ನನಗೆ ಸಮಾಜ ಸೇವಕಿ ಎಂದು ಹೇಳಿಕೊಂಡು ಶ್ವೇತಾಗೌಡ ಪರಿಚಯವಾಗಿದ್ದರು. ಆದರೆ, ನನಗೂ ಆಕೆಯ ವಂಚನೆ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ನನಗೆ ಸಮಾಜ ಸೇವಕಿ ಎಂದು ಹೇಳಿಕೊಂಡು ಶ್ವೇತಾಗೌಡ ಪರಿಚಯವಾಗಿದ್ದರು. ಆದರೆ, ನನಗೂ ಆಕೆಯ ವಂಚನೆ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನ ವ್ಯಾಪಾರದಲ್ಲಿ ಆದ ವಂಚನೆ ಬಗ್ಗೆ ನಿನ್ನೆಯಷ್ಟೇ ನನಗೆ ಪೊಲೀಸರಿಂದ ಗೊತ್ತಾಯಿತು. ಇದಕ್ಕೂ ನನಗೂ ನೂರಕ್ಕೆ ನೂರಷ್ಟು ನನಗೆ ಸಂಬಂಧಿವಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಸಮಾಜ ಸೇವಕಿ ಎಂದು ಶ್ವೇತಾ ಪರಿಚಯ ಮಾಡಿಕೊಂಡಿದ್ದರು. ಆ ಮೇಲೆ ಎರಡ್ಮೂರು ಬಾರಿ ನಮ್ಮ ಮನೆಗೆ ಅವರು ಬಂದಿದ್ದರು. ಅಷ್ಟು ಬಿಟ್ಟರೆ ನನಗೆ ಶ್ವೇತಾಗೌಡರ ಸಂಗತಿ ಗೊತ್ತಿಲ್ಲ. ನನಗೆ ಒಡವೆ ಖರೀದಿಸಿರುವುದು, ಅಂಗಡಿಯವರಿಗೆ ಮೋಸ ಮಾಡಿರುವುದು ತಿಳಿದಿಲ್ಲ ಎಂದು ಹೇಳಿದರು.
ಈ ಮೋಸದ ಬಗ್ಗೆ ನನ್ನ ಗಮನಕ್ಕೆ ಆ ಒಡವೆ ಅಂಗಡಿ ಮಾಲೀಕರು ಸಹ ನನ್ನ ಗಮನಕ್ಕೆ ತಂದಿರಲಿಲ್ಲ. ನಾನೇ ಅಂಗಡಿ ಮಾಲೀಕರಿಗೆ ಶುಕ್ರವಾರ ರಾತ್ರಿ ಕರೆ ಮಾಡಿ ಪ್ರಕರಣದ ಕುರಿತು ವಿಚಾರಿಸಿದೆ. ಇದೇ ರೀತಿ ಹಲವು ವಿಐಪಿಗಳಿಗೆ ಆಕೆ ವಂಚಿಸಿರುವುದು ಗೊತ್ತಾಗಿದೆ. ಬಹುಷಃ ಆಕೆ ಚೀಟರ್ ಇರಬಹುದು ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ.
ಸೋಮವಾರ ಮಾಹಿತಿ ನೀಡುವೆ:
ಪ್ರತಿದಿನ ನನ್ನ ಮನೆಗೆ ನೂರಾರು ಸಾರ್ವಜನಿಕರು ಬರುತ್ತಾರೆ. ಹಾಗೆಯೇ ಶ್ವೇತಾಗೌಡ ಕೂಡ ಬಂದಿದ್ದಾರೆ. ಆದರೆ ಒಡವೆ ಖರೀದಿಗೆ ನನ್ನ ಮನೆ ವಿಳಾಸ ಕೊಟ್ಟಿರುವುದು ಗೊತ್ತಿಲ್ಲ. ಈ ಪ್ರಕರಣದ ಕುರಿತು ವಿಚಾರಣೆಗೆ ಬರುವಂತೆ ಪೊಲೀಸರು ಕರೆದಿದ್ದಾರೆ. ಅಂತೆಯೇ ಪೊಲೀಸರಿಗೆ ಸೋಮವಾರ ಭೇಟಿಯಾಗಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.