;Resize=(412,232))
ಆಂಧ್ರದ ಕಮ್ಯೂನಿಸ್ಟ್ ಲೀಡರ್, ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಅವರ ಜೀವನ ಆಧರಿಸಿದ ‘ಗುಮ್ಮಡಿ ನರಸಯ್ಯ’ ಎಂಬ ತೆಲುಗು ಚಿತ್ರದ ನಾಯಕನಾಗಿ ಶಿವರಾಜ್ಕುಮಾರ್ ನಟಿಸುತ್ತಿದ್ದಾರೆ. ಈ ಸಿನಿಮಾ ಕುರಿತು ಇದೇ ಮೊದಲ ಬಾರಿಗೆ ಗುಮ್ಮಡಿ ನರಸಯ್ಯ ಮಾತನಾಡಿದ್ದಾರೆ. ಮೊದಲು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.
‘ಮೂರು ವರ್ಷಗಳ ಹಿಂದೆ ಕೆಲವರು ನನ್ನ ಬಗ್ಗೆ ಮಾಹಿತಿಗಳನ್ನು ಕೇಳಿದರು. ಪತ್ರಕರ್ತರು ಇರಬಹುದು ಎಂದುಕೊಂಡು ನನ್ನ ಬಗ್ಗೆ ಎಲ್ಲವನ್ನು ಹೇಳಿದೆ. ಕೆಲವು ತಿಂಗಳುಗಳ ನಂತರ ಮತ್ತೆ ಅವರೇ ಬಂದು ಸಿನಿಮಾ ಮಾಡುತ್ತೇವೆ ಎಂದರು.
ಆಗ ನಾನು ಬೇಡ ಎಂದೆ. ಯಾಕೆಂದರೆ ಈ ಹಿಂದೆ ನಿರ್ದೇಶಕ ಹಾಗೂ ನಟ ಆರ್. ನಾರಾಯಣಮೂರ್ತಿ ಅವರ ‘ಎರ್ರಸೈನ್ಯಂ’ ಸಿನಿಮಾ ನಾನು ನೋಡಿದ್ದೆ. ಅದು ಕೂಡ ಕಮ್ಯೂನಿಸ್ಟ್ ಹೋರಾಟಗಳ ಹಿನ್ನೆಲೆಯ ಚಿತ್ರವೇ. ಆದರೆ, ಆ ಸಿನಿಮಾ ವಾಸ್ತವಕ್ಕೆ ತುಂಬಾ ದೂರ ಇತ್ತು. ತಪ್ಪಾಗಿ ಸಿನಿಮಾ ಮಾಡಿದ್ದರು. ಅದಕ್ಕೆ ಈ ಚಿತ್ರಕ್ಕೆ ವಿರೋಧ ಮಾಡಿದ್ದೆ. ಆ ನಂತರ ಚಿತ್ರತಂಡದವರು ಬಂದು ನಾನು ಹೇಳಿದ ಮಾಹಿತಿಗಳನ್ನೇ ಸಿನಿಮಾ ಮಾಡುತ್ತೇವೆ ಎಂದರು.
ಹೀಗಾಗಿ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನ ಪಾತ್ರವನ್ನು ಕನ್ನಡದ ನಟ ಶಿವರಾಜ್ಕುಮಾರ್ ಮಾಡುತ್ತಿದ್ದಾರೆ ಎಂದು ಚಿತ್ರದ ಪೋಸ್ಟರ್ ಬಿಡುಗಡೆ ಆದ ಮೇಲೆ ಗೊತ್ತಾಯಿತು. ಹೇಗೆ ಮಾಡುತ್ತಾರೋ ಗೊತ್ತಿಲ್ಲ. ನೋಡಬೇಕಿದೆ’ ಎಂದು ಗುಮ್ಮಡಿ ನರಸಯ್ಯ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತೆಲುಗಿನ ಪರಮೇಶ್ವರ ಹಿವ್ರಳೆ ಎಂಬುವವರ ನಿರ್ದೇಶನದಲ್ಲಿ ‘ಗುಮ್ಮಡಿ ನರಸಯ್ಯ’ ಚಿತ್ರ ಮೂಡಿ ಬರಲಿದೆ.