ಕನ್ನಡಪ್ರಭ ವಾರ್ತೆ ಮಂಡ್ಯ
ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿ ಅವರಿಂದ ೪೨ ಲಕ್ಷ ರು. ಮೌಲ್ಯದ ೫೭೯ ಗ್ರಾಂ ಚಿನ್ನಾಭರಣ ಜತೆಗೆ ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶೋಕಿ ಚಟಕ್ಕೆ ಮೈಸೂರಿನಿಂದ ಮಂಡ್ಯಕ್ಕೆ ಬಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಹಲಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ೨೦೨೪ ಆ.೨೨ರಂದು ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದಲ್ಲಿ ಮನೆಯ ಬಾಗಿಲು ಮುರಿದು ೪೫ ಗ್ರಾಂ ತೂಕದ ಚಿನ್ನಾಭರಣ, ೫ ಕೆ.ಜಿ ತೂಕದ ಬೆಳ್ಳಿ ಆಭರಣ ಹಾಗೂ ೩೫ ಸಾವಿರ ರು. ನಗದು ಕಳ್ಳತನ ಮಾಡಿದ್ದ ಮೈಸೂರಿನ ವಿದ್ಯಾರಣ್ಯಪುರ ನಿವಾಸಿ ಅನಂತ ಅಲಿಯಾಸ್ ಗುರುವ ಅಲಿಯಾಸ್ ಮೆಡ್ಡ (೩೫) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈತನ ವಿರುದ್ಧ ಹಲಗೂರು ಠಾಣೆ ವ್ಯಾಪ್ತಿಯಲ್ಲಿ ಮೂರು, ಬೆಳಕವಾಡಿ ಹಾಗೂ ಕಿರುಗಾವಲು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಹಣ ಮಾಡಲು ಕಳ್ಳತನಕ್ಕಿಳಿದಿದ್ದನು. ದೋಚುತ್ತಿದ್ದ ವಸ್ತುಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದನು. ಆರೋಪಿಯಿಂದ ೩೦೧ ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ೨೨,೩೭,೬೩೪ ರು.ಗಳಾಗಿದೆ. ಇವನೊಂದಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಒಂಟಿ ಮನೆ ಹಾಗೂ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಕೃತ್ಯ ಎಸಗುತ್ತಿದ್ದರು ಎಂದರು.ಆರೋಪಿಯನ್ನು ಬಂಧಿಸಿದ ಹಲಗೂರು ಠಾಣೆ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್ಐ ಮಹೇಂದ್ರ, ಕಿರುಗಾವಲು ಠಾಣೆ ಪಿಎಸ್ಐ ಡಿ.ರವಿಕುಮಾರ್, ಸಿಬ್ಬಂದಿ ರಿಯಾಜ್ಪಾಷಾ, ಪ್ರಭುಸ್ವಾಮಿ, ನಾಗೇಂದ್ರ, ಕೃಷ್ಣಮೂರ್ತಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಶ್ರೀನಿವಾಸ್, ಮಧುಕಿರಣ್, ಶಿವಕುಮಾರ್, ಮಹದೇವಸ್ವಾಮಿ ಅವರನ್ನು ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸಿಸಿದ್ದಾರೆ.
ಎಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ವಿ.ಕೃಷ್ಣಪ್ಪ ಇದ್ದರು.ಚಿನ್ನದ ಸರ ಅಪಹರಿಸಿದ್ದ ಐವರ ಬಂಧನ
ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಕೆಂಪನದೊಡ್ಡಿ ಗ್ರಾಮದಲ್ಲಿ ಕಳೆದ ಡಿ.೩೧ರಂದು ಮಧ್ಯಾಹ್ನ ೨.೨೫ರ ಸುಮಾರಿಗೆ ಮಹಿಳೆ ಅಂಗಡಿಯಲ್ಲಿದ್ದಾಗ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದಿದ್ದಾರೆ. ಟೀ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ೨೬ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಬಳಿಕ ವಿಚಾರಣೆ ಆರಂಭಿಸಿದಾಗ ಐವರು ಕಳ್ಳರ ತಂಡವನ್ನು ಬಂಧಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ಮಂಡ್ಯ ತಾಲೂಕು ಎಂ.ಹಟ್ನ ಗ್ರಾಮದ ಸುದೀಪ್(೨೧), ಎಚ್.ಆರ್.ಚೇತನ್(೨೧), ದರ್ಶನ್(೨೨), ಕಿರಣ್ಕುಮಾರ್ (೩೦) ಮತ್ತು ಮುತ್ತೇಗೆರೆ ಗ್ರಾಮದ ಎಂ.ಆರ್.ಚೇತನ್(೨೫) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಗಮಂಗಲ ಗ್ರಾಮಾಂತರ ಠಾಣೆ, ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ತಲಾ ೨, ಶ್ರೀರಂಗಪಟ್ಟಣ ಮತ್ತು ಮದ್ದೂರು, ಅರಕರೆ, ಕೆಸ್ತೂರು, ಬೆಳಕವಾಡಿ, ಕೆರಗೋಡು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಇವರು ಕ್ಯಾಸಿನೋ, ಶೋಕಿ ಹಾಗೂ ಇನ್ನಿತರ ಚಟಗಳನ್ನು ತೀರಿಸಿಕೊಳ್ಳಲು ಕಳ್ಳತನದ ದಾರಿ ಹಿಡಿದಿದ್ದರು. ಅದಕ್ಕಾಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಕಳ್ಳತನ ಮಾಡಿದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ೨೭೮ ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ೨೦ ಗ್ರಾಂ ತೂಕದ ಒಂದು ಬೆಳ್ಳಿಯ ಕರಡಿಗೆ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ೨೦.೧೨ ಲಕ್ಷ ರೂಗಳಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.ಆರೋಪಿಗಳನ್ನು ಪತ್ತೆ ಮಾಡಿದ ತನಿಖಾ ತಂಡದ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿಎಸ್ಐ ದೇವರಾಜು, ಸಿಬ್ಬಂದಿ ನಟರಾಜು, ಮಹೇಶ್, ರಾಜಶೇಖರ್ ವಿಠ್ಠಲ್ ಜೆ.ಕರಿಗಾರ, ಎಚ್.ಸಿ.ಅರುಣ್, ಸುಬ್ರಮಣಿ, ಚೇತನ, ರವಿಕಿರಣ್, ಲೋಕೇಶ್, ವಾಸುದೇವ ಅವರನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದರು.