;Resize=(412,232))
ಕಾರವಾರ/ಬೆಂಗಳೂರು: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿದ್ದು, ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ಗೆ ಹನಿಟ್ರ್ಯಾಪ್ ಮಾಡಿ, ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎಂಬ ಸಂಗತಿ ಬಯಲಿಗೆ ಬಂದಿದೆ.
ಕಮಲಾಕರ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ, ಒಂದು ವಾರ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಳು. ಬಳಿಕ, ಆತನ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಮಾಡಿಟ್ಟುಕೊಂಡಿದ್ದು, ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ಮಕ್ಕಳ ಜತೆ ನಾನು ನಿನ್ನ ಜತೆ ಬರ್ತೇನೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆತೀನಿ ಎಂದು ಹೆದರಿಸುತ್ತಿದ್ದಳು. ಹೀಗಾಗಿ, ಕಮಲಾಕರ್ ಮರ್ಯಾದೆಗೆ ಅಂಜಿ ಆಕೆಯನ್ನು ತನ್ನ ಜತೆಗೆ ಇರಿಸಿಕೊಂಡಿದ್ದ ಎಂಬ ಸಂಗತಿ ತಿಳಿದು ಬಂದಿದೆ.
ಹೆಸರು ಬದಲಾಯಿಸಿಕೊಂಡಿದ್ದ ಸುಚಿತ್ರಾ:
ಈಕೆಯ ಮೊದಲ ಹೆಸರು ಸುರೇಖಾ ಎಂದಾಗಿದ್ದು, ಮದುವೆ ಬಳಿಕ ಸುಚಿತ್ರಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಳು. ಸುರೇಖಾ ನನ್ನ ಅಕ್ಕ, ಆಕೆಯ ಮಕ್ಕಳನ್ನು ನಾನೇ ಸಾಕುತ್ತಿದ್ದೇನೆ. ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ, ಬೇರೆ, ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎಂಬ ಸಂಗತಿ ಬಯಲಾಗಿದೆ.
ತನ್ನ ಪತ್ನಿಗೆ ಬೇರೆ, ಬೇರೆ ಅಫೇರ್ ಇದ್ದದ್ದನ್ನು ನೋಡಿ ಸುಚಿತ್ರಾಳ ಪತಿ ಮಹೇಶ್, ವರ್ಷದ ಹಿಂದೆ, ಈಕೆಯ ಕೊಲೆಗೆ ಯತ್ನಿಸಿದ್ದ. ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಘಟನೆ ನಡೆದ ಬಳಿಕವೇ ಕಮಲಾಕರ್ ಭಟ್ ಜತೆ ಈಕೆಯ ಅಫೇರ್ ಆರಂಭವಾಗಿತ್ತು. ಇದೇ ವೇಳೆ, ಕಮಲಾಕರ ಭಟ್, ಮೊದಲ ಪತ್ನಿಯ ಸಾವಿನ ಬಳಿಕ ಮುಸ್ಲಿಂ ಮಹಿಳೆಯ ಜತೆ ಅಫೇರ್ ಇಟ್ಕೊಂಡಿದ್ದ. ಇದು ಗೊತ್ತಾಗಿ ಸುಚಿತ್ರಾ ಗಲಾಟೆ ಮಾಡಿದ್ದಳು ಎಂಬ ಸಂಗತಿ ಕೂಡ ಬಯಲಾಗಿದೆ.
ಮತ್ತೊಬ್ಬ ಆರೋಪಿ ಬಂಧನ:
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಶಿವಮೊಗ್ಗದ ವಿನಯ್ ಎಂಬಾತನನ್ನು ಸಿದ್ಧಾಪುರ ಪೊಲೀಸರು ಸೋಮವಾರ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ಘಟನೆಯ ದಿನ ಸುಚಿತ್ರಾಳೊಂದಿಗೆ ಸಿದ್ದಾಪುರಕ್ಕೆ ಕಳುಹಿಸಿಕೊಟ್ಟ ಆರೋಪ ಈತನ ಮೇಲಿದೆ.