ಚಿತ್ರ ನಟ ದರ್ಶನ್ ಸೇರಿದಂತೆ ಆರೋಪಿಗಳ ವಿಚಾರಣೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಯುತ್ತಿದೆ. ಆದರೆ ಠಾಣೆಯ ಸುತ್ತ ಶಾಮಿಯಾನ ಹಾಕಿ ಇಡೀ ಠಾಣೆಯ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದಂತೆ ಮರೆಮಾಚಲಾಗಿದೆ. ಪೊಲೀಸರ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ಚಿತ್ರ ನಟ ದರ್ಶನ್ ಸೇರಿದಂತೆ ಆರೋಪಿಗಳ ವಿಚಾರಣೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಯುತ್ತಿದೆ. ಆದರೆ ಠಾಣೆಯ ಸುತ್ತ ಶಾಮಿಯಾನ ಹಾಕಿ ಇಡೀ ಠಾಣೆಯ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದಂತೆ ಮರೆಮಾಚಲಾಗಿದೆ. ಪೊಲೀಸರ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಮಂದಿಯನ್ನು ಅನ್ನಪೂರ್ಣೇಶ್ವರಿ ನಗರದ ಠಾಣೆಯಲ್ಲಿಟ್ಟು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಾಗಿ ವಿಚಾರಣೆಗೆ ಅಡ್ಡಿಯಾಗಬಾರದು ಎಂಬ ‘ಸಬೂಬು’ ನೀಡಿ ಠಾಣೆ ಹೊರಗಡೆ ಶಾಮಿಯಾನ ಹಾಕಲಾಗಿದೆ ಹಾಗೂ ಠಾಣಾ ಕಟ್ಟಡ ಕಾಣದಂತೆ ಪೊಲೀಸರು ಮರೆಮಾಚಿದ್ದಾರೆ.
ಸೂಕ್ಷ್ಮ ಪ್ರಕರಣ- ಡಿಸಿಪಿ ಸ್ಪಷ್ಟನೆ:
‘ಶಾಮಿಯಾನಾ ಮರೆಮಾಚಿರುವ ಹಿಂದೆ ಅನ್ಯ ಉದ್ದೇಶವಿದೆ. ಆರೋಪಿಗಳಿಗೆ ಠಾಣೆ ಒಳಗೆ ರಾಜಾತಿಥ್ಯ ನೀಡಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಸ್ಪಷ್ಟನೆ ನೀಡಿ, ‘ರೇಣುಕಾಸ್ವಾಮಿ ಕೊಲೆ ಕೃತ್ಯವು ಎಲ್ಲ ಸಾಮಾನ್ಯ ಪ್ರಕರಣದಂತಲ್ಲ. ಈ ಪ್ರಕರಣದ ತನಿಖೆಗೆ ಸಾಕಷ್ಟು ಶ್ರಮ ವಹಿಸಲಾಗಿದೆ. ಹಲವು ಆಯಾಮಗಳಿಂದ ತನಿಖೆ ನಡೆದಿದ್ದು, ಪ್ರಕರಣದ ಪಾವಿತ್ರ್ಯತೆ ಕಾಪಾಡಬೇಕಿದೆ. ಹೀಗಾಗಿ ಕೆಲವು ಕ್ರಮ ವಹಿಸಲಾಗಿದೆ ಹೊರತೂ ಬೇರೆ ಉದ್ದೇಶವಿಲ್ಲ. ತನಿಖೆ ವಿಚಾರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಮನವಿ ಮಾಡಿದ್ದಾರೆ.