;Resize=(412,232))
ಬೆಂಗಳೂರು : ಆಡುಗೋಡಿಯ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಸಾವು ಇನ್ನೂ ನಿಗೂಢವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಆಡುಗೋಡಿ ಠಾಣೆ ಪೊಲೀಸರು ಜಾರ್ಖಂಡ್ನಲ್ಲಿರುವ ಯುವತಿಯ ಪಾಲಕರಿಗೆ ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಪೂಜಾ ದತ್ತ (30) ಅವರ ಮೃತದೇಹ ಸೋಮವಾರ ಸಂಜೆ ಆಡುಗೋಡಿಯ ಎ.ಕೆ ಕಾಲೋನಿಯ ಮನೆಯೊಂದರಲ್ಲಿ ಪತ್ತೆಯಾಗಿತ್ತು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಬೆತ್ತಲೆಯಾಗಿ, ಕೊಳೆತ ಸ್ಥಿತಿಯಲ್ಲಿ ಯುವತಿ ಮೃತ ದೇಹ ಪತ್ತೆಯಾಗಿತ್ತು.
ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪೂಜಾ ದತ್ತ ಕಳೆದ 1 ವರ್ಷದ ಹಿಂದೆ ಕೆಲಸ ಬಿಟ್ಟಿದ್ದಳು. ಬಾಡಿಗೆ ಮನೆ ಮಾಡಿಕೊಂಡು ಒಬ್ಬಳೇ ವಾಸವಾಗಿದ್ದಳು. ಈಕೆ ಜಾರ್ಖಂಡ್ ಮೂಲದವಳಾಗಿದ್ದಾಳೆ. ಈಕೆಯ ಮನೆಗೆ ಯುವಕನೊಬ್ಬ ಬಂದು ಹೋಗುತ್ತಿದ್ದ ಎಂದು ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ.
ಗೋಡೆಗಳ ಮೇಲೆ ವಿಚಿತ್ರ ಬರಹ:
ಯುವತಿಯು ಗೋಡೆಗಳ ಮೇಲೆ ಬಣ್ಣದ ಚೀಟಿಗಳನ್ನು ಅಂಟಿಸಿ ಅದರ ಮೇಲೆ ಇಂಗ್ಲಿಷ್ನಲ್ಲಿ ಹಲವು ವಿಚಿತ್ರ ಬರಹಗಳನ್ನು ಬರೆದಿರುವುದು ಪತ್ತೆಯಾಗಿದೆ. ಜತೆಗೆ ಪೂಜಾ ರೂಮ್ನಲ್ಲಿ ಕಸದ ರಾಶಿ ಸಿಕ್ಕಿದೆ. ಪೂಜಾಳ ವಿಚಿತ್ರ ವರ್ತನೆಗೆ ಇದು ಸಾಕ್ಷಿ ಎನ್ನುವಂತಿದೆ. ಮೇಲ್ನೋಟಕ್ಕೆ ಆಕೆ ಮಾನಸಿಕ ಅಸ್ವಸ್ಥೆ ಎಂಬುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಆಕೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.