ಮಹಿಳೆಯ ಪ್ರೀತಿ, ಮೋಸ ಮತ್ತು 30 ಪೀಸ್ ಮಾಡಿ ಕೊಲೆ : ಬೆಂಗಳೂರಿನಲ್ಲಿ ನಡೆದ ಭೀಕರ ಸತ್ಯ ಬಯಲು

KannadaprabhaNewsNetwork | Updated : Sep 24 2024, 06:45 AM IST

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮಿ ಹತ್ಯೆ ಪ್ರಕರಣದಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ತನ್ನ ಸೋದರನಿಗೆ ಕರೆ ಮಾಡಿ ಕೃತ್ಯದ ಬಗ್ಗೆ ತಿಳಿಸಿ ಪರಾರಿಯಾಗಿದ್ದಾನೆ.  

 ಬೆಂಗಳೂರು : ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದ ಬಳಿಕ ತನ್ನ ಸೋದರನಿಗೆ ಕರೆ ಮಾಡಿ ತಿಳಿಸಿ ಮೃತಳ ಸ್ನೇಹಿತ ಪರಾರಿಯಾಗಿದ್ದಾನೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ವೈಯಾಲಿಕಾವಲ್‌ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಹತ್ಯೆಯನ್ನು ಒಡಿಶಾ ಮೂಲದ ವ್ಯಕ್ತಿ  ಎಸಗಿರುವುದು ಖಚಿತವಾಗಿದ್ದು, ಕೃತ್ಯ ಎಸಗಿದ ಬಳಿಕ ನಗರ ತೊರೆದು ತನ್ನೂರಿಗೆ ಆತ ಪರಾರಿಯಾಗಿದ್ದಾನೆ. ತಾಂತ್ರಿಕ ಮಾಹಿತಿ ಆಧರಿಸಿ ನಗರದಲ್ಲೇ ಇದ್ದ ಆರೋಪಿಯ ಸೋದರನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದ ಮಾಲ್‌ನಲ್ಲೇ ಆರೋಪಿ ಕೂಡ ಸ್ಟೋರ್ ಮ್ಯಾನೇಜರ್ ಆಗಿದ್ದ ಎನ್ನಲಾಗಿದೆ. 9 ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತೊರೆದು ನಗರಕ್ಕೆ ಬಂದು ಮಹಾಲಕ್ಷ್ಮಿ ನೆಲೆಸಿದ್ದಳು. ಆ ವೇಳೆ ಮಾರಾಟ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದ ಆಕೆಗೆ ಆರೋಪಿಯ ಪರಿಚಯವಾಗಿದೆ. ಕಾಲ ಕ್ರಮೇಣ ಇಬ್ಬರ ನಡುವಿನ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಇತ್ತೀಚಿಗೆ ಈ ಜೋಡಿ ಮಧ್ಯೆ ಮನಸ್ತಾಪ ಮೂಡಿತ್ತು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಬೇರೊಬ್ಬನ ಜೊತೆ ಮಹಾಲಕ್ಷ್ಮಿ ಸಲುಗೆ ಬೆಳೆದಿತ್ತು. ಈ ವಿಚಾರ ತಿಳಿದು ಕೋಪಗೊಂಡಿದ್ದ ಆರೋಪಿ, ಪರ ಸಂಗ ಬಿಡುವಂತೆ ಮಹಾಲಕ್ಷ್ಮಿಗೆ ತಾಕೀತು ಮಾಡಿದ್ದ. ಇದೇ ವಿಷಯವಾಗಿ ಮಹಾಲಕ್ಷ್ಮಿ ಜತೆ ಆರೋಪಿಗೆ ಮತ್ತೆ ಜಗಳವಾಗಿರಬಹುದು. ಆಗ ಮಾತುಕತೆ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಗೆಳತಿಯನ್ನು ಭೀಕರವಾಗಿ ಕೊಂದು ಬಳಿಕ ಒಡಿಶಾಕ್ಕೆ ಪರಾರಿಯಾಗಲು ಆರೋಪಿ ಯೋಜಿಸಿದ್ದ. ಅಂದು ರಾತ್ರಿ ತನ್ನ ಸೋದರನಿಗೆ ಕರೆ ಮಾಡಿದ ಆರೋಪಿ, ನಾನು ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದೇನೆ. ನನ್ನನ್ನು ಪೊಲೀಸರು ಬಂಧಿಸುತ್ತಾರೆ. ಹಾಗಾಗಿ ನಾನು ಬೆಂಗಳೂರು ತೊರೆದು ಹೋಗುತ್ತಿದ್ದೇನೆ. ನೀನು ತಕ್ಷಣವೇ ಹೊರಟುಬಿಡು ಎಂದು ಹೇಳಿದ್ದ. ಆದರೆ ತನ್ನ ಅಣ್ಣನ ಮಾತು ನಂಬಿ ಆರೋಪಿ ಸೋದರ ನಗರ ತೊರೆದಿರಲಿಲ್ಲ ಎಂದು ಮೂಲಗಳು ವಿವರಿಸಿವೆ.

ಬಂಗಾಳದಲ್ಲಿ ಮೊಬೈಲ್‌ ಸ್ವಿಚ್‌ ಆಫ್‌:

ಹತ್ಯೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಮೃತಳ ಮೊಬೈಲ್ ಕರೆ (ಸಿಡಿಆರ್‌)ಗಳನ್ನು ಪರಿಶೀಲಿಸಿದಾಗ ಆರೋಪಿ ಸೇರಿ ಮೂವರ ಜತೆ ಹೆಚ್ಚಿನ ಸಂಭಾಷಣೆ ನಡೆಸಿರುವುದು ಗೊತ್ತಾಯಿತು. ಈ ಸಿಡಿಆರ್ ಆಧರಿಸಿ ಮಹಾಲಕ್ಷ್ಮಿ ಜತೆ ನಿಕಟ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಲಾಯಿತು. ಆದರೆ ಮೂವರ ಪೈಕಿ ಇಬ್ಬರು ಮಾತ್ರ ಸಿಕ್ಕಿದ್ದರು. ಆದರೆ ಮತ್ತೊಬ್ಬ ಪತ್ತೆಯಾಗಲಿಲ್ಲ. ಆಗ ಆತನ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿದಾಗ ಪಶ್ಚಿಮ ಬಂಗಾಳದಲ್ಲಿ ಕೊನೆ ಬಾರಿ ಲೋಕೇಷನ್ ಸಿಕ್ಕಿತು. ನಂತರ ಆರೋಪಿ ಮೊಬೈಲ್ ಸ್ವಿಚ್ಢ್‌ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ತಂಡಗಳ ಕಾರ್ಯಾಚರಣೆ

ಆರೋಪಿ ಸೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಒಡಿಶಾ ರಾಜ್ಯದ ಹಳ್ಳಿಯಲ್ಲಿ ನೆಲೆಸಿರುವ ಆತನ ಪೋಷಕರನ್ನು ಸಂಪರ್ಕಿಸಲಾಗಿದೆ. ಆದರೆ ಕೃತ್ಯ ಎಸಗಿದ ನಂತರ ಆತ ಊರಿಗೆ ಹೋಗದೆ ಬೇರೆಡೆ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಆರೋಪಿ ಪತ್ತೆಗೆ ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಶೇಷ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ವರದಿ ಕೇಳಿದ ಮಹಿಳಾ ಆಯೋಗ:

ಬೆಂಗಳೂರು: ವೈಯಾಲಿಕಾವಲ್‌ ಮಹಾಲಕ್ಷ್ಮಿ ಬರ್ಭರ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ಮಹಿಳಾ ಆಯೋಗವು ನಗರ ಉಪಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದೆ.ದುಷ್ಕರ್ಮಿಗಳು ಮಹಾಲಕ್ಷ್ಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್‌ ಇಲಾಖೆ ಈ ಪ್ರಕರಣದ ತನಿಖೆಯನ್ನು ನಿಯಮಾನುಸಾರ ಕೈಗೊಂಡು ಇದಕ್ಕೆ ಕಾರಣಿಕೃತರಾದವನ್ನು ಪತ್ತೆ ಮಾಡಿ ವರದಿ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share this article