ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಾಲಕಿ ಪ್ರೀತಿಸಿ, ಮದುವೆಯಾದ ಬಳಿಕ ಗರ್ಭಿಣಿಯಾಗಲು ಕಾರಣರಾದವನ ಮೇಲೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕೇಸು ದಾಖಲಾದ ಘಟನೆ ನಡೆದಿದೆ.ತಾಲೂಕಿನ ಬಲಚವಾಡಿ ಗ್ರಾಮದ ಮಹದೇವಪ್ರಸಾದ್ ಬಲಚವಾಡಿ ಗ್ರಾಮದ ೧೭ ವರ್ಷ ವಯಸ್ಸಿನ ಬಾಲಕಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಬಳಿಕ ಬಾಲಕಿ ಗರ್ಭೀಣಿ ಕೂಡ ಆಗಿದ್ದಾಳೆ. ಮಾ.೨೨ ರಂದು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವೀಚಾರಕಿ ಸೋನಿಯಾ ಬೇಗಂ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿ ಬಾಲಕಿ ಮದುವೆಯಾಗಿ ಗರ್ಭೀಣಿಯಾಗಲು ಕಾರಣನಾದ ಮಹದೇವಪ್ರಸಾದ್ ರ ಮೇಲೆ ಕಾನೂನು ಕ್ರಮಕ್ಕೆ ದೂರು ಸಲ್ಲಿಸಿದ್ದಾರೆ.ಏನಿದು ಪ್ರಸಂಗ: ದೂರಿನ ಪ್ರಕಾರ ಕಳೆದ ಜ.೧ ರಂದು ಬಾಲಕಿ ಬಲಚವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತಾಯಿ ಕಾರ್ಡ್ ಬೇಕು ಎಂದು ಆಸ್ಪತ್ರೆಗೆ ಬಂದಿದ್ದಾರೆ. ಆಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಡಿ.ಸಿ.ಸೌಮ್ಯ ರ ಬಳಿ ಗರ್ಭೀಣಿ ಬಾಲಕಿಯ ವಯಸ್ಸು ಗೊತ್ತಾಗಿದೆ. ನಂತರ ತಾಯಿ ಕಾರ್ಡ್ ಕೊಟ್ಟ ಬಳಿಕ ಕೆಲ ದಿನಗಳಲ್ಲಿ ಬಾಲಕಿಗೆ ಹೆಚ್ಚು ರಕ್ತಸ್ರಾವವಾಗಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೋರಿಸಿದಾಗ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಬಾಲಕಿಗೆ ಗರ್ಭಪಾತವಾಗಿದೆ ಎಂದು ವೈದ್ಯರು ತಿಳಿಸಿದ ಬಳಿಕ ದೂರು ನೀಡಿದ ಬಳಿಕ ಆರೋಪಿ ಮಹದೇವಪ್ರಸಾದ್ ರ ಮೇಲೆ ಫೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.