ಕೆಲಸದಿಂದ ತೆಗೆದದ್ದಕ್ಕೆ ಲ್ಯಾಪ್‌ಟಾಪ್‌ ಮಳಿಗೆಗೆ ಬುರ್ಖಾ ವೇಷದಲ್ಲಿ ಬಂದು ಕನ್ನ!

KannadaprabhaNewsNetwork |  
Published : Mar 19, 2026, 03:30 AM IST
ಬೆಳಗಾವಿ  | Kannada Prabha

ಸಾರಾಂಶ

ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕಿದ ಮಾಲೀಕನಿಗೆ ಬುದ್ಧಿ ಕಲಿಸಲು ಲ್ಯಾಪ್‌ಟಾಪ್ ಮಾರಾಟ ಮಳಿಗೆಗೆ ಮಹಿಳೆಯರಂತೆ ಬುರ್ಖಾ ಧರಿಸಿ ಕಳವು ಮಾಡಿದ್ದ ತಂದೆ-ಮಗ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕಿದ ಮಾಲೀಕನಿಗೆ ಬುದ್ಧಿ ಕಲಿಸಲು ಲ್ಯಾಪ್‌ಟಾಪ್ ಮಾರಾಟ ಮಳಿಗೆಗೆ ಮಹಿಳೆಯರಂತೆ ಬುರ್ಖಾ ಧರಿಸಿ ಕಳವು ಮಾಡಿದ್ದ ತಂದೆ-ಮಗ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ನಾಗವಾರ ಟಿ.ಚನ್ನಯ್ಯಲೇಔಟ್‌ನ ಎಂ. ಮಂಜುನಾಥ್‌ ಹಾಗೂ ಅವರ ಪುತ್ರ ಎಂ. ಹೇಮಂತ್‌ ಬಂಧಿತರಾಗಿದ್ದು, ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳ ಬಿಡಿ ಭಾಗಗಳು ಹಾಗೂ ಹಾರ್ಡ್‌ಡಿಸ್ಕ್‌ಗಳು ಸೇರಿದಂತೆ 80 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಎಚ್‌ಬಿಆರ್‌ ಲೇಔಟ್‌ನ ನಿತೇಶ್ ಕಂಪ್ಯೂಟರ್ಸ್ ಮಳಿಗೆಗೆ ಶಟರ್ ಬೀಗ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಕೃತ್ಯದ ತನಿಖೆಗಿಳಿದ ಗೋವಿಂಪುರ ಠಾಣೆ ಇನ್ಸ್‌ಪೆಕ್ಟರ್ ಕಿರಣ್ ನೇತೃತ್ವ ತಂಡವು, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ತಂದೆ-ಮಗನನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾನು ಕೆಲಸ ಮಾಡುತ್ತಿದ್ದ ಅಂಗಡಿ

ಹಲವು ವರ್ಷಗಳಿಂದ ನಿತೇಶ್ ಕಂಪ್ಯೂಟರ್ಸ್ ಹೆಸರಿನಲ್ಲಿ ಕಂಪ್ಯೂಟರ್ ಬಿಡಿ ಭಾಗಗಳ ಮಾರಾಟ ಮಳಿಗೆಯನ್ನು ರಘು ನಡೆಸುತ್ತಿದ್ದಾರೆ. ಈ ಅಂಗಡಿಯಲ್ಲಿ ಲ್ಯಾಪ್‌ಟಾಪ್ ರಿಪೇರಿ ಕೆಲಸಗಾರನಾಗಿ ಹೇಮಂತ್ ದುಡಿಯುತ್ತಿದ್ದ. ಆದರೆ ಹಣಕಾಸು ವಿಚಾರವಾಗಿ ರಘು ಹಾಗೂ ಹೇಮಂತ್ ಮಧ್ಯೆ ಮನಸ್ತಾಪವಾಯಿತು. ಈ ಹಿನ್ನೆಲೆಯಲ್ಲಿ ಆತನನ್ನು ರಘು ಕೆಲಸದಿಂದ ತೆಗೆದು ಹಾಕಿದ್ದ. ಇದರಿಂದ ಕೆರಳಿದ ಹೇಮಂತ್‌, ತನ್ನ ಮಾಲೀಕನಿಗೆ ಬುದ್ಧಿ ಕಲಿಸಲು ಕಳ್ಳತನ ಸಂಚು ರೂಪಿಸಿದ್ದಾನೆ. ಈ ಕೃತ್ಯಕ್ಕೆ ಮಗನಿಗೆ ತಂದೆ ಮಂಜುನಾಥ್ ಸಾಥ್ ಕೊಟ್ಟು ಈಗ ಜೈಲು ಸೇರುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುರ್ಖಾ ಧರಿಸಿ ಅಪ್ಪ-ಮಗ ಕನ್ನ

ಅಂತೆಯೇ ಮಾ.13 ರಂದು ಅಂಗಡಿ ವಹಿವಾಟು ಮುಗಿಸಿ ಬಾಗಿಲು ಬಂದ್ ಮಾಡಿ ರಘು ಮನೆಗೆ ಮರಳಿದ್ದರು. ಆಗ ರಾತ್ರಿ ಅವರ ಅಂಗಡಿಗೆ ತಮ್ಮ ಗುರುತು ಸಿಗದಂತೆ ಮರೆ ಮಾಚಲು ಬುರ್ಖಾ ಧರಿಸಿ ಅಪ್ಪ-ಮಗ ಕನ್ನ ಹಾಕಿದ್ದಾರೆ. ಆ ಅಂಗಡಿ ಶಟರ್ ಬೀಗ ಮುರಿದು ಒಳ ಪ್ರವೇಶಿಸಿದ ಆರೋಪಿಗಳು, ಅಲ್ಲಿದ್ದ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್ಸ್‌ ಬಿಡಿ ಭಾಗಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಮರುದಿನ ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಜಾಡು ಸಿಕ್ಕಿದೆ. ಈ ಸುಳಿವು ಆಧರಿಸಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

- ಆರೋಪಿ ಹೇಮಂತ್‌ ಮಳಿಗೆಯಲ್ಲಿ ಲ್ಯಾಪ್‌ಟಾಪ್‌ ರಿಪೇರಿ ಕೆಲಸಕಿದ್ದ

-ಹಣದ ವಿಚಾರಕ್ಕೆ ಮಾಲೀಕ ಆತನನ್ನು ಕೆಲಸದಿಂದ ತೆಗೆದಿದ್ದ

-ಇದರಿಂದ ಸಿಟ್ಟಿಗೆದ್ದ ಆತ ಮಾಲೀಕನಿಗೆ ಬುದ್ಧಿ ಕಲಿಸಲು ಸಂಚು ರೂಪಿಸಿದ

-ಈ ಕೃತ್ಯಕ್ಕೆ ಮಗನಿಗೆ ತಂದೆ ಸಾಥ್ ಕೊಟ್ಟು ಈಗ ಇಬ್ಬರು ಜೈಲುಪಾಲಾಗಿದ್ದಾರೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಲ್ಯಾಣ ಮಂಟಪದಲ್ಲಿ ಅತಿಥಿ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ್ದವ ಬಂಧನ
ಆನ್‌ಲೈನ್‌ ಜೂಜಿಂದ ದಿವಾಳಿಯಾಗಿ ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದ್ದವನ ಬಂಧನ