ಆನ್‌ಲೈನ್ ಜೂಜಾಟದ ವ್ಯಸನಕ್ಕೆ ತಾವು ಕೆಲಸ ಮಾಡುತ್ತಿದ್ದ ಆಭರಣದ ಅಂಗಡಿಯಲ್ಲಿ ಕಳವು ಮಾಡಿದ್ದ ಓರ್ವ ಕೆಲಸಗಾರ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆನ್‌ಲೈನ್ ಜೂಜಾಟದ ವ್ಯಸನಕ್ಕೆ ತಾವು ಕೆಲಸ ಮಾಡುತ್ತಿದ್ದ ಆಭರಣದ ಅಂಗಡಿಯಲ್ಲಿ ಕಳವು ಮಾಡಿದ್ದ ಓರ್ವ ಕೆಲಸಗಾರ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ನರೇಂದ್ರ ಅಲಿಯಾಸ್ ನರೇಶ್ ಕುಮಾರ್ ಹಾಗೂ ಕುಲದೀಪ್ ಬಂಧಿತರಾಗಿದ್ದು, ಆರೋಪಿಗಳಿಂದ 35 ಲಕ್ಷ ರು. ಮೌಲ್ಯದ 10.12 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ನಗರ್ತಪೇಟೆಯ ಜ್ಯುವೆಲರಿ ಪಾಲಿಶಿಂಗ್ ಅಂಗಡಿಯಲ್ಲಿ ಬೆಳ್ಳಿ ಕಳ್ಳತನ ಬಗ್ಗೆ ಮಾಲಿಕ ಕೃಷ್ಣಬಿಷ್ಣೋಯಿ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಬೆಳ್ಳಿ ಕದ್ದು ತನ್ನೂರಿಗೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿಂಗಳ ಹಿಂದಷ್ಟೇ ಕೃಷ್ಣ ಅವರ ಅಂಗಡಿಯಲ್ಲಿ ನರೇಶ್ ಕೆಲಸಕ್ಕೇ ಸೇರಿದ್ದ. ಆನ್‌ಲೈನ್ ಜೂಜಾಟದ ಹುಚ್ಚಿಗೆ ಬಿದ್ದು ದುಡಿದ ಹಣವನ್ನೆಲ್ಲ ಆತ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ. ಆಗ ಅಂಗಡಿ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಿದ ಆತ, ಕೊನೆಗೆ ಹಣದಾಸೆಗೆ ತನಗೆ ಅನ್ನ ಕೊಟ್ಟ ಮಾಲೀಕನಿಗೆ ದ್ರೋಹ ಬಗೆಯಲು ಸಂಚು ಮಾಡಿದ್ದ. ಈ ಕಳ್ಳತನ ಕೃತ್ಯಕ್ಕೆ ಆತನ ಸ್ನೇಹಿತ ಕುಲದೀಪ್ ಸಹ ಸಾಥ್ ಕೊಟ್ಟಿದ್ದಾನೆ. ಅಂತೆಯೇ ಅಂಗಡಿಯಲ್ಲಿ 10 ಕೆಜಿ ಬೆಳ್ಳಿ ಕದ್ದು ತಮ್ಮೂರಿಗೆ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.