ಮದ್ದೂರು:

ಎರಡು ಬೈರ್‌ಗಳ ನಡುವೆ ಶನಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸಾವರ ಮೃತಪಟ್ಟು, ಮತ್ತೊಂದು ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಉಪ್ಪಿನಕೆರೆ ಗೇಟ್ ಮದ್ದೂರು- ಮಳವಳ್ಳಿ ಹೆದ್ದಾರಿಯಲ್ಲಿ ಜರುಗಿದೆ. ಉಪ್ಪಿನಕೆರೆ ಗ್ರಾಮದ ವಸಂತ (48) ಮೃತ ವ್ಯಕ್ತಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವಸಂತ ಮದ್ದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೇದಿದ್ದಾರೆ. ಮತ್ತೊಂದು ಬೈಕ್‌ನ ಹಿಂಬದಿ ಸವಾರ ಮಂಡ್ಯ ತಾಲೂಕು ಯತ್ತಗದಹಳ್ಳಿಯ ಅಭಿಷೇಕ್ ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಉಪ್ಪಿನಕೆರೆ ಗ್ರಾಮದ ವಸಂತ ತಮ್ಮ ಜಾನುವಾರುಗಳಿಗೆ ಮೇವು ಕಟಾವು ಮಾಡಿಕೊಂಡು ಬೈಕ್ ಮೇಲೆ ಬರುತ್ತಿದ್ದಾಗ ಉಪ್ಪಿನಕೆರೆಗೇಟ್ ನಲ್ಲಿ ವೇಗವಾಗಿ ಬಂದ ಮತ್ತೊಂದು ಬೈಕ್‌ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.