ಅತ್ಯಾಚಾರಿ ಆರೋಪಿಗೆ 20 ವರ್ಷ ಶಿಕ್ಷೆ, ₹7 ಲಕ್ಷ ದಂಡ

KannadaprabhaNewsNetwork |  
Published : Apr 11, 2026, 02:00 AM IST
10ಕೆಕೆಡಿಯು2ಎ. | Kannada Prabha

ಸಾರಾಂಶ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ರು. ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು ಎರಡನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾ.ಬಿ.ದಿಲೀಪ್‌ಕುಮಾರ್ ತೀರ್ಪು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ರು. ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು ಎರಡನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾ.ಬಿ.ದಿಲೀಪ್‌ಕುಮಾರ್ ತೀರ್ಪು ನೀಡಿದ್ದಾರೆ.

ನಗರದ ತಾವರೆಗೆರೆಯ ಎರಡನೇ ಕ್ರಾಸ್ ವಾಸಿ ಅಜೀಬ್ ಆಲಂ ಅಲಿಯಾಸ್ ಶೇಖ್ ಅಜೀಬ್ ಆಲಂ ಶಿಕ್ಷೆಗೊಳಗಾದ ಅಪರಾಧಿ. ಸೆಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ಆಗಾಗ್ಗೆ ಹೋಗಿ ಆಕೆಯನ್ನು ಭೇಟಿ ಮಾಡುತ್ತಿದ್ದನು. ಆಕೆಯನ್ನು ಪುಸಲಾಯಿಸಿ ನಾನು ನಿನ್ನನ್ನು ಪ್ರೀತಿಸುತ್ತಿದ್ದು, ನೀನು ನನ್ನನ್ನು ಪ್ರೀತಿಸದೆ ಹೋದರೆ ಕೈ ಕೊಯ್ದುಕೊಳ್ಳುವೆನೆಂದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದನು ಎನ್ನಲಾಗಿದೆ.

2023ರ ನ.27ರಂದು ಅಪ್ರಾಪ್ತೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದ ಹಿಂಭಾಗ ಕಾರಿನಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರ ಈ ವಿಚಾರವನ್ನು ತಂದೆ-ತಾಯಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದನು. ವಿಷಯವನ್ನು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದ ಆಕೆ ಕೊನೆಗೊಂದು ದಿನ ಮನನೊಂದು ಮನೆಯ ಕೊಠಡಿಯಲ್ಲೇ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆರೋಪಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿ ಗರ್ಭಿಣಿಯಾಗಿರುವುದು ಬಾಲಕಿಯ ಶವದ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿತ್ತು.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಆನಂದಕುಮಾರ್ ತನಿಖೆ ಕೈಗೊಂಡು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯಕ್ಕೆ ತನಿಖೆಯನ್ನು ಪೂರ್ಣಗೊಳಿಸಿ ಅಪರಾಧಿ ಇರುದ್ಧ ಎರಡನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಸೆಷನ್ಸ್‌ ಮತ್ತು ತ್ವರಿತಗತಿ ಎರಡನೇ ನ್ಯಾಯಾಲಯದ ನ್ಯಾ.ಬಿ.ದಿಲೀಪ್‌ಕುಮಾರ್ ಅವರ ಮುಂದೆ ವಿಚಾರಣೆ ನಡೆಸಿ ಅಪರಾಧಿ ಅಜೀಬ್ ಆಲಂಗೆ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿಶೀಟರ್ ಯಶ್ವಂತ್ ಹತ್ಯೆ ಕೇಸ್‌: 18 ಆರೋಪಿಗಳ ಬಂಧನ
ಪತ್ನಿ ಮೇಲೆ ರೇಪ್ ಕೇಸ್‌ ರದ್ದತಿಗೆ ಹೈ ನಕಾರ