ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಗಾರ್ಮೆಂಟ್ಸ್ ಕಾರ್ಖಾನೆ ಗೋದಾಮಿನಲ್ಲಿ ಎ.ಸಿ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬಟ್ಟೆ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಅಹುತಿಯಾಗಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಜರುಗಿದೆ.ಘಟನೆ ಸಂಭವಿಸಿದ ನಂತರ ಕರ್ತವ್ಯಕ್ಕೆ ಹಾಜರಾದ 12 ಮಂದಿ ಕಾರ್ಮಿಕರು, ಗೋದಾಮಿನ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಹಾಗೂ ಅಕ್ಕ ಪಕ್ಕದ ಮನೆಗಳ ನಿವಾಸಿಗಳು ಯಾವುದೇ ಅನಾಹುತವಿಲ್ಲದೆ ಪಾರಾಗಿದ್ದಾರೆ.
ಬೆಂಕಿ ಅವಘಡ ದ ಸುದ್ದಿ ತಿಳಿದು ಮದ್ದೂರು, ಮಂಡ್ಯ ಹಾಗೂ ಮಳವಳ್ಳಿಯಿಂದ ಆಗಮಿಸಿದ್ದ ಅಗ್ನಿಶಾಮಕ ದಳದ ತಂಡ ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿ ಅನಾಹುತದಲ್ಲಿ ಗೋದಾಮಿನಲ್ಲಿದ್ದ ಸಿದ್ಧ ಉಡುಪು, ಡಿಸೈನ್ ತಯಾರಿಸುವ 15ಕ್ಕೂ ಹೆಚ್ಚು ಬಟ್ಟೆಗಳ ರೋಲ್, 12 ಹೊಲಿಗೆ ಮಿಷಿನ್, ಗೋದಾಮಿನ ಮೇಲ್ಚಾವಣಿ ಮತ್ತು ಕಬ್ಬಿಣದ ವಸ್ತುಗಳು ಬೆಂಕಿಯಿಂದ ಸುಟ್ಟು ಹೋಗಿ ಸುಮಾರು 6 ಕೋಟಿ ರು, ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.ಮದ್ದೂರು ತಾಲೂಕು ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿದ್ದ ಗಿಲ್ ವುಡ್ ಗಾರ್ಮೆಂಟ್ಸ್ ಅನ್ನು ಬೇರೆ ಕೈಗಾರಿಕಾ ಉದ್ಯಮಿಗಳಿಗೆ ಮಾರಾಟ ಮಾಡಿದ ನಂತರ ಮಾಲೀಕರಾದ ದುಗ್ಗಡ್ ಮದ್ದೂರಿನ ಮಳವಳ್ಳಿ ರಸ್ತೆಯ ವಿದ್ಯುತ್ ಗುತ್ತಿಗೆದಾರ ಶಿವಾನಂದ್ ಎಂಬುವವರ ಗೋದಾಮ ಬಾಡಿಗೆ ಪಡೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಸಿದ್ಧ ಉಡುಪುಗಳ ಮಾದರಿಗಳನ್ನು ತಯಾರಿಸಿ ಬೆಂಗಳೂರಿನ ಬೇರೆ ಗಾರ್ಮೆಂಟ್ಸ್ ಗಳಿಗೆ ಕಳಿಸಲಾಗುತ್ತಿತ್ತು.
ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ಬಟ್ಟೆ ದಾಸ್ತಾನು ಮಾಡಿದ್ದ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಏರ್ ಕೂಲರ್ ಸಿಡಿದು ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಇದನ್ನು ಕಂಡು ಆತಂಕಗೊಂಡ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿ ಕಾರ್ಖಾನೆ ಮ್ಯಾನೇಜರ ಪತ್ತೆರಾಜ್ ಆತಂಕಗೊಂಡು ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದಾರೆ.
ನಂತರ ಮಂಡ್ಯ ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಬಿ.ಎಂ.ರಾಘವೇಂದ್ರ, ಸಹಾಯಕಾಧಿಕಾರಿ ಮಂಜೇಗೌಡ ನೇತೃತ್ವದಲ್ಲಿ ಮದ್ದೂರಿನ ಅಗ್ನಿಶಾಮಕ ದಳದ ವಿ.ಕೃಷ್ಣಪ್ಪ, ವಿಜಯಕುಮಾರ್, ಯಮನಯ್ಯ, ಕುಮಾರ್, ಹನುಮಂತಪ್ಪ, ಹೇಮಂತ್, ಮಳವಳ್ಳಿಯ ಸಿದ್ದರಾಮಯ್ಯ, ರಘುನಾಥ್, ನಾಗ ಕುಮಾರ್ ಸೇರಿದಂತೆ 30 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್, ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಹಾಗೂ ಸಿಬ್ಬಂದಿಗಳ ಬೇಟಿನೀಡಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಂಡರು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.ಮೈಸೂರು ವಿಭಾಗದ ಚೆಸ್ಕಾಂ ಎಲೆಕ್ಟ್ರಿಕಲ್ ಅಧೀಕ್ಷಕಿ ಅರ್ಚನ, ಚೆಸ್ಕಾಂ ಎಇ ಅನಿತಾ, ಕಾರ್ಮಿಕ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತಂತೆ ಮಾಲೀಕರು ಮತ್ತು ಮ್ಯಾನೇಜರ್ ಅವರಿಂದ ಮಾಹಿತಿ ಸಂಗ್ರಹಿಸಿದರು.