ಕೊಳ್ಳೇಗಾಲ:ಕಾರಿನಲ್ಲಿ ಅಕ್ರಮವಾಗಿ ಆನೆ ದಂತಗಳನ್ನು ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಪೊಲೀಸ್ ಅರಣ್ಯ ಸಂಚಾರಿ ದಳದವರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಳಿ ಜರುಗಿದೆ. ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ಶಿವಮೂರ್ತಿ(57) ಹಾಗೂ ತಮಿಳುನಾಡಿನ ತಿರುಪೂರು ಜಿಲ್ಲೆಯ ರವನಪುರಂ ಗ್ರಾಮದ ಶಿವಕುಮಾರ್(44), ಅಂಡಿಪಾಳ್ಯಂ ಚಿನ್ನಕವುಂಡನ್ ಅಂತೋಣಿ(46) ಬಂಧಿತ ಆರೋಪಿಗಳು. ಆರೋಪಿಗಳಿಂದ ಆನೆಯ ಎರಡು ದಂತಗಳು ಹಾಗೂ ಸಾಗಾಣಿಕೆ ಬಳಸಿದ್ದ ಹುಂಡೈ ಕಂಪನಿಯ ಕ್ರೇಟಾ ಕಾರ್( ಟಿ.ಎನ್.59 ಸಿಆರ್. 1273) ಜಪ್ತಿ ಮಾಡಲಾಗಿದೆ. ಇವರು ಹನೂರು ತಾಲೂಕಿನ ಪಿ.ಜಿ ಪಾಳ್ಯ - ಕೊಳ್ಳೇಗಾಲ ಅಡ್ಡರಸ್ತೆ ಬಸ್ ನಿಲ್ದಾಣದ ಹತ್ತಿರ ಕಾರಿನಲ್ಲಿ ಆನೆಯ ದಂತಗಳನ್ನು ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್ಐ ವಿಜಯರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಆನೆ ದಂತಗಳ ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣದ ಎಫ್.ಎಂ.ಎಸ್ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಮುಂದೆ ಹಾಜರುಪಡಿಸಿದರು. ದಾಳಿಯಲ್ಲಿ ಎಫ್.ಎಂ.ಎಸ್ ಮುಖ್ಯಪೇದೆಗಳು ಶಂಕರ್.ಕೆ, ಬಸವರಾಜು.ಎಂ, ರಾಮಚಂದ್ರ.ಎಂ, ಸ್ವಾಮಿ.ಪಿ, ಲತಾ.ಕೆ, ಪೇದೆ ಬಸವರಾಜು, ಚಾಲಕ ಪ್ರಭಾಕರ್ ಇದ್ದರು. ------ 22ಕೆಜಿಎಲ್54 ಬಂಧಿತರಿಂದ ವಶಪಡಿಸಿಕೊಳ್ಳಲಾದ ಕಾರು ಮತ್ತು ಆನೆ ದಂತ ------------