ಹಸಿವು ಎಂದಾಗ ಅನ್ನ ಕೊಟ್ಟವಳನ್ನೇ ಚಿನ್ನಕ್ಕಾಗಿ ಕೊಂದ

KannadaprabhaNewsNetwork |  
Published : Jan 12, 2024, 01:47 AM IST
Rajneesh, | Kannada Prabha

ಸಾರಾಂಶ

ಪರಿಚಿತ ವ್ಯಕ್ತಿಯೇ ಹಣ, ಚಿನ್ನಾಭರಣಕ್ಕಾಗಿ ಮಹಿಳೆಯನ್ನು ಹತ್ಯೆಗೈದಿದ್ದು, ಹಸಿವು ಎಂದ ಹಂತಕನಿಗೆ ಅನ್ನವಿಕ್ಕಲು ಹೋದ ವೇಳೆ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಗರದ ಪ್ರಭಾಕರ ಲೇಔಟ್‌ನಲ್ಲಿ ನಡೆದ ಪೇಟಿಂಗ್‌ ಗುತ್ತಿಗೆದಾರನ ಪತ್ನಿಯ ಕೊಲೆ ಮಾಡಿದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದು, ಪರಿಚಿತ ವ್ಯಕ್ತಿಯೇ ಹಣ, ಚಿನ್ನಾಭರಣಕ್ಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಜ.4ರಂದು ಪೆಂಟಿಂಗ್‌ ಗುತ್ತಿಗೆದಾರ ಪ್ರದ್ಯುಮ್ನ ಎಂಬುವರ ಪತ್ನಿ ನೀಲಂ ಅವರನ್ನು ಕೊಲೆ ಮಾಡಲಾಗಿತ್ತು. ಮನೆಗೆ ಬಂದು ಹಸಿವು ಎಂದ ಹಂತಕನಿಗೆ ಅನ್ನವಿಕ್ಕಲು ಹೋದ ವೇಳೆ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಆರೋಪಿ ದೊಡ್ಡ ನಾಗಮಂಗಲದ ನಿವಾಸಿ ರಜನೀಶ್ ಕುಮಾರ್‌ನಿಂದ ದೋಚಿದ್ದ ಚಿನ್ನದ ಓಲೆಗಳು ಹಾಗೂ ಹಣ ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಜಿ.ಆರ್‌.ನವೀನ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹಂತಕನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಟಿ ಕನಸು ನಿರೀಕ್ಷಿದವನಿಗೆ ಸಿಕ್ಕಿದ್ದು ಪುಡಿಗಾಸು:

ಮೂಲತಃ ಉತ್ತರ ಪ್ರದೇಶದ ರಜನೀಶ್ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಕೆಲಸ ಅರಸಿಕೊಂಡು ಬಂದು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಪೆಂಟರ್ ಕೆಲಸ ಮಾಡುತ್ತಿದ್ದ. ಮೃತ ನೀಲಂ ಕುಟುಂಬದವರು ಸಹ ಉತ್ತರಪ್ರದೇಶ ಮೂಲದವರು. ನೀಲಂ ಪತಿ ಪ್ರದ್ಯುಮ್ನ ಪೆಂಟಿಂಗ್ ಗುತ್ತಿಗೆದಾರನಾಗಿದ್ದರೆ, ಪ್ರಭಾಕರ ರೆಡ್ಡಿ ಲೇಔಟ್‌ನಲ್ಲಿ ನೀಲಂ ಸೋದರ ಹಾರ್ಡ್‌ವೇರ್ ಅಂಗಡಿ ಇಟ್ಟಿದ್ದರು.

ವರ್ಷದ ಹಿಂದೆ ನೀಲಂ ಸೋದರನ ಅಂಗಡಿ ಮುಂದಿನ ಕಟ್ಟಡದಲ್ಲಿ ಪೆಂಟಿಂಗ್ ಕೆಲಸ ಮಾಡುವಾಗ ಅವರಿಗೆ ರಜನೀಶ್ ಪರಿಚಯವಾಗಿತ್ತು. ಬಳಿಕ ಒಂದೇ ರಾಜ್ಯದವರಾಗಿದ್ದರಿಂದ ನೀಲಂ ಸೋದರ ಹಾಗೂ ರಜನೀಶ್ ಮಧ್ಯೆ ಆತ್ಮೀಯ ಸ್ನೇಹ ಬೆಳೆಯಿತು. ಆಗಾಗ್ಗೆ ನೀಲಂ ಸೋದರನ ಅಂಗಡಿ ವ್ಯಾಪಾರ ವಹಿವಾಟಿಗೆ ಆರೋಪಿ ನೆರವಾಗುತ್ತಿದ್ದ. ಇದೇ ಗೆಳೆತನದಲ್ಲಿ ಮನೆಗೆ ಹೋಗಿ ಬಂದು ಮಾಡುತ್ತಿದ್ದರಿಂದ ನೀಲಂ ಅವರಿಗೆ ರಜನೀಶ್ ಪರಿಚಯವಿತ್ತು.

ನಿಪ್ಪಾನ್ ಪೆಂಟ್ಸ್‌ ಕಂಪನಿಯ ನಗರದ ಪ್ರಮುಖ ಡೀಲರ್ ಸಹ ಆಗಿದ್ದ ನೀಲಂ ಸೋದರನ ಆರ್ಥಿಕ ಸ್ಥಿತಿ ಬಗ್ಗೆ ತಿಳಿದ ರಜನೀಶ್‌, ಗೆಳೆಯನ ಮನೆಗೆ ಕನ್ನ ಹಾಕಿದರೆ ಕೋಟ್ಯಂತರ ಹಣ ಸಿಗುತ್ತದೆ ಎಂದು ಭಾವಿಸಿದ್ದ. ಹತ್ಯೆಗೂ ನಾಲ್ಕು ದಿನಗಳ ಮುನ್ನ ಪ್ರಭಾಕರ ರೆಡ್ಡಿ ಲೇಔಟ್‌ನಲ್ಲಿ ನೀಲಂ ಅವರ ಮನೆ ಬಳಿ ಬಂದು ಅಲ್ಲಿನ ಭದ್ರತೆ ಬಗ್ಗೆ ಅವಲೋಕಿಸಿ ಆತ ತೆರಳಿದ್ದ.

ಜ.4ರಂದು ನೀಲಂ ಅವರು ಮನೆಯಲ್ಲೇ ಒಬ್ಬರೇ ಇದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ರಜನೀಶ್ ತೆರಳಿದ್ದ. ಆಗ ತನಗೆ ಹಸಿವಾಗುತ್ತಿದೆ ಎಂದಾಗ ಊಟ ಬಡಿಸಲು ಅಡುಗೆ ಮನೆಗೆ ತೆರಳುತ್ತಿದ್ದ ನೀಲಂ ಅವರನ್ನು ಹಿಂಬಾಲಿಸಿದ ರಜನೀಶ್‌, ಆಕೆಯ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಹತ್ಯೆ ಬಳಿಕ ಮನೆಯೊಳಗೆ ಜಾಲಾಡಿದರೂ ಆತನಿಗೆ ಬಿಡಿಗಾಸು ಸಿಕ್ಕಿಲ್ಲ. ಕೊನೆಗೆ ಹುಂಡಿಯನ್ನು ಒಡೆದು ಅದರಲ್ಲಿದ್ದ ₹8 ಸಾವಿರ ಹಾಗೂ ಮೃತ ನೀಲಂ ಧರಿಸಿದ್ದ ಎರಡು ಚಿನ್ನದ ಓಲೆಗಳನ್ನು ದೋಚಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗುರುತು ಮರೆ ಮಾಚಲು ಟೀ ಶರ್ಟ್ ಬದಲಿಸಿದಹತ್ಯೆ ಬಳಿಕ ತನಗೆ ಗುರುತು ಸಿಗದೆ ಮರೆ ಮಾಚಲು ನೀಲಂ ಅವರ ಮನೆಗೆ ಬರುವಾಗ ಟಿ ಶರ್ಟ್‌ ಮೇಲೆ ಶರ್ಟ್‌ ಧರಿಸಿ ಹಾಗೂ ಮುಖ ಕಾಣದಂತೆ ಟವರ್‌ ಸುತ್ತಿಕೊಂಡು ಬಂದಿದ್ದ. ಅಲ್ಲದೆ ಮೊಬೈಲ್ ಅನ್ನು ತನ್ನ ಮನೆಯಲ್ಲೇ ಇಟ್ಟು ಬಂದಿದ್ದ. ಕೊಲೆ ಮಾಡಿದ ಬಳಿಕ ಮೃತರ ಮನೆಯಿಂದ 500 ಮೀ ದೂರ ಹೋದ ಬಳಿಕ ಶರ್ಟ್ ಬದಲಿಸಿ ಆತ ಪರಾರಿಯಾಗಿದ್ದ. ಆದರೆ ಆತ ಪ್ಯಾಂಟ್ ಮತ್ತು ಚಪ್ಪಲಿ ಬದಲಿಸಿರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿದಾಗ ಟೀ ಶರ್ಟ್‌ ಹಾಗೂ ಶರ್ಟ್‌ ಧರಿಸಿದ್ದ ವ್ಯಕ್ತಿ ಚಲನವಲನದ ಮೇಲೆ ಶಂಕೆ ಮೂಡಿತ್ತು. ಈ ಸುಳಿವು ಆಧರಿಸಿ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ತಪಾಸಣೆ ನಡೆಸಿದಾಗ ಅಂತಿಮವಾಗಿ ಹಂತಕನ ಜಾಡು ಸಿಕ್ಕಿತು ಎಂದು ಮೂಲಗಳು ಹೇಳಿವೆ.

850 ಸಿಸಿಟಿವಿ ಪರಿಶೀಲನೆಕೃತ್ಯದ ತನಿಖೆಗಿಳಿದ ಪೊಲೀಸರಿಗೆ ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಪರಿಚಿತನೇ ಎಸಗಿರುವುದು ಖಚಿತವಾಗಿದೆ. ಈ ಮಾಹಿತಿ ಆಧರಿಸಿ ಪೊಲೀಸರಿಗೆ ಪ್ರಭಾಕರೆಡ್ಡಿ ಲೇಔಟ್ ಸುತ್ತಮುತ್ತ ಸುಮಾರು 850 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತು. ಒಂದು ಕ್ಯಾಮೆರಾದಲ್ಲಿ ಆರೋಪಿ ಮುಖಚಹರೆ ಪತ್ತೆಯಾಯಿತು. ಅದರ ಫೋಟೋ ತೆಗೆದು ಪ್ರದ್ಯುಮ್ನ ಅವರಿಗೆ ತೋರಿಸಿದಾಗ ಹಂತಕನ ಗುರುತು ಪತ್ತೆ ಹಚ್ಚಿದ್ದರು. ಕೃತ್ಯ ಎಸಗಿ ತನ್ನೂರು ಸೇರಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆ : ನೀರಿಲ್ಲದೆ ಮುಳುಗದ ಅಜ್ಜಿ ಸೇಫ್