ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಚಿತ್ರ ಆಗಸ್ಟ್ 9ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.
ಈಗಾಗಲೇ ಚಿತ್ರದ ಹಾಡುಗಳು ಕ್ರೇಜ್ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ನಡೆದ ‘ಭೀಮ’ ಕಾರ್ಯಕ್ರಮದ ವೇದಿಕೆಯಲ್ಲಿ ಬುಡಕಟ್ಟು ಜನರ ಹಾಡುಗಳನ್ನು ಪ್ರದರ್ಶನ ಮಾಡಲಾಯಿತು. ಜೇನು ಕುರುಬರ ಹಾಡುಗಳಿಗೆ ದುನಿಯಾ ವಿಜಯ್ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.ದುನಿಯಾ ವಿಜಯ್, ‘ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಅದರಲ್ಲೂ ಈ ಸಿನಿಮಾ ನೋಡಿದ ಮೇಲೆ ಈ ಚಿತ್ರದಲ್ಲಿ ನಾನು ಹೇಳಲು ಹೊರಟಿರುವ ವಿಚಾರದ ಮೇಲೆ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದು, ಮನೆ ಮನೆಗೂ ಬಂದು ಕೂತಿರುವ ಈ ಸೂಕ್ಷ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸೆನ್ಸಾರ್ನಿಂದ ಎ ಸರ್ಟಿಫಿಕೇಟ್ ನೀಡಿದ್ದಾರೆ. ಆದರೂ ಎಲ್ಲಾ ವಯಸ್ಸಿನವರು ನೋಡಬೇಕಾದ ಕತೆ ಈ ಚಿತ್ರದಲ್ಲಿದೆ. ವಿದ್ಯಾರ್ಥಿಗಳು, ಹದಿಹರೆಯದವರು, ಅದರಲ್ಲೂ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು.
ಚಿತ್ರದ ನಾಯಕಿ ಅಶ್ವಿನಿ, ಸಂಭಾಷಣೆಗಾರ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ಅರಸು ಅಂತಾರೆ, ಛಾಯಾಗ್ರಾಹಕ ಶಿವಸೇನಾ ಹಾಜರಿದ್ದರು.