ತಂಗಿಯ ಎಂಗೇಜ್ಮೆಂಟ್‌ಗೆ ಬರಲಿಲ್ಲ ಎಂದು ಪತ್ನಿಗೆ ಇರಿದ ಪತಿ ಬಂಧನ

KannadaprabhaNewsNetwork |  
Published : Feb 19, 2024, 01:38 AM ISTUpdated : Feb 19, 2024, 11:47 AM IST
arrest 1.

ಸಾರಾಂಶ

ತನ್ನ ತಂಗಿಯ ನಿಶ್ಚಾರ್ಥಕ್ಕೆ ಬಾರದ ಪತ್ನಿಯ ಜತೆ ಜಗಳ ತೆಗೆದ ಪತಿ, ಆಕೆಗೆ ಚಾಕು ಇರಿದು ಕೊಲ್ಲಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಂಗಿಯ ವಿವಾಹ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಜತೆಗೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆಯ ಸೊಲ್ಲಾಪುರದಮ್ಮ ದೇವಸ್ಥಾನದ ಜಯಪ್ರಕಾಶ್‌(32) ಬಂಧಿತ.

ಈತ ಫೆ.15ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪತ್ನಿ ದಿವ್ಯಾಶ್ರೀ(26)ಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ದಾವಣಗೆರೆ ಮೂಲದ ಜಯಪ್ರಕಾಶ್‌ ಮತ್ತು ದಿವ್ಯಾಶ್ರೀ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆ 2109ರಲ್ಲಿ ಮದುವೆಯಾಗಿದ್ದರು. 

ಬಳಿಕ ಇಬ್ಬರು ಬೆಂಗಳೂರಿಗೆ ಬಂದು ಮೂಡಲಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಬಳಿಕ ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕೇಟರಿಂಗ್‌ ಕೆಲಸ ಮಾಡಿಕೊಂಡು ದಂಪತಿ ಜೀವನ ದೂಡುತ್ತಿದ್ದರು.

ಇತ್ತೀಚೆಗೆ ಜಯಪ್ರಕಾಶ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಮನೆಯಲ್ಲೇ ಇರುತ್ತಿದ್ದ. ಈತನ ಚಿಕಿತ್ಸಾ ವೆಚ್ಚ ಹಾಗೂ ಖರ್ಚು-ವೆಚ್ಚಗಳನ್ನು ಪತ್ನಿ ದಿವ್ಯಾಶ್ರೀಯೇ ನೋಡಿಕೊಳ್ಳುತ್ತಿದ್ದಳು. ಆರಂಭದಿಂದಲೂ ದಂಪತಿ ನಡುವೆ ಸಣ್ಣ ವಿಚಾರಗಳಿಗೆ ಜಗಳ-ಗಲಾಟೆಗಳು ನಡೆಯುತ್ತಿದ್ದವು.ಚಾಕುವಿನಿಂದ ಇರಿದ:

ಫೆ.15ರಂದು ಬೆಳಗ್ಗೆ ಆರೋಪಿ ಜಯಪ್ರಕಾಶ್‌, ನನ್ನ ತಂಗಿಯ ವಿವಾಹ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ವಿಷಯ ಪ್ರಸ್ತಾಪಿಸಿ ದಿವ್ಯಾಶ್ರೀ ಜತೆಗೆ ಜಗಳ ಶುರು ಮಾಡಿದ್ದಾನೆ. 

ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕು ತೆಗೆದು ಇರಿಯಲು ಮುಂದಾಗಿದ್ದಾನೆ. ಈ ವೇಳೆ ದಿವ್ಯಾಶ್ರೀಯ ಕಾಲಿಗೆ ಚಾಕು ಚುಚ್ಚಿಕೊಂಡಿದೆ. ಬಳಿಕ ಕೈಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. 

ಬಳಿಕ ಆಕೆ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಬಂದು ಸ್ನೇಹಿತರಿಗೆ ಕರೆ ಮಾಡಿದ್ದಾಳೆ. ಬಳಿಕ ಸ್ನೇಹಿತರು ಮನೆ ಬಳಿ ಬಂದು ಗಾಯಾಳು ದಿವ್ಯಾಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿ ಜಯಪ್ರಕಾಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶೀಲದ ಬಗ್ಗೆ ಶಂಕೆ

ಇತ್ತೀಚೆಗೆ ಪ್ರತಿ ದಿನ ಹಣ ಕೊಡುವಂತೆ ಜಯಪ್ರಕಾಶ್‌ ಪೀಡಿಸುತ್ತಿದ್ದ. ಹಣ ಇಲ್ಲ ಎಂದರೆ, ಕುಂಟು ನೆಪ ಹುಡುಕಿ ದೈಹಿಕ ಹಲ್ಲೆ ಮಾಡುತ್ತಿದ್ದ. ದಿವ್ಯಾಶ್ರೀ ಮೊಬೈಲ್‌ನಲ್ಲಿ ಮಾತನಾಡಿದರೆ, ಶೀಲದ ಬಗ್ಗೆ ಶಂಕಿಸುತ್ತಿದ್ದ. ನೀನು ಯಾರೊಂದಿಗೋ ಅಕ್ರಮ ಸಂಬಂಧ ಇರಿಸಿಕೊಂಡಿದ್ದೀಯಾ ಎಂದು ಹಲ್ಲೆ ಮಾಡುತ್ತಿದ್ದ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

₹7 ಕೋಟಿ ಜಪ್ತಿ ಹಣ ರಕ್ಷಣೆಗೆ ರಾತ್ರಿ ಪೊಲೀಸ್‌ ಠಾಣೆಯೇ ಬಂದ್‌?
ಕಾಲಲ್ಲಿ ತುಳಿದು ಸಂಬಂಧಿ ಕೊಂದು ಅಸಹಜ ಸಾವೆಂದು ಕಥೆ ಕಟ್ಟಿದ್ದ ಕೊಲೆಗಾರ ಬಂಧನ