ಭಗತ್ ಸಿಂಗ್, ಚಂದ್ರಶೇಖರ್ ಆಜಾ಼ದ್ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದರು ಎಂದು ತನಿಖಾ ತಂಡದ ಮೂಲಗಳು ಮಾಹಿತಿ ನೀಡಿವೆ.
ನವದೆಹಲಿ: ಕಳೆದ ಬುಧವಾರ ನೂತನ ಸಂಸತ್ ಭವನದ ಮೇಲೆ ದಾಳಿ ಮಾಡಿದವರೆಲ್ಲರೂ ಕ್ರಾಂತಿಕಾರಿಗಳ ಹೆಸರಿನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ಸದಸ್ಯರಾಗಿದ್ದರು ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಭಗತ್ ಸಿಂಗ್, ಚಂದ್ರಶೇಖರ್ ಆಜಾ಼ದ್ ಮುಂತಾದ ಕ್ರಾಂತಿಕಾರಿಗಳ ಹೆಸರಿನಲ್ಲಿರುವ 6ಕ್ಕೂ ಹೆಚ್ಚು ಗುಂಪುಗಳ ಸದಸ್ಯರಾಗಿದ್ದು, ಅದರಲ್ಲಿ ಅವರ ತತ್ವಾದರ್ಶಗಳ ಕುರಿತ ಚರ್ಚೆ, ವಿಡಿಯೋ, ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ. ಈ ದತ್ತಾಂಶವನ್ನು ತನಿಖಾ ಮೂಲಗಳು ವಾಟ್ಸಾಪ್ ಮಾತೃಸಂಸ್ಥೆಯಾದ ಮೆಟಾ ಸಂಸ್ಥೆಯಿಂದ ಸಂಗ್ರಹಿಸಿದ್ದು, ಈ ಮೂಲಕ ಭಗತ್ ಸಿಂಗ್ ರೀತಿಯಲ್ಲೇ ತಾವೂ ಸಹ ಸಂಸತ್ ಭವನದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಡುವೆ ಲಲಿತ್ ಝಾ ಜೈಪುರದಿಂದ ದೆಹಲಿಗೆ ಬರುವ ಮಾರ್ಗಮಧ್ಯೆ ಸುಟ್ಟಿದ್ದ ಆರೋಪಿಗಳ ಮೊಬೈಲ್ ಸುಟ್ಟು ಕರಕಲಾಗಿದ್ದರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅಣಕು ಸಿಮ್ಕಾರ್ಡ್ಗಳನ್ನೂ ಪೊಲೀಸರು ಪಡೆಯುವ ಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೈಸೂರಿನ ಸಭೆಯ ವೆಚ್ಚ ಭರಿಸಿದ್ದ ಮನೋರಂಜನ್ಸಂಸತ್ ಭವನದ ಮೇಲೆ ಹೊಗೆಬಾಂಬ್ ದಾಳಿ ಮಾಡಿದ ಮನೋರಂಜನ್ ಮತ್ತು ತಂಡ, ದಾಳಿ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲು ಮೈಸೂರಿನಲ್ಲಿ ಸಭೆ ಸೇರಿತ್ತು. ಆಗ ಮೈಸೂರಿಗೆ ಬಂದ 5 ಜನರ ಪ್ರಯಾಣ ವೆಚ್ಚವನ್ನು ಮೈಸೂರಿನಲ್ಲೇ ನೆಲೆಸಿರುವ ಮನೋರಂಜನ್ ಭರಿಸಿದ್ದನು ಎಂಬ ಮಾಹಿತಿ ವಾಟ್ಸಾಪ್ ಮೂಲಕ ತನಿಖಾ ತಂಡಕ್ಕೆ ದೊರಕಿದೆ ಎಂದು ಮೂಲಗಳು ತಿಳಿಸಿವೆ.
ಅಣಕು ಕ್ರೈಂ ದೃಶ್ಯ ಸಂಸತ್ನಲ್ಲಿ ಮರುಸೃಷ್ಟಿಹೊಗೆಬಾಂಬ್ ಸಿಂಪಡಿಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಸಂಸತ್ತಿನಲ್ಲಿ ಅಣಕು ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರೀಯ ಭದ್ರತಾ ಮೀಸಲು ಪಡೆಯ ನಿರ್ದೇಶಕರು, ಸಂಸತ್ ಭವನದ ಭದ್ರತಾ ಸಿಬ್ಬಂದಿ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳು ಹಾಜರಿದ್ದರು ಎಂದು ತಿಳಿದುಬಂದಿದೆ.