ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೆಂಗಳೂರಿನ ಹಾರೋಹಳ್ಳಿಯ ಕಗ್ಗಲೀಪುರದ ನಳಿನಿ (33) ಕೊಲೆಯಾದ ಯುವತಿ. ಆಕೆಯ ಪ್ರಿಯಕರ ತಮಿಳಿನಾಡು ಮೂಲದ ಉಪ್ಪಾರಹಳ್ಳಿಯ ರಾಜಶೇಖರ್ (30) ಕೊಲೆ ಮಾಡಿ ಮಳವಳ್ಳಿ ತಾಲೂಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ ಕೆಲ ದಿನಗಳ ನಂತರ ಆತನೂ ಸಹ ತನ್ನ ತಾಯಿಯೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣದ ಹಿನ್ನೆಲೆ:ಕಳೆದ ಜೂನ್ 22 ರಂದು ತಾಲೂಕಿನ ರಾಷ್ಟ್ರೀಯ ಹೆದ್ದಾರಿ- 948ರ ಜವನಗಹಳ್ಳಿ ಗುಡ್ಡದ ಬಳಿ ನಿರ್ಜನ ಪ್ರದೇಶದಲ್ಲಿ ಸಂಪೂರ್ಣ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬರು ಶವವನ್ನು ಕಂಡು ಬೆಳಕವಾಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಹಾಗೂ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐಗಳಾದ ಪ್ರಕಾಶ್, ಲೋಕೇಶ್, ಶೇಷಾದ್ರಿ, ರವಿಕುಮಾರ್ ಅವರ ವಿಶೇಷ ತಂಡ ರಚಿಸಲಾಗಿತ್ತು.
ಆ ಸಿಸಿ ಟಿವಿ ಪರಿಶೀಲಿಸಿದಾಗ ಪೊಲೀಸರಿಗೆ ಜೂ.24ರಂದು ಟೋಲ್ ಬಳಿ ಸಂಚರಿಸಿದ ಕಾರೊಂದರ ಮೇಲೆ ಅನುಮಾನ ಮೂಡಿತು. ಆ ಕಾರಿನ ಮುಂದಿನ ಸೀಟಿನಲ್ಲಿ ಮಹಿಳೆಯೊಬ್ಬರು ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ನಂತರ ಕಾರಿನ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅದು ರಾಜಶೇಖರ್ಗೆ ಸೇರಿದ್ದು ಎಂದು ಗೊತ್ತಾಗಿದೆ.
ನಳಿನಿಗೆ ದೇವಸ್ಥಾನವೊಂದರಲ್ಲಿ ರಾಜಶೇಖರ್ ಜೊತೆಗೆ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಬಳಿಕ ತನ್ನನ್ನು ಮದುವೆಯಾಗುವಂತೆ ನಳಿನಿ ರಾಜಶೇಖರನನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದಳು. ಮೊದಲೇ ಮದುವೆಯಾಗಿದ್ದ ನಳಿನಿಯನ್ನು ಮದುವೆಯಾಗಲು ರಾಜಶೇಖರನಿಗೆ ಇಷ್ಟವಿರಲಿಲ್ಲ. ಹೀಗಾಗಿ ಇಬ್ಬರ ಜೊತೆಗೆ ಗಲಾಟೆ ನಡೆದಿತ್ತು.
ಪೊಲೀಸರ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಬಂಧನದ ಭೀತಿಯಿಂದ ಕಳೆದ ಜೂನ್ 28ರ ಸಂಜೆ ನಳಿನಿ ಪ್ರಿಯಕರ ರಾಜಶೇಖರ್ ಕೂಡ ತನ್ನ ತಾಯಿಯೊಂದಿಗೆ ತಮಿಳುನಾಡಿನ ಉಪ್ಪಾರಹಳ್ಳಿಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಅಕ್ರಮ ಸಂಬಂಧಕ್ಕೆ ತಾಯಿ ಬಲಿಯಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.ಮುಖ್ಯಾಂಶಗಳು
- ಈಗ ತಾಯಿಯೊಂದಿಗೆ ಆರೋಪಿಯೂ ಕಾಲುವೆಗೆ ಜಿಗಿದು ಆತ್ಮಹತ್ಯೆ
- ಮದುವೆ ಆಗುವಂತೆ ಪಿಡಿಸಿದಾಗ ಪ್ರಿಯಕರನಿಂದ ಹತ್ಯೆ
- ಕೊಲೆ ಪ್ರಕರಣ ಭೇದಿಸಿದ ಬೆಳಕವಾಡಿ ಠಾಣೆ ಪೊಲೀಸರು