ಕನ್ನಡಪ್ರಭ ವಾರ್ತೆ ನಾಗಮಂಗಲ
ಉಡುಪಿ ಜಿಲ್ಲೆಯ ಬೈಂದೂರಿನ ಕೃಷ್ಣಶಾಸ್ತ್ರಿ ಪುತ್ರ ಅಶೋಕ್ ಪೂಜಾರಿ (35) ಮತ್ತು ಬೆಂಗಳೂರಿನ ಆರ್.ಆರ್.ನಗರ ವಾಸಿ ಉದಯ್ ಶಾನ್ಭಾಗ್ ಪತ್ನಿ ಕಸ್ತೂರಿ ಶಾನ್ಭಾಗ್ (64) ಸ್ಥಳದಲ್ಲೇ ಮೃತಪಟ್ಟಿರುವ ನತದೃಷ್ಟರು. ಮೃತ ಅಶೋಕ್ ಪೂಜಾರಿ ಅಪಘಾತಕ್ಕೀಡಾದ ಬಸ್ನ ಕ್ಲೀನರ್ ಆಗಿದ್ದು, ಕಸ್ತೂರಿಶಾನ್ಭಾಗ್ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರು.
ಬೈಂದೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಗಮ ಟೂರಿಸ್ಟ್ನ ಖಾಸಗಿ ಬಸ್ಸು ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಅಳವಡಿಸಿದ್ದ ಸೂಚನಾ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ರಸ್ತೆಬದಿಗೆ ಪಲ್ಟಿ ಹೊಡೆದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ.ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಒಂದು ಕೈ ತುಂಡಾಗಿದ್ದು, ಇಬ್ಬರಿಗೆ ಅಂಗೈ ತುಂಡಾಗಿದೆ. ಮತ್ತೆ ಕೆಲವರಿಗೆ ಕಾಲು ಹಾಗೂ ಕೈನ ಮೂಳೆ ಮುರಿತವಾಗಿದೆ. ಮತ್ತಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಸ್ಥಳದಲ್ಲೇ ಮೃತಪಟ್ಟಿದ್ದ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್ಭಾಗ್ ಅವರ ಮೃತದೇಹಗಳನ್ನು ಇದೇ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ತಹಸೀಲ್ದಾರ್ ಲೆಫ್ಟಿನೆಂಟ್ ಜನರಲ್ ಡಾ.ಅಶೋಕ್, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ಹೇಮಂತ್ಕುಮಾರ್ ಅವರು ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮರಣೋತ್ತರ ಪರೀಕ್ಷೆ ಬಳಿಕ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್ಭಾಗ್ ಅವರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪಿಎಸ್ಐ ವೈ.ಎನ್.ರವಿಕುಮಾರ್ ಅವರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.