ವಿಚಾರಣೆ ನೆಪದಲ್ಲಿ ಪೊಲೀಸರಿಂದ ಮಹಿಳೆ ಮೇಲೆ ಹಲ್ಲೆ...!

KannadaprabhaNewsNetwork |  
Published : Feb 15, 2024, 01:15 AM IST
14ಕೆಎಂಎನ್‌ಡಿ-1ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆ ರೂಪಾದೇವಿ. | Kannada Prabha

ಸಾರಾಂಶ

ಯಾವ ಕಾರಣವೂ ಇಲ್ಲದೆ ಮಹಿಳೆಯರನ್ನು ಠಾಣೆಗೆ ಕರೆತಂದು ಮಾರಣಾಂತಿಕ ಹಲ್ಲೆ ಮಾಡಿ ಗೂಂಡಾಗಿರಿ ವರ್ತನೆ ತೋರಿರುವ ಪೊಲೀಸರ ಕ್ರಮ ಖಂಡನೆ. ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಕೊಲೆ, ಬಾಲ್ಯ ವಿವಾಹದಂತಹ ಮಹಿಳಾ ವಿರೋಧಿ ವಿಚಾರಗಳಲ್ಲಿ ಮಂಡ್ಯ ಸುದ್ದಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಚಾರಣೆ ನೆಪದಲ್ಲಿ ಮಹಿಳೆಯನ್ನು ಠಾಣೆಗೆ ಕರೆತಂದು ಪೊಲೀಸರರು ಹಲ್ಲೆ ನಡೆಸಿರುವ ಘಟನೆ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ನಡೆದಿದೆ. ಪೊಲೀಸರ ಥಳಿತದಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಮಹಿಳಾ ಮುಖಂಡರು ಪ್ರತಿಭಟನೆ ನಡೆಸಿ ಪಿಎಸ್‌ಐ ಅಯ್ಯನಗೌಡರ ವಿರುದ್ಧ ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಮಹಿಳೆ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್‌.ಯತೀಶ್‌ ಅವರು ಪಿಎಸ್‌ಐ ಅಯ್ಯನಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಡೆದಿದ್ದೇನು?

ಇಲ್ಲಿನ ಅಶೋಕನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ರವಿ ನರ್ಸಿಂಗ್‌ ಹೋಂ ಪಕ್ಕದ ನಿವಾಸಿ ರೂಪಾದೇವಿ (39) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆ. ಹಸುಗಳನ್ನು ಸಾಕಿಕೊಂಡಿರುವ ರೂಪಾದೇವಿ ಮತ್ತು ಆಕೆಯ ತಾಯಿ ಮನೆಯ ಪಕ್ಕದಲ್ಲೇ ಹಾಲು ಕರೆದು ಗ್ರಾಹಕರಿಗೆ ನೀಡುತ್ತಾ ಬದುಕು ಸಾಗಿಸುತ್ತಿದ್ದರು. ಹಸುಗಳನ್ನು ರಸ್ತೆಗಳಲ್ಲೇ ಕಟ್ಟಿಹಾಕುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಪಕ್ಕದ ಮನೆಯವರೂ ಸಹ ಹಸುಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಈ ನಡುವೆ ರೂಪಾಗೆ ಸೇರಿದ ಹಸು ಮಹಿಳಾ ಪೇದೆ ವನಜಾಕ್ಷಿ ಅವರ ಸ್ಕೂಟರ್‌ಗೆ ಅಡ್ಡ ಬಂದಿದ್ದರಿಂದ ಬಿದ್ದು ಗಾಯಗೊಂಡಿದ್ದರು. ಇದಕ್ಕೆ ಪರಿಹಾರ ನೀಡುವಂತೆ ರೂಪಾದೇವಿಗೆ ಮಹಿಳಾ ಪೇದೆ ಒತ್ತಡ ಹಾಕುತ್ತಿದ್ದರು. ಪ್ರಕರಣ ಸಂಬಂಧ ಇಬ್ಬರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗಿತ್ತು.

ಮತ್ತೆ ಹಸು ಕಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ರೂಪಾದೇವಿಯನ್ನು ಪೊಲೀಸ್ ಜೀಪಿನಲ್ಲಿ ಯಾವುದೇ ಮಹಿಳಾ ಪೊಲೀಸರಿಲ್ಲದೆ, ಪುರುಷ ಪೊಲೀಸರೇ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಲಾಠಿ ಮತ್ತು ಬೆಲ್ಟ್‌ನಿಂದ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರೂಪಾದೇವಿಯ ಎರಡೂ ಕೈಗಳು ಮತ್ತು ಕಾಲು ಊತ ಬಂದಿದ್ದು, ಕೆಲವೆಡೆ ಲಾಠಿ ಏಟಿನ ಬರೆ ಬಂದಿದೆ. ಜೊತೆಗೆ ಕೈಗಳು ನೀಲಿಗಟ್ಟಿವೆ. ಪೊಲೀಸರ ಥಳಿತದಿಂದ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ.

ಪಿಎಸ್‌ಐ ಅಯ್ಯನಗೌಡ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ವಿರುದ್ಧ ಸಿಡಿದೆದ್ದ ಹೋರಾಟಗಾರರು ಹಲ್ಲೆಗೊಳಗಾದ ಮಹಿಳೆಯ ನೆರವಿಗೆ ಧಾವಿಸಿದರು. ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಪೂರ್ಣಿಮಾ, ಸಿದ್ದರಾಜು ಸೇರಿ ಹಲವರು ಭೇಟಿಯಾಗಿ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರ ನಡೆ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‌ಐ ಅಯ್ಯನಗೌಡ ವಿರುದ್ಧ ಪ್ರತಿಭಟನೆ

ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪಿಎಸ್‌ಐ ಅಯ್ಯನಗೌಡ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದ ಪೂರ್ವ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಯಾವ ಕಾರಣವೂ ಇಲ್ಲದೆ ಮಹಿಳೆಯರನ್ನು ಠಾಣೆಗೆ ಕರೆತಂದು ಮಾರಣಾಂತಿಕ ಹಲ್ಲೆ ಮಾಡಿ ಗೂಂಡಾಗಿರಿ ವರ್ತನೆ ತೋರಿರುವ ಪೊಲೀಸರ ಕ್ರಮ ಖಂಡಿಸಿದರು. ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಕೊಲೆ, ಬಾಲ್ಯ ವಿವಾಹದಂತಹ ಮಹಿಳಾ ವಿರೋಧಿ ವಿಚಾರಗಳಲ್ಲಿ ಮಂಡ್ಯ ಸುದ್ದಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿದರು.

ಘಟನೆಗೆ ಪ್ರಮುಖ ಕಾರಣವಾಗಿರುವ ಪಿಎಸ್‌ಐ ಅಯ್ಯನಗೌಡ ಮತ್ತು ಆತನ ಜೊತೆಗೆ ಸಹಕರಿಸಿರುವ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಅಯ್ಯನಗೌಡ ವಿರುದ್ಧ ಹಲವು ಗಂಭೀರವಾದ ಆರೋಪಗಳಿದ್ದು, ಆತ ಬೇರಾವುದೇ ಜಾಗಕ್ಕೆ ಅಧಿಕಾರಿಯಾಗಿ ನೇಮಕವಾದರೂ ಅಮಾಯಕರ ಮೇಲಿನ ದೌರ್ಜನ್ಯ ಮುಂದುವರಿಯುತ್ತದೆ. ಆದ್ದರಿಂದ ಆತನನ್ನು ಕೆಲಸದಿಂದಲೇ ವಜಾ ಮಾಡಬೇಕು. ಮಂಡ್ಯದ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಮಹಿಳೆಯರ ವಿಚಾರದಲ್ಲಿ ಸಂವೇದನಾಶೀಲರಾಗಿ ಕೆಲಸ ಮಾಡಬೇಕು. ನೊಂದ ಮಹಿಳೆಗೆ ಸೂಕ್ತ ರಕ್ಷಣೆ ಮತ್ತು ಆತನಿಂದ ಪರಿಹಾರ ಸಿಗಬೇಕು, ಇಂತಹ ಘಟನೆಗಳು ಪದೇ ಪದೇ ಮರುಕಳಿಸದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿಐಟಿಯುನ ಸಿ. ಕುಮಾರಿ, ಮುಖಂಡರಾದ ಲತಾಶಂಕರ್, ರಾಧಾಮಣಿ, ಕೃಷ್ಣೇಗೌಡ, ಕೃಷ್ಣಪ್ರಕಾಶ್, ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಯ್ಯನಗೌಡ ವಿರುದ್ಧ ಎಫ್‌ಐಆರ್

ಕ್ಷುಲ್ಲಕ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ರೂಪಾದೇವಿ ತಾಯಿ ಗೌರಮ್ಮ ನೀಡಿದ ದೂರಿನನ್ವಯ ಪೂರ್ವ ಪೊಲೀಸ್ ಠಾಣೆ ಪಿಎಸ್‌ಐ ಅಯ್ಯನಗೌಡ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಗಳನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋದ ವಿಷಯ ಪಕ್ಕದ ಮನೆಯವರಾದ ಶೋಭಾ ನನಗೆ ತಿಳಿಸಿದರು. ನಾನು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ವಿಷಯ ತಿಳಿದು ತಕ್ಷಣವೇ ಪೂರ್ವ ಪೊಲೀಸ್ ಠಾಣೆಗೆ ಬಂದು ನೋಡಿದಾಗ ನನ್ನ ಮಗಳು ರೂಪಾ ಸುಸ್ತಾಗಿ ಕುಳಿತಿದ್ದಳು. ಮಹಿಳಾ ಪೊಲೀಸರು ನೀರು ಕೊಡುತ್ತಿದ್ದರು. ಏನಾಯಿತೆಂದು ಮಗಳನ್ನು ಕೇಳಿದಾಗ ಪೊಲೀಸರು ಜೀಪ್‌ನಲ್ಲಿ ಕರೆದುಕೊಂಡು ಬಂದು ಹೊಡೆದಿದ್ದಾಗಿ ತಿಳಿಸಿದಳು. ನಂತರ ಅವಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದೆ. ನನ್ನ ಮಗಳನ್ನು ಠಾಣೆಗೆ ಕರೆದುಕೊಂಡು ಹಲ್ಲೆ ಮಾಡಿರುವುದು ಪೂರ್ವ ಠಾಣೆ ಪಿಎಸ್‌ಐ ಅಯ್ಯನಗೌಡ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಹಲವಾರು ಕಡೆ ಅಯ್ಯನಗೌಡ ಅಸಭ್ಯ ವರ್ತನೆಪಿಎಸ್‌ಐ ಅಯ್ಯನಗೌಡ ಅಸಭ್ಯ ವರ್ತನೆ ಈಗ ಹೊಸದೇನೂ ಅಲ್ಲ. ಈ ಹಿಂದೆ ಕಾರ್ಯನಿರ್ವಹಿಸಿದ ಪೊಲೀಸ್‌ ಠಾಣೆಗಳಲ್ಲೂ ಅಸಭ್ಯವಾಗಿ ವರ್ತಿಸಿರುವ ನಿದರ್ಶನಗಳಿವೆ. ಈ ಹಿಂದೆ ಅವರು ಬೆಸಗರಹಳ್ಳಿ, ಪಾಂಡವಪುರ, ಕೆ.ಎಂ. ದೊಡ್ಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದರ್ಪ ಪ್ರದರ್ಶಿಸಿ ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಾಂಡವಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ರೈತರು ಅಯ್ಯನ ಗೌಡ ವಿರುದ್ಧ ಘೇರಾವ್ ಮಾಡಿದ್ದರು. ಹೀಗೆ ತಾವು ಕೆಲಸ ಮಾಡಿದ ಠಾಣೆಯಲ್ಲಿದ್ದಾಗಲೆಲ್ಲ ಒಂದಲ್ಲಾ ಒಂದು ರೀತಿ ದೌರ್ಜನ್ಯದಿಂದ ನಡೆದುಕೊಂಡಿರುವ ಇತಿಹಾಸ ಇರುವ ಅಯ್ಯನಗೌಡ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದಲೇ ವಜಾ ಮಾಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್. ಯತೀಶ್ ಅವರಿಗೆ ಮನವಿ ಮಾಡಿದ್ದಾರೆ. ಅಯ್ಯನ್‌ಗೌಡ ಬಡ್ತಿ ಪಡೆಯುವ ಹಂತದಲ್ಲಿರುವಾಗ ಅಮಾನತುಗೊಂಡು ಹಿನ್ನಡೆ ಅನುಭವಿಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿ ಅಮಾನವೀಯ ವರ್ತನೆ ಪ್ರದರ್ಶಿಸಿರುವ ಪಿಎಸ್‌ಐ ಅಯ್ಯನಗೌಡ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅಯ್ಯನಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

-ಎನ್‌.ಯತೀಶ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕರು

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಾಯಿ ಮೂತ್ರ ವಿಸರ್ಜನೆ ವಿಚಾರಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಮಧ್ಯೆ ಮಾರಾಮಾರಿ
25 ಅಡಿ ಆಳದ ಗುಂಡಿಗೆ ಬಿದ್ದಿದ್ದ ಮಹಿಳೆ ರಕ್ಷಿಸಿದ ಪೊಲೀಸರು!