ಶ್ರೀರಂಗಪಟ್ಟಣ:

ದುಷ್ಕರ್ಮಿಗಳು ಮಲಗಿದ್ದ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕೆಆರ್ ಎಸ್ ಗ್ರಾಮದ ಹರಳಿಕಟ್ಟೆ ಬಸ್ ತಂಗುದಾಣದಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ರಾಕೇಶ್ (30) ಹತ್ಯೆಗೊಳಗಾದ ದುರ್ದೈವಿ.

ರಾಕೇಶ್ ಮೈಸೂರಿನ ಅಂಗಡಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹತ್ಯೆಯಾದ ಸ್ಥಳದಲ್ಲೇ ಆತನ ಬೈಕ್ ಸಹ ದೊರೆತ್ತಿದ್ದು, ಈತ ಮೈಸೂರಿನಿಂದ ತನ್ನ ಸ್ವಗ್ರಾಮಕ್ಕೆ ಹೋಗುವ ಮಾರ್ಗದ ಮಧ್ಯ ಕೆಆರ್‌ಎಸ್ ಅರಳಿಕಟ್ಟೆ ಬಳಿಯ ತಂಗು ದಾಣದಲ್ಲಿ ಕುಳಿತು ಸ್ನೇಹಿತರೊಂದಿಗೆ ಮದ್ಯ ಸೇವಿಸಿರುವ ಮಾಹಿತಿಗಳು ಪೊಲೀಸರಿಂದ ಲಭ್ಯವಾಗಿದೆ. ಜೊತೆಯಲ್ಲಿದ್ದ ಸ್ನೇಹಿತರೆ ಈ ಹತ್ಯೆ ಮಾಡಿರುವ ಬಗ್ಗೆ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಶೋಭರಾಣಿ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಕೆಆರೆಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆ ಮಾಡಿದವರ ಪತ್ತೆಗಾಗಿ ಶೋಧನ ಕಾರ್ಯ ನಡೆಯುತ್ತಿದೆ.