಿಗಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಬಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಸುರೇಶ ಆಗ್ರಹಿಸಿದ್ದಾರೆ.
ಪರಿಹಾರ ಮತ್ತು ಉದ್ಯೋಗ ನೀಡದಿದ್ದಲ್ಲಿ ಮದ್ದೂರು ಸೆಸ್ಕಾಂ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಸುರೇಶ್ ಎಚ್ಚರಿಸಿದ್ದಾರೆ.