ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಅಭೂತಪೂರ್ವ ಗೆಲುವು ಕಂಡಿದೆ. ಈ ವಾರದಿಂದ ‘ಕಾಟೇರ’ ಸಿನಿಮಾ ದುಬೈ, ಯುಕೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಬಿಡುಗಡೆ ಆಗುತ್ತಿದೆ. ಜ.7ಕ್ಕೆ ದುಬೈನಲ್ಲಿ ಪ್ರೀಮಿಯರ್ ಶೋ ನಡೆಯುತ್ತಿದ್ದು, ಈ ಪ್ರೀಮಿಯರ್ ಶೋನಲ್ಲಿ ಚಿತ್ರತಂಡ ಪಾಲ್ಗೊಳ್ಳುವ ಸಾಧ್ಯತೆಗಳು ಇವೆ.
ಕನ್ನಡಪ್ರಭ ಸಿನಿವಾರ್ತೆ
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಅಭೂತಪೂರ್ವ ಗೆಲುವು ಕಂಡಿದೆ. ಈ ವಾರದಿಂದ ‘ಕಾಟೇರ’ ಸಿನಿಮಾ ದುಬೈ, ಯುಕೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಬಿಡುಗಡೆ ಆಗುತ್ತಿದೆ. ಜ.7ಕ್ಕೆ ದುಬೈನಲ್ಲಿ ಪ್ರೀಮಿಯರ್ ಶೋ ನಡೆಯುತ್ತಿದ್ದು, ಈ ಪ್ರೀಮಿಯರ್ ಶೋನಲ್ಲಿ ಚಿತ್ರತಂಡ ಪಾಲ್ಗೊಳ್ಳುವ ಸಾಧ್ಯತೆಗಳು ಇವೆ. ಈಗಾಗಲೇ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಬಂದಿದ್ದು, ತೆಲುಗು, ತಮಿಳು, ಹಿಂದಿ ಭಾಷೆಗೆ ಡಬ್ ಆಗಲಿದೆ. ಚಿತ್ರದ ಗೆಲುವಿನ ಸಂಭ್ರಮಾಚರಣೆ ಕಾರ್ಯಕ್ರದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ‘ನಮ್ಮ ನಿರೀಕ್ಷೆಯಂತೆ ಕಾಟೇರ ಸಿನಿಮಾ ಮೆಚ್ಚುಗೆ ಗಳಿಸುತ್ತಿದೆ. ನನ್ನ ನಿರ್ಮಾಣದಲ್ಲಿ ಒಂದು ಒಳ್ಳೆಯ ಸಿನಿಮಾ ಕೊಟ್ಟ ಇಡೀ ತಂಡಕ್ಕೆ ಧನ್ಯವಾದಗಳು’ ಎಂದರು. ದರ್ಶನ್, ‘ನನಗೆ ಇಂಥಾ ಒಳ್ಳೆಯ ಕತೆ ಕೊಟ್ಟು ಸಿನಿಮಾ ಮಾಡಿದ ನಿರ್ದೇಶಕ ತರುಣ್ ಸುಧೀರ್, ಕತೆ ಬರೆದ ಜಡೇಶ್ ಕೆ ಹಂಪಿ, ಡೈಲಾಗ್ ಬರೆದ ಮಾಸ್ತಿ ಅವರಿಗೆ ಧನ್ಯವಾದಗಳು. ಚಿತ್ರದಲ್ಲಿ ಹಿರಣ್ಯ ಕಶಿಪುವಿನ ಡೈಲಾಗ್ ಹೇಳುವ ದೃಶ್ಯದಲ್ಲಿನ ನನ್ನ ನಟನೆಯನ್ನು ಡಾ ರಾಜ್ಕುಮಾರ್ ಅವರಿಗೆ ಹೋಲಿಸುವುದು ಬೇಡ. ಯಾಕೆಂದರೆ ರಾಜ್ಕುಮಾರ್ ಅವರ ಕಾಲ ಧೂಳಿಗೂ ನಾನು ಸಮ ಅಲ್ಲ. ಪ್ರಯತ್ನ ಮಾಡಬಹುದು. ಆದರೆ, ಅವರ ಲೆವಲ್ಲಿಗೆ ಹೋಗಲಾಗದು. ಚಿತ್ರದಲ್ಲಿ ನನ್ನ ನಟನೆ, ಡೈಲಾಗ್, ಕತೆ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಖುಷಿ ಆಗುತ್ತಿದೆ’ ಎಂದರು.
ನಿರ್ದೇಶಕ ತರುಣ್ ಸುಧೀರ್, ‘ಸಿನಿಮಾ ಯಾರೂ ಕೂಡ ಲ್ಯಾಗ್ ಆಯಿತು ಅಂತ ಹೇಳುತ್ತಿಲ್ಲ. ಚಿತ್ರದಲ್ಲಿ ತುಂಬಾ ದೊಡ್ಡ ವಿಷಯಗಳಿವೆ. ಎಲ್ಲವನ್ನೂ ಹೇಳುವುದಕ್ಕೆ ನಮಗೆ ಟೈಮ್ ಬೇಕಾಯಿತು’ ಎಂದರು.
ಕತೆಗಾರ ಜಡೇಶ್ ಕೆ ಹಂಪಿ, ಸಂಭಾಷಣಾಕಾರ ಮಾಸ್ತಿ, ಅವಿನಾಶ್, ಶ್ರುತಿ, ಕುಮಾರ್ ಗೋವಿಂದ್, ರವಿಚೇತನ್, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ವಿ ಹರಿಕೃಷ್ಣ ಇದ್ದರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.