ರೇಣುಕಾಸ್ವಾಮಿಯನ್ನು ಸಾಯಿಸಿಬಿಡಿ ಎಂದಿದ್ದೆ: ಪವಿತ್ರಾ

KannadaprabhaNewsNetwork |  
Published : Sep 10, 2024, 01:40 AM IST
ಆರೋಪಿ ಪವಿತ್ರಾಗೌಡ  | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕರೆತಂದು ಆತನಿಗೆ ಹಡೆದು ನಾನೇ ಸಾಹಿಸಲು ಹೇಳಿದ್ದೆ ಎಂದು ಆರೋಪಿ ಪವಿತ್ರಾಗೌಡ ತಪ್ಪೊಪ್ಪಿಗೆ ಯಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ನನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನನ್ನು ಪತ್ತೆಹಚ್ಚಿ ತರಲು ತಮ್ಮ ಅಭಿಮಾನಿಗಳ ಸಂಘವನ್ನು ಬಳಸಿಕೊಳ್ಳುವಂತೆ ದರ್ಶನ್ ಹೇಳಿದ್ದರು. ಕೊನೆಗೆ ಪಟ್ಟಣಗೆರೆ ಶೆಡ್‌ಗೆ ಅಭಿಮಾನಿಗಳ ಸಂಘದ ಮೂಲಕವೇ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಅಲ್ಲಿಗೆ ನನ್ನನ್ನು ದರ್ಶನ್‌ ಕರೆದೊಯ್ದರು. ಆಗ ಆತನಿಗೆ ಚಪ್ಪಲಿಯಲ್ಲಿ ಹೊಡೆದೆ. ನಂತರ ಸಾಯಿಸಿ ಬಿಡಿ ಎಂದಾಗ ಆತನ ಮೇಲೆ ದರ್ಶನ್ ಆದಿಯಾಗಿ ಎಲ್ಲರೂ ಸೇರಿ ಮನಸೋ ಇಚ್ಛೆ ಹಲ್ಲೆ ನಡೆಸಿದರು.’

ಹೀಗಂತ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌ರವರ ಪ್ರಿಯತಮೆ ಪವಿತ್ರಾಗೌಡ ನೀಡಿರುವ ಸುದೀರ್ಘ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.

ಇನ್ನು ತಮ್ಮ ಹೇಳಿಕೆಯಲ್ಲಿ ತನ್ನ ಉದ್ಯೋಗ, ಮೊದಲ ಮದುವೆ ಮುರಿದು ಬಿದ್ದ ವಿಷಯ, ನಂತರ ದರ್ಶನ್‌ ಜೊತೆಗಿನ ಸ್ನೇಹ-ಸಂಬಂಧದಿಂದ ಹಿಡಿದು ರೇಣುಕಾಸ್ವಾಮಿ ಹತ್ಯೆವರೆಗಿನ ಬದುಕಿನ ಸಿಹಿ-ಕಹಿ ಘಟನೆಗಳನ್ನು ಪವಿತ್ರಾ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಕಾಟ:

ಇದೇ ವರ್ಷದ ಫೆಬ್ರವರಿಯಿಂದ ‘ಗೌತಮ್‌ ಕೆ.ಎಸ್‌.1990’ ಎಂಬ ಹೆಸರಿನ ಖಾತೆಯಿಂದ ಒಬ್ಬ ವ್ಯಕ್ತಿ ಅಶ್ಲೀಲ ಸಂದೇಶ, ಪೋಟೋ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಇದರಿಂದ ನಾನು ದುಃಖಿತಳಾಗಿದ್ದೆ. ಆ ನೋವನ್ನು ಪವನ್ ಜತೆ ಹಂಚಿಕೊಂಡು ಅಶ್ಲೀಲ ಸಂದೇಶ ಕಳುಹಿಸುವ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸೋಣ ಎಂದು ನಿರ್ಧರಿಸಿದ್ದೆವು. ಆದರೆ ಈ ಅಶ್ಲೀಲ ಸಂದೇಶಗಳ ಕುರಿತು ಯಾವುದೇ ದೂರು ನೀಡಿರಲಿಲ್ಲ ಎಂದು ಪವಿತ್ರಾ ಹೇಳಿದ್ದಾರೆ.

ಲೈಂಗಿಕ ಕ್ರಿಯೆಗೆ ಕರೆದ ರೇಣುಕಾಸ್ವಾಮಿ:

ಆತನಿಗೆ ಬುದ್ಧಿ ಕಲಿಸುವ ಸಲುವಾಗಿ ‘ಡ್ರಾಪ್ ಮಿ ಯುವರ್ ನಂಬರ್’ ಎಂದು ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಕಳುಹಿಸಿದೆ. ಜೂ.5ರಂದು ಪವನ್‌ ಮೊಬೈಲ್ ನಂಬರ್ ಹಾಕಿ ಕಾಲ್ ಮಿ ಎಂದು ಮತ್ತೆ ಮೆಸೇಜ್‌ ಮಾಡಿದೆ. ಆ ದಿನ ರಾತ್ರಿ 9 ಗಂಟೆಗೆ ಆತ (ರೇಣುಕಾಸ್ವಾಮಿ) ಕರೆ ಮಾಡಿದಾಗ ನಾನೇ ಸ್ವೀಕರಿಸಿದೆ. ಆಗ ನೀವು ಎಲ್ಲಿರೋದು, ಏನು ಮಾಡುವುದು ಎಂದೆಲ್ಲ ಪ್ರಶ್ನೆ ಕೇಳಿ ನನ್ನೊಂದಿಗೆ 5 ನಿಮಿಷ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವಂತೆ ಮಾತನಾಡಿದ. ನಂತರ ಈ ವಿಷಯವನ್ನು ವಿನಯ್‌ಗೆ ನಾವಿಬ್ಬರೂ (ಪವಿತ್ರಾ ಮತ್ತು ಪವನ್‌) ತಿಳಿಸಿ, ಅಶ್ಲೀಲ ಸಂದೇಶ ಕಳುಹಿಸುವವನ ಪತ್ತೆಹಚ್ಚುವಂತೆ ಹೇಳಿದ್ದೆವು. ವಿನಯ್‌ನಿಂದ ದರ್ಶನ್‌ ಅವರಿಗೆ ವಿಷಯ ಗೊತ್ತಾಯಿತು. ಆಗ ಮೆಸೇಜ್ ಕಳುಹಿಸುತ್ತಿದ್ದವನು ಜಿಗಣಿಯಲ್ಲಿ ಕೆಲಸ ಮಾಡೋದು ಎಂದು ತಿಳಿದು ಅಲ್ಲಿಗೆ ದರ್ಶನ್‌ ಮನೆಯ ಕೆಲಸದಾಳು ನಂದೀಶ್ ಹಾಗೂ ತೌಸಿಫ್‌ನನ್ನು ಕಳುಹಿಸಲಾಗಿತ್ತು. ಕೊನೆಗೆ ರೇಣುಕಾಸ್ವಾಮಿಯೇ ತಾನು ಕೆಲಸ ಮಾಡುತ್ತಿದ್ದ ಫಾರ್ಮಸಿ ಪೋಟೋ, ವಿಳಾಸ ಹಾಗೂ ಲೊಕೇಷನ್ ಕಳುಹಿಸಿದ. ಆಗ ಆತನನ್ನು ಕರೆತಂದು ಚೆನ್ನಾಗಿ ಬಾರಿಸಿ ಒಂದು ಗತಿ ಕಾಣಿಸೋಣ. ಇದಕ್ಕೋಸ್ಕರ ಅವಶ್ಯವಿದ್ದಲ್ಲಿ ಚಿತ್ರದುರ್ಗದ ತನ್ನ ಅಭಿಮಾನಿಗಳ ಬಳಗ‍ನ್ನು ಬಳಸಿಕೊಳ್ಳುವಂತೆ ವಿನಯ್‌ಗೆ ದರ್ಶನ್ ತಿಳಿಸಿದ್ದರು. ಜೂ.8ರಂದು ಮಧ್ಯಾಹ್ನ ನನಗೆ ಕರೆ ಮಾಡಿ ರೇಣುಕಾಸ್ವಾಮಿ ಅಪಹರಿಸಿ ಕರೆತಂದಿರುವ ವಿಷಯ ತಿಳಿಸಿದ ದರ್ಶನ್‌, ಪಟ್ಟಣಗೆರೆ ಶೆಡ್‌ಗೆ ನನ್ನನ್ನು ಅವರೇ ಬಂದು ಕರೆದೊಯ್ದರು. ಆಗ ರೇಣುಕಾಸ್ವಾಮಿಯ ತಲೆ, ಎದೆಯ ಮೇಲೆ ದರ್ಶನ್‌, ನಾಗರಾಜ, ಪವನ್‌, ನಂದೀಶ್ ಮನಸೋ ಇಚ್ಛೆ ಹೊಡೆದರು. ನಾನು ಆತನಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದಾಗ ಎಲ್ಲರೂ ಸೇರಿ ಆತನಿಗೆ ಹಲ್ಲೆ ಮಾಡಲು ಶುರು ಮಾಡಿದರು. ಆ ವೇಳೆ ನನ್ನನ್ನು ದರ್ಶನ್ ಮನೆಗೆ ಕಳುಹಿಸಿದರು. ಅದೇ ರಾತ್ರಿ 9.30 ಗಂಟೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪವನ್ ಹಾಗೂ ದರ್ಶನ್ ಹೇಳಿದರು, ಈ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ ಬಿಡು ಎಂದಿದ್ದರು ಎಂದು ಪವಿತ್ರಾ ಹೇಳಿದ್ದಾರೆ.

ಹೆಂಡ್ತಿ ಜತೆ ದುಬೈಗೆ ಹೋದಾಗ ಮುನಿಸಿಕೊಂಡಿದ್ದೆ:

ಹತ್ತು ವರ್ಷಗಳ ಹಿಂದೆ ಬುಲ್‌ ಬುಲ್‌ ಸಿನಿಮಾ ಆಡಿಷನ್‌ಗೆ ಹೋದಾಗ ನನಗೆ ದರ್ಶನ್ ಪರಿಚಯವಾಗಿ ಬಳಿಕ ಆತ್ಮೀಯತೆ ಮೂಡಿತು. 2018ರಲ್ಲಿ ನನಗೆ 1.5 ಕೋಟಿ ರು. ಮೌಲ್ಯದ ಮನೆಯನ್ನು ದರ್ಶನ್ ಕೊಡಿಸಿದ್ದರು. ಅಂದಿನಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದೇವೆ. 13 ವರ್ಷದ ಮಗಳು ಹಾಗೂ ದರ್ಶನ್‌ ಜತೆ ವಾಸವಾಗಿದ್ದೇನೆ. ಕಳೆದ ಮೇನಲ್ಲಿ ನನಗೆ ತಿಳಿಸದೆ ವಿಜಯಲಕ್ಷ್ಮೀ ಜತೆ ದುಬೈಗೆ ತೆರಳಿ ವಿವಾಹ ವಾರ್ಷಿಕೋತ್ಸವನ್ನು ದರ್ಶನ್ ಆಚರಿಸಿಕೊಂಡಿದ್ದರು. ಈ ವಿಚಾರ ತಿಳಿದ ನಂತರ ಅವರೊಂದಿಗೆ ಜಗಳ ಮಾಡಿಕೊಂಡು ಮಾತು ನಿಲ್ಲಿಸಿದ್ದೆ ಎಂದು ಪವಿತ್ರಾಗೌಡ ಹೇಳಿದ್ದಾರೆ.

ಸೌಂದರ್ಯ ಜಗದೀಶ್‌ರಿಂದ ಸಾಲ:

2018ರಲ್ಲಿ ನನಗೆ ಸೌಂದರ್ಯ ಜಗದೀಶ್ ಅವರಿಂದ ಸಾಲ ಪಡೆದು ದರ್ಶನ್‌ ಮನೆ ಖರೀದಿಸಿ ಕೊಟ್ಟರು. ಗೃಹ ಪ್ರವೇಶವಾದ ಬಳಿಕ ನಾವಿಬ್ಬರೂ ಸಂಸಾರ ಮಾಡಿಕೊಂಡಿದ್ದೆವು. ದರ್ಶನ್ ಮೂಲಕ ಸೌಂದರ್ಯ ಜಗದೀಶ್ ಕುಟುಂಬ, ನಟರಾದ ದೇವರಾಜ್‌, ಪ್ರಜ್ವಲ್ ದೇವರಾಜ್‌, ಚಿಕ್ಕಣ್ಣ, ಧನವೀರ್, ಅಭಿಷೇಕ್ ಅಂಬರೀಷ್, ಯಶಸ್ ಸೂರ್ಯ, ಪ್ರದೂಷ್, ನಾಗರಾಜು, ವಿನಯ್, ದರ್ಶನ್ ಕಾರು ಚಾಲಕ ಲಕ್ಷ್ಮಣ್, ಗೋವಿಂದರಾಜು, ನಂದೀಶ್, ಮನೆಯಲ್ಲಿ ನಾಯಿ ನೋಡಿಕೊಳ್ಳುವ ಅಮೀರ್ ಬಾಬು ಸೇರಿ ಇತರರು ಪರಿಚಿತರಾಗಿದ್ದರು.

2013ರಿಂದ ನಾನು ಇನ್‌ಸ್ಟಾಗ್ರಾಂನಲ್ಲಿ ಖಾತೆಗಳನ್ನು ಹೊಂದಿದ್ದು, ಅವುಗಳನ್ನು ನಾನೇ ಮೊಬೈಲ್‌ನಿಂದ ನಿರ್ವಹಿಸುತ್ತೇನೆ. ನನಗೆ ಡೋರ್ ಮ್ಯಾಕ್ಸ್-14 ಮೊಬೈಲ್ ಪೋನ್ ದರ್ಶನ್ ಕೊಡಿಸಿದ್ದರು. ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ‘ಹಲವಾರು ನೆಟ್ಟಿಗರು ಹಿಂಬಾಲಿಸುತ್ತಿರುತ್ತಾರೆ.’ ಕೆಲವರು ಮೆಸೇಜ್‌ (ಡಿಎಂ) ಮಾಡಿದ್ದರು. ಕೆಲವು ಅಸಹ್ಯವಾದ ಮೆಸೇಜ್ ಮಾಡಿದಾಗ ಬ್ಲಾಕ್ ಮಾಡಿದ್ದೆ. ಆ ಅಸಹ್ಯಕರ ಮೆಸೇಜ್‌ಗಳನ್ನು ಸ್ಕ್ರೀನ್‌ ಶಾಟ್‌ ತೆಗೆದು ದರ್ಶನ್‌ಗೆ ತೋರಿಸಿದ್ದೆ ಎಂದು ಪವಿತ್ರಾಗೌಡ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮುರಿದು ಬಿದ್ದ ಮೊದಲ ಮದುವೆ ಕತೆ

ನಾನು ಫ್ಯಾಷನ್‌ ಡಿಸೈನರ್ ಆಗಿದ್ದು, ಆರ್.ಆರ್‌.ನಗರದಲ್ಲಿ ರೆಡ್‌ ಕಾರ್ಪೆಟ್‌ ಹೆಸರಿನ ಡಿಸೈನರ್ ಸ್ಟುಡಿಯೋ ಇಟ್ಟಿದ್ದೇನೆ. ನಾನು pavitragowda123ma, pavitragowda777_official, redcarpetstudio777 agam ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದೇನೆ. ತಂದೆ-ತಾಯಿ ಹಾಗೂ ಇಬ್ಬರು ಸೋದರರಿದ್ದು, ಕರೆಸ್ಪಾನ್‌ಡೆನ್ಸ್‌ನಲ್ಲಿ ಬಿಸಿಎ ಪದವಿ ಪಡೆದಿದ್ದೇನೆ. ಪಿಯುಸಿ ಓದುವಾಗಲೇ ಉತ್ತರಪ್ರದೇಶ ಮೂಲದ ಐಟಿ ಉದ್ಯೋಗಿ ಸಂಜಯ್ ಕುಮಾರ್ ಸಿಂಗ್ ಪರಿಚಯವಾಗಿದ್ದು, 2007ರಲ್ಲಿ ಕುಟುಂಬದವರು ಒಪ್ಪಿ ಮದುವೆಯಾಗಿದ್ದವು. ಎರಡು ವರ್ಷ ಜೊತೆಯಲ್ಲಿ ವಾಸವಾಗಿದ್ದು, ನಮಗೆ ಹೆಣ್ಣು ಮಗು ಜನಿಸಿತು. ನಂತರ ವಿನಾಕಾರಣ ಜಗಳ ತೆಗೆದು ಪತಿ ಗಲಾಟೆ ಮಾಡುತ್ತಿದ್ದರು. ಈ ಮನಸ್ತಾಪ ಹಿನ್ನೆಲೆಯಲ್ಲಿ ಯಲಚೇನಹಳ್ಳಿಯಲ್ಲಿದ್ದ ತವರು ಮನೆಗೆ ಬಂದು ನೆಲೆಸಿದೆ. ಕೊನೆಗೆ ಇಬ್ಬರೂ ಪರಸ್ಪರ ಒಪ್ಪಿ ವಿವಾಹ ವಿಚ್ಛೇದನ ಪಡೆದವು ಎಂದು ಪವಿತ್ರಾಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಣಕ್ಕಾಗಿ ಪರಿಚಿತನನ್ನೇ ಕಿಡ್ನಾಪ್‌ ಮಾಡಿದ್ದ ನಾಲ್ವರ ಬಂಧನ
ಧರ್ಮರಾಯಸ್ವಾಮಿ ದೇಗುಲದ ನೆಕ್ಲೆಸ್‌ ಕಳವು