ಜಗ್ಗೇಶ್‌ 5 ಬಾರಿ ಯಲಾಕುನ್ನಿ ನೋಡಿದ್ದಾರೆ : ಹಳ್ಳಿ ಹಿನ್ನೆಲೆಯಲ್ಲಿ ಮೂಡಿದ ಪಕ್ಕಾ ಮನರಂಜನೆ ಸಿನಿಮಾ-ಕೋಮಲ್‌

KannadaprabhaNewsNetwork |  
Published : Oct 25, 2024, 12:47 AM ISTUpdated : Oct 25, 2024, 05:17 AM IST
Actor Komal

ಸಾರಾಂಶ

ಕೋಮಲ್ ನಟನೆಯ ಯಲಾಕುನ್ನಿ ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೋಮಲ್ ಅವರ ಮಾತುಗಳು.

ಆರ್‌. ಕೇಶವಮೂರ್ತಿ

ಯಲಾಕುನ್ನಿ ಯಾವ ರೀತಿ ಸಿನಿಮಾ?

ಸಂಪೂರ್ಣವಾಗಿ ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಪಕ್ಕಾ ಮನರಂಜನೆಯ ಸಿನಿಮಾ. ಇದರ ಜತೆಗೆ ಪ್ರೀತಿ, ಸಂಬಂಧಗಳು, ದೊಡ್ಡವರು, ಗೌರವ ಇತ್ಯಾದಿ ವಿಷಯಗಳು ಬರುತ್ತದೆ. ರೆಟ್ರೋ ಫೀಲ್‌ ಇರುವ ಸಿನಿಮಾ.

ಚಿತ್ರದ ಮುಖ್ಯ ಕೇಂದ್ರ ಬಿಂದು ಏನು?

ಹಳ್ಳಿಗಳನ್ನು ಬಿಟ್ಟು ಸಾವಿರಾರು ಮಂದಿ ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ. ಹೀಗೆ ನಗರಕ್ಕೆ ಬಂದ ಮೇಲೆ ಹಳ್ಳಿಗಳು ಏನಾಗುತ್ತಿವೆ, ಇಲ್ಲಿಗೆ ಬಂದವರ ಕತೆ ಏನೆಂಬುದನ್ನು ತುಂಬಾ ಮನರಂಜನೆಯಲ್ಲಿ ಹೇಳುವ ಸಿನಿಮಾ ಇದು. ನಾನು ಇಲ್ಲಿ ಊರನ್ನು ಉದ್ಧಾರ ಮಾಡುವ ಗೌಡನ ಪಾತ್ರ ಮಾಡಿದ್ದೇನೆ. ಎರಡು ರೀತಿಯ ಶೇಡ್‌ ಇರುವ ಕ್ಯಾರೆಕ್ಟರ್‌ ನನ್ನದು.

ವಜ್ರಮುನಿ ಗೆಟಪ್‌ ಯಾಕೆ?

ಊರಿಗೆ ದೇವಸ್ಥಾನ ಕಟ್ಟಿಸಿರುವ ಗೌಡ, ತುಂಬಾ ಕಠೋರ ಸ್ವಭಾವ. ಆ ಕಾರಣಕ್ಕೆ ಆತ ಊರಿನ ಜನರನ್ನು ಎದುರು ಹಾಕಿಕೊಂಡಿರುತ್ತಾನೆ. ಜನರ ದೃಷ್ಟಿಯಲ್ಲಿ ಮಹಾನ್‌ ಕೋಪಿಷ್ಠ ಎಂಬುದನ್ನು ಹೇಳುವುದಕ್ಕೆ ವಜ್ರಮುನಿ ಪಾತ್ರವನ್ನು ಸೃಷ್ಟಿಸಲಾಗಿದೆ.ವಜ್ರಮುನಿ ಪಾತ್ರದಲ್ಲಿ ನಿಮ್ಮನ್ನು ನೀವು ನೋಡಿಕೊಂಡಾಗ?

ತುಂಬಾ ಪ್ರಯಾಸಪಟ್ಟು ಮೌಂಟ್‌ ಎವರೇಸ್ಟ್‌ ಹತ್ತುತ್ತೇವೆ. ಹತ್ತುವಾಗ ತುಂಬಾ ಕಷ್ಟ ಆಗುತ್ತದೆ. ಆದರೆ, ಶಿಖರ ಹತ್ತಿದ ಮೇಲೆ ಅದರ ತುದಿಯಲ್ಲಿ ನಮ್ಮ ದೇಶದ ಬಾವುಟ ನೆಟ್ಟಾಗ ಆಗುವ ಖುಷಿ, ಸಾರ್ಥಕತೆ ಇದಿಯಲ್ಲ, ಅದೇ ರೀತಿ ನನಗೂ ವಜ್ರಮುನಿ ಪಾತ್ರ ಮಾಡಿದ ಮೇಲೆ ಅನಿಸಿತು.

ನಿಮಗೆ ಈ ಸಿನಿಮಾ ಮೂಡಿಸಿರುವ ಭರವಸೆಗಳೇನು?

35 ವರ್ಷಗಳ ನನ್ನ ಚಿತ್ರ ಜೀವನದಲ್ಲಿ ಇದೊಂದು ವಿಶೇಷ ಸಿನಿಮಾ. ನಮ್ಮ ಅಣ್ಣ ಜಗ್ಗೇಶ್‌ ಅವರ ಸ್ಟುಡಿಯೋದಲ್ಲೇ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆಗಿದ್ದು. ಜಗ್ಗೇಶ್‌ ಈ ಚಿತ್ರವನ್ನು 5 ಬಾರಿ ನೋಡಿದ್ದಾರೆ. ನನ್ನ ಪತ್ನಿ ಚಿತ್ರ ನೋಡಿ ಸೂಪರ್‌ ಎಂದಿದ್ದಾರೆ. ನನ್ನ ಸ್ನೇಹಿತರು, ಆಪ್ತರು ಸಿನಿಮಾ ನೋಡಿದ ಮೇಲೆ ಇದು ಪ್ರೇಕ್ಷಕರ ಸಿನಿಮಾ ಎಂದಿದ್ದಾರೆ.

ನಟನೆ ಜತೆಗೆ ನಿರ್ಮಾಣ, ವಿತರಣೆ ಮಾಡುವ ರಿಸ್ಕ್‌ ಯಾಕೆ?

ನಮ್ಮ ಭಾರವನ್ನು ಬೇರೆಯವರ ಮೇಲೆ ಹೊರೆಸಬಾರದು. ಮೊದಲು ನಾವು ರಿಸ್ಕ್‌ ತೆಗೆದುಕೊಳ್ಳಬೇಕು. ಆ ನಂತರ ಬೇರೆಯವರನ್ನು ಕರೆಯಬೇಕು. ಬೇರೆ ಏನಾದರೂ ಹೊಸದಾಗಿ ಮಾಡಬೇಕು ಎನ್ನುವ ಹಂಬಲದಲ್ಲಿ ತೆರೆ ಹಿಂದಿನ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೇನೆ.

ನಿರ್ದೇಶಕ ಪ್ರದೀಪ್‌ ಜತೆಗಿನ ಕೆಲಸದ ಅನುಭವ ಹೇಗಿತ್ತು?

ಹೊಸ ರೀತಿಯಲ್ಲಿ ದೃಶ್ಯಗಳನ್ನು ಕಂಪೋಸ್‌ ಮಾಡುವ ನಿರ್ದೇಶಕ. ಅವರು ನನಗೆ ಹೇಳಿದ ಕತೆಯನ್ನು ಯಾವ ರೀತಿ ತೆರೆ ಮೇಲೆ ತರಬಹುದು ಎಂಬುದು ನೋಡಲು ನಾನೂ ಕುತೂಹಲದಿಂದ ಕಾಯುತ್ತಿದ್ದೆ. ಕೊಟ್ಟ ಮಾತಿನಂತೆ ನಡೆಸಿಕೊಂಡಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌