ಬೆಂಗಳೂರು 17ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಇಂದು ಉದ್ಘಾಟನೆಯಾಗುತ್ತಿದೆ. ಈ ಬಾರಿಯ ಚಿತ್ರೋತ್ಸವದ ಪ್ರಮುಖ ಆಕರ್ಷಣೆಗಳೇನು, ವಿಶೇಷತೆಗಳೇನು ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತುಕತೆ ಇಲ್ಲಿದೆ.
ಆರ್. ಕೇಶವಮೂರ್ತಿ
ಈ ಬಾರಿ ಚಿತ್ರೋತ್ಸವದ ಆಕರ್ಷಣೆ ಏನು?
ಮುಖ್ಯವಾಗಿ ಟೆಂಟ್ ಸಿನಿಮಾ. 8 ದಿನಗಳ ಕಾಲ ಪ್ರತಿ ದಿನ ಕನ್ನಡದ ಕ್ಲಾಸಿಕ್ ಸಿನಿಮಾಗಳನ್ನು ಲುಲು ಮಾಲ್ ಮುಂದೆ ಉಚಿತ ಪ್ರದರ್ಶನ ಆಯೋಜಿಸಲಾಗಿದೆ. ಜನಪ್ರಿಯ ಚಿತ್ರಗಳಿಗಾಗಿಯೇ ರೆಡ್ ಕಾರ್ಪೆಟ್, 90 ವರ್ಷಗಳ ಚಿತ್ರರಂಗದ ನೆನಪಿಗಾಗಿ ಛಾಯಾಚಿತ್ರ ಪ್ರದರ್ಶನ, ಚಿತ್ರರಂಗದ ದಿಗ್ಗಜರನ್ನು ಗೌರವಿಸುವ ವಾಲ್ ಆಫ್ ಆನರ್... ಹೀಗೆ ಹಲವು ಕಾರ್ಯಕ್ರಮಗಳು ಇವೆ.
ಒರಾಯನ್ ಮಾಲ್ನಿಂದ ಲುಲು ಮಾಲ್ಗೆ ಚಿತ್ರೋತ್ಸವ ಶಿಫ್ಟ್ ಆಗಿದ್ದು ಯಾಕೆ?
ಒರಾಯನ್ ಮಾಲ್ ಸೀಮಿತ ಪ್ರದೇಶವಾಗಿತ್ತು. ಚಿತ್ರರಂಗದವರು ಮಾತ್ರ ಬರುವ ರೀತಿ ಇತ್ತು. ಜೊತೆಗೆ ಸಿನಿಮಾಗಳ ಪ್ರದರ್ಶನಕ್ಕೆ ಮತ್ತು ಮಾಸ್ಟರ್ ಕ್ಲಾಸ್ಗಳಿಗೆ ಅಗತ್ಯವಿರುವಷ್ಟು ಜಾಗ ಅಲ್ಲಿ ಇರಲಿಲ್ಲ. ಲುಲು ಮಾಲ್ನಲ್ಲಿ 11 ಸ್ಕ್ರೀನ್, ಮಾಸ್ಟರ್ ಕ್ಲಾಸ್ ಪ್ರತ್ಯೇಕವಾಗಿ ಜಾಗ ನೀಡಿದ್ದಾರೆ.
ಚಿತ್ರೋತ್ಸವದಲ್ಲಿ ಎಷ್ಟು ಸಿನಿಮಾಗಳ ಪ್ರದರ್ಶನ, ಯಾವ ದೇಶಗಳದ್ದು?
65 ದೇಶಗಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. 150 ಚಿತ್ರಗಳು ಅಂತಾರಾಷ್ಟ್ರೀಯ ಚಿತ್ರಗಳಾದರೆ 140 ಚಿತ್ರಗಳು ಭಾರತ, ಏಷ್ಯಾ ದೇಶಗಳ ಚಿತ್ರಗಳು. ಭಾರತದಲ್ಲಿ ನಡೆದ ಯಾವ ಚಿತ್ರೋತ್ಸವಕ್ಕೂ ಇಷ್ಟೊಂದು ಪ್ರಮಾಣದಲ್ಲಿ ಚಿತ್ರಗಳು ಬಂದಿಲ್ಲ.
ಈ ವರ್ಷ ಎಷ್ಟು ಜನ ಬರುವ ನಿರೀಕ್ಷೆ ಇದೆ?
1.50 ಲಕ್ಷದಿಂದ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷ 1 ಲಕ್ಷ ಜನ ಬಂದಿದ್ದರು.
ನಿಮ್ಮಂಥ ಬೇಡಿಕೆಯ ಸೆಲೆಬ್ರಿಟಿಗಳಿಗೆ ಈ ಹುದ್ದೆಯನ್ನು ನಿಭಾಯಿಸೋದು ಸಾಧ್ಯವೇ?
ನಾನು ಇದನ್ನು ಹುದ್ದೆ ಅಂದುಕೊಂಡಿಲ್ಲ. 30 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಸರ್ಕಾರ ನನಗೆ ಒಂದು ಅಕಾಡೆಮಿಕ್ ಜವಾಬ್ದಾರಿ ವಹಿಸಿದೆ.
ಎಲ್ಲವೂ ಸರ್ಕಾರದ ಆದೇಶಗಳ ಮೇರೆಗೆ ನಡೆಯುವ ಚಿತ್ರೋತ್ಸವದಲ್ಲಿ ಅಕಾಡೆಮಿ ಅಧ್ಯಕ್ಷರಿಗೇನು ಕೆಲಸ?
ಸರ್ಕಾರದ ಕೆಲವು ನಿಯಮಗಳು, ಪ್ರೋಟೋಕಾಲ್ಗಳನ್ನು ಪಾಲಿಸಲೇಬೇಕು. ಆದರೆ, ಚಿತ್ರೋತ್ಸವ ಎಂಬುದು ಸಾಂಸ್ಕೃತಿಕ ಸಂಭ್ರಮ, ಕ್ರಿಯೇಟಿವ್ ಫೆಸ್ಟಿವಲ್. ಇಲ್ಲಿ ಆಡಳಿತಾತ್ಮಕ ಆದೇಶಗಳ ಜೊತೆಗೆ ಆಸಕ್ತಿಯೂ ಬೇಕು. ಅಂಥ ಆಸಕ್ತಿಯ ಮನಸ್ಸುಗಳನ್ನು ಕೂಡಿಸಿಕೊಂಡು ಹೋಗುವ ಶಕ್ತಿ ನನಗೆ ಇದೆ.
ಅಕಾಡೆಮಿ ಕೇವಲ ಚಿತ್ರೋತ್ಸವಗಳಿಗೆ ಸೀಮಿತ ಎನ್ನುವ ಮಾತು ಯಾವಾಗ ದೂರ ಆಗುತ್ತದೆ?
ಅಕಾಡೆಮಿಯ ಯಾವ ಕಾರ್ಯಕ್ರಮಗಳು ನಿಂತಿಲ್ಲ. ನಾನು ಅಧ್ಯಕ್ಷನಾಗಿ ಬಂದಾಗ ಬೆಳ್ಳಿಹೆಜ್ಜೆ, ಸಿನಿಮಾ ಸಾಹಿತ್ಯ ಪ್ರಕಟಣೆ ಸೇರಿದಂತೆ ಬೇರೆ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಪ್ರಪೋಸಲ್ ಕೊಟ್ಟಿದ್ದೆ. ಇದರ ಜೊತೆಗೆ ಚಿತ್ರರಂಗಕ್ಕೆ ಆರ್ಥಿಕವಾಗಿ ಅನುಕೂಲ ಆಗುವಂತಹ ಯೋಜನೆಗಳನ್ನೂ ಸರ್ಕಾರದ ಮುಂದಿಟ್ಟಿದ್ದೇನೆ.
