ಕನ್ನಡಪ್ರಭ ವಾರ್ತೆ ಮದ್ದೂರು
ಮುಸುಕು ದಾರಿ ವ್ಯಕ್ತಿ ಬ್ಯಾಂಕ್ ಬೀಗ ಮುರಿದು ಹಣ ಲೂಟಿ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಬಿದರಕೋಟೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಮಧ್ಯರಾತ್ರಿ ಜರುಗಿದೆ.ಗ್ರಾಮದ ಬ್ಯಾಂಕ್ ಆಫ್ ಬರೋಡಾದ ಬೀಗ ಮುರಿದು ಒಳನುಗ್ಗಿರುವ ಮುಸುಕು ದಾರಿ ವ್ಯಕ್ತಿ ಹಣ ದೋಚಲು ಯತ್ನಿಸಿದ್ದಾನೆ. ಹಣ ಸಿಗದ ಕಾರಣ ಕೆಲ ಕಾಲ ಬ್ಯಾಂಕಿನ ಆವರಣದಲ್ಲಿಯೇ ಕುರಿತು ಸಿಗರೇಟ್ ಸೇವನೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಬುಧವಾರ ಬೆಳಗ್ಗೆ ಬ್ಯಾಂಕ್ನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೊಪ್ಪ ಠಾಣೆ ಪೊಲೀಸರು ಬ್ಯಾಂಕ್ನ ಒಳಗಿದ್ದ ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಓರ್ವ ವ್ಯಕ್ತಿ ಮಾತ್ರ ಬ್ಯಾಂಕ್ನ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದೆ.ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ಉಪ ವಿಭಾಗದಡಿವೈಎಸ್ಪಿ ಯಶವಂತ ಕುಮಾರ್, ಪಿಎಸ್ಐ ಭೀಮಪ್ಪ ಬಾಣಸಿ, ಶ್ವಾನ ದಳ ಮತ್ತು ಬೆರಳು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಮೀನಿಗೆ ಹೋದ ರೈತ ನಾಪತ್ತೆಶ್ರೀರಂಗಪಟ್ಟಣ:
ಜಮೀನಿಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ರೈತ ನಾಪತ್ತೆಯಾಗಿರುವ ಘಟನೆ ತಾಲೂಕಿನ ಕಡತನಾಳು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ನಂಜಪ್ಪ ಸಿ.(83) ನಾಪತ್ತೆಯಾದ ವ್ಯಕ್ತಿ. ಆತ ಇದೇ ನ.03ರ ಸಂಜೆ ವೇಳೆ ಜಮೀನಿಗೆ ಹೋಗಿ ಬರುವುದಾಗಿ ತೆರಳಿದ್ದು, ಹಿಂದಿರುಗಿ ಮನೆಗೆ ಬಂದಿಲ್ಲ ಎಂದು ಅವರ ಪುತ್ರ ಉಮೇಶ್ ಕೆ.ಎನ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಕಾಣೆಯಾಗಿರುವ ವ್ಯಕ್ತಿ ಕಂಡು ಬಂದಲ್ಲಿ ಮಂಡ್ಯ ಕಂಟ್ರೋಲ್ 08232-224888 ಅಥವಾ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ 8277956036 ಗೆ ಕರೆ ಮಾಡುವಂತೆ ಪ್ರಕಟಣೆ ಮೂಲಕ ಪೊಲೀಸರು ಕೋರಿದ್ದಾರೆ.