ಬೈಕ್‌ಗೆ ಟೆಂಪೋ ಟ್ರಾವೆಲರ್ಸ್ ಡಿಕ್ಕಿ : ಸವಾರ ಸಾವು

KannadaprabhaNewsNetwork | Updated : May 15 2025, 04:51 AM IST
Follow Us

ಸಾರಾಂಶ

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಕೃಷ್ಣರ ಪುತ್ರ ವಿಜಯ್ (21) ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಈತ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.

  ಮದ್ದೂರು : ವೇಗವಾಗಿ ಬಂದ ಟೆಂಪೋ ಟ್ರಾವೆಲರ್ಸ್ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರುದ್ರಾಕ್ಷಿ ಪುರ ಗ್ರಾಮದ ಬಳಿ ಮಂಗಳವಾರ ರಾತ್ರಿ ಜರುಗಿದೆ.

ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಕೃಷ್ಣರ ಪುತ್ರ ವಿಜಯ್ (21) ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಈತ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.

ಮೃತ ವಿಜಯ್ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕ್ಲೀನ್ ಫ್ಯಾಕ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಈತನ ಸಂಬಂಧಿಕರೊಬ್ಬರು ನಿಧನರಾಗಿದ್ದ ಹಿನ್ನೆಲೆಯಲ್ಲಿ ಅವರ ಉತ್ತರಕ್ರಿಯಾದಿ ಕಾರ್ಡ್‌ಗಳನ್ನು ಹಂಚಲು ಬೈಕ್‌ನಲ್ಲಿ ತೆರಳಿದ್ದನು.

ರಾತ್ರಿ 10.30 ರ ಸುಮಾರಿಗೆ ವಾಪಸ್ ಕೆ.ಹೊನ್ನಲಗೆರೆ ಗ್ರಾಮಕ್ಕೆ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಬೆಂಗಳೂರು ಮೈಸೂರು ಹಳೆ ಹೆದ್ದಾರಿಯ ರುದ್ರಾಕ್ಷಿ ಪುರ ಸರ್ಕಲ್ ನಲ್ಲಿ ಮೈಸೂರು ಕಡೆಯಿಂದ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಟೆಂಪೋ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜೂಜು ಅಡ್ಡೆ ಮೇಲೆ ದಾಳಿ 9 ಮಂದಿ ಬಂಧನ

ಮಳವಳ್ಳಿ: ತಾಲೂಕಿನ ಮಾಗನೂರು ಗ್ರಾಮದ ಹೊರವಲಯದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 9 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಗ್ರಾಮದ ಬಸವನಪುರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮಂಗಳವಾರ ಸಂಜೆ ಜೂಜು ಆಡುತ್ತಿದ್ದ ಗುಂಪಿನ ಮೇಲೆ ಗ್ರಾಮಾಂತರ ಪಿಎಸ್ಐ ಶ್ರವಣ ದಾಸರಡ್ಡಿ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು 9 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 3500 ರು.ಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.