)
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿತಿನ್ಗೌಡ ಎಂಬುವರನ್ನು ಅಪಹರಿಸಿದ ಸಂಬಂಧ ಬನ್ನೇರುಘಟ್ಟದ ಜಯರಾಂ ಲೇಔಟ್ ನಿವಾಸಿ ನಿಹಾರ್ ರಂಜನ್, ಜೆ.ಪಿ ನಗರದ ಸಂತೋಷ್, ಮಧು ಮತ್ತು ಕೊತ್ತನೂರು ದಿಣ್ಣೆಯ ಮಂಜುನಾಥ ಎಂಬುವರನ್ನು ಬಂಧಿಸಿ 39 ಸಾವಿರ ರು. ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ. 24 ರಂದು ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್ನ ಹೋಟೆಲ್ವೊಂದರ ಮುಂಭಾಗ ನಿಂತಿದ್ದ ನಿತಿನ್ನನ್ನು ಆಟೋರಿಕ್ಷಾದಲ್ಲಿ ಅಪಹರಿಸಿದ್ದರು. ನಂತರ ಕೊತ್ತನೂರು ದಿಣ್ಣೆಯ ಹಿಂದೂ ರುದ್ರಭೂಮಿ ಒಳಗೆ ಕರೆದೊಯ್ದು ಹಣ ಕೊಡುವಂತೆ ಹಲ್ಲೆ ನಡೆಸಿದ್ದಾರೆ. ತನ್ನ ಬಳಿ ಹಣ ಇಲ್ಲ ಎಂದು ಹೇಳಿದರೂ ಬಿಡದೇ ಅವರ ಮೊಬೈಲ್ನಿಂದ 47 ಸಾವಿರ ಹಣವನ್ನು ಯುಪಿಐ ಮೂಲಕ ಆರೋಪಿಗಳು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಿತಿನ್ ಅವರನ್ನು ಬಿಟ್ಟುಕಳುಹಿಸಿದ್ದರು. ನಿತಿನ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿ ಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಅಪಹರಣಕ್ಕೆ ಬಳಸಿದ್ದ ಆಟೋ ಮೊದಲು ಪತ್ತೆ ಹಚ್ಚಿ ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡ್ರಗ್ಸ್ ಪ್ಯಾಕೆಟ್ ಕೊಟ್ಟು ವಿಡಿಯೋ ಮಾಡಿದ್ದರು!
ಅಪಹರಣದ ವೇಳೆ ಆರೋಪಿಗಳು ನಿತಿನ್ ಕೈಗೆ ಡ್ರಗ್ಸ್ ಪ್ಯಾಕೆಟ್ ಕೊಟ್ಟು ವಿಡಿಯೋ ಮಾಡಿಕೊಂಡಿದ್ದರು. ಒಂದು ವೇಳೆ ಅಪಹರಣದ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿದರೆ, ಡ್ರಗ್ಸ್ ಪೆಡ್ಲರ್ ಎಂದು ಪೊಲೀಸರಿಗೆ ಮಾಹಿತಿ ನೀಡಿ ಹಿಡಿದುಕೊಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಆರೋಪಿಗಳಿಂದ ಹಲ್ಲೆಗೊಳಗಾಗಿದ್ದ ನಿತಿನ್, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.