ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ವಿರುದ್ಧ ಇನ್ನೊಂದು ಚಾರ್ಜ್‌ಶೀಟ್‌ಗೆ ಸಿದ್ಧತೆ

Published : Oct 03, 2024, 12:32 PM IST
Actor Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಚಾರ್ಜ್‌ಶೀಟ್‌ಗೆ ಒಳಗಾಗಿರುವ ನಟ ದರ್ಶನ್‌ ವಿರುದ್ಧ ಶೀಘ್ರ ಇನ್ನೊಂದು ಆರೋಪಪಟ್ಟಿ ಸಲ್ಲಿಕೆ ಆಗಲಿದೆ. 

ಬೆಂಗಳೂರು  :  ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಚಾರ್ಜ್‌ಶೀಟ್‌ಗೆ ಒಳಗಾಗಿರುವ ನಟ ದರ್ಶನ್‌ ವಿರುದ್ಧ ಶೀಘ್ರ ಇನ್ನೊಂದು ಆರೋಪಪಟ್ಟಿ ಸಲ್ಲಿಕೆ ಆಗಲಿದೆ.  ಕೆಲ ದಿನಗಳ ಹಿಂದೆ ತೀವ್ರ ಸಂಚಲನ ಸೃಷ್ಟಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆ ಪ್ರಕರಣ ಸಂಬಂಧ ದರ್ಶನ್ ಹಾಗೂ ರೌಡಿಗಳ ವಿರುದ್ಧ ಶೀಘ್ರದಲ್ಲೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ.

ವಿಶೇಷ ಸೌಲಭ್ಯ ಪಡೆದ ದರ್ಶನ್ ಹಾಗೂ ಇಬ್ಬರು ರೌಡಿಗಳ ವಿರುದ್ಧ ತನಿಖೆಯಲ್ಲಿ ಸಾಕಷ್ಟು ಪುರಾವೆ ಸಿಕ್ಕಿದ್ದು, ಈ ಕೃತ್ಯಕ್ಕೆ ಕಾರಾಗೃಹದ ಸಿಬ್ಬಂದಿ ಸಹಕರಿಸಿರುವುದು ಖಚಿತವಾಗಿದೆ. ಈ ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ಪ್ರಕರಣದ ತನಿಖೆ ಭಾಗಶಃ ಪೂರ್ಣಗೊಳಿಸಿರುವ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು, ಆರೋಪ ಪಟ್ಟಿ ಸಲ್ಲಿಕೆಗೆ ಅಂತಿಮ ಹಂತದ ತಯಾರಿ ನಡೆಸಿದ್ದಾರೆ. ಈ ಆರೋಪ ಪಟ್ಟಿಯನ್ನು ಪರಾಮರ್ಶೆಗೆ ಕಾನೂನು ತಜ್ಞರಿಗೆ ಪೊಲೀಸರು ನೀಡಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಆರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ.

ಸಿಗರೇಟು ಸೇದಿದ್ದ ದರ್ಶನ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದ ದರ್ಶನ್‌ ಅವರು, ಆ ಜೈಲಿನಲ್ಲಿ ಅಕ್ರಮವಾಗಿ ವಿಶೇಷ ಸೌಲಭ್ಯ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜೈಲಿನಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗ ಹಾಗೂ ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಜತೆ ಸಿಗರೇಟ್ ಕೈಯಲ್ಲಿ ಹಿಡಿದು ಚಹಾ ಮಗ್ ಜತೆ ಕುರ್ಚಿಯಲ್ಲಿ ವಿಲಾಸಿಯಾಗಿ ದರ್ಶನ್ ಕುಳಿತ ಪೋಟೋ ಬಹಿರಂಗವಾಗಿತ್ತು. ಅಲ್ಲದೆ ರೌಡಿ ಧರ್ಮನ ಸಹಚರನ ಜತೆ ಮೊಬೈಲ್‌ನಲ್ಲಿ ಮಾತನಾಡಿ ವಿಡಿಯೋ ತುಣುಕು ಬಯಲಾಗಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪ್ಪಕರಣದ ಬಳಿಕ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಎತ್ತಂಗಡಿಯಾಗಿದ್ದರು.

ಆಯುಕ್ತರಿಗೆ ಡಿಸಿಪಿ ವಿಚಾರಣಾ ವರದಿ

ಒಂದೆಡೆ ವಿಶೇಷ ಸೌಲಭ್ಯ ಕುರಿತು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾದರೆ, ಮತ್ತೊಂದೆಡೆ ಇದೇ ಪ್ರಕರಣ ಸಂಬಂಧ ಪ್ರತ್ಯೇಕವಾಗಿ ನಗರ ಪೊಲೀಸ್ ಆಯುಕ್ತರಿಗೆ ಆಗ್ನೇಯ ವಿಭಾಗದ ಡಿಸಿಪಿ ವಿಚಾರಣಾ ವರದಿ ಸಲ್ಲಿಸಲಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದ ಭದ್ರತಾ ವ್ಯವಸ್ಥೆ ಕುರಿತು ತನಿಖೆ ವೇಳೆ ಕಂಡು ಲೋಪದೋಷಗಳ ಕುರಿತು ಆಯುಕ್ತರಿಗೆ ಡಿಸಿಪಿ ವರದಿ ನೀಡಲಿದ್ದಾರೆ. ಇದರಲ್ಲಿ ವಿಐಪಿ ಸೌಲಭ್ಯ ಕುರಿತು ಉಲ್ಲೇಖವಾಗಲಿದೆ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು