ಶ್ರುತಿ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರವಿಚಂದ್ರನ್, ಶಿವರಾಜ್ಕುಮಾರ್, ಬಿ ಸಿ ಪಾಟೀಲ್, ಗೀತಾ ಶಿವರಾಜ್ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ನೆನಪಿರಲಿ ಪ್ರೇಮ್, ಶರಣ್, ಅಮೂಲ್ಯ, ಸೋನಲ್ ಮೊಂಥೆರೋ, ಜಯಮಾಲ, ಮಾಳವಿಕಾ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಕಲಾವಿದರು, ತಂತ್ರಜ್ಞರು ಆಗಮಿಸಿ ಶ್ರುತಿ ಅವರಿಗೆ ಶುಭ ಕೋರಿದರು. ಪುತ್ರಿ ಗೌರಿ ಶ್ರುತಿ ವೇದಿಕೆ ಮೇಲೆ ಹಾಡು ಹಾಡಿದ್ದು ಗಮನ ಸೆಳೆಯಿತು.
ಶ್ರುತಿ, ‘ನಿರ್ದೇಶಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮದವರು ಹಾಗೂ ಕುಟುಂಬದವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಇಷ್ಟು ವರ್ಷಗಳ ಕಾಲ ನಟನೆಯ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ಐವತ್ತು ಎಂಬುದು ಸಂಭ್ರಮದ ದಿನ. ಮತ್ತಷ್ಟು ಒಳ್ಳೆಯ ಪಾತ್ರಗಳು, ಚಿತ್ರಗಳಲ್ಲಿ ನಟಿಸುವ ಆಸೆ ಇದೆ’ ಎಂದರು.
ಉಪೇಂದ್ರ ಹುಟ್ಟುಹಬ್ಬಕ್ಕೆ 45 ಸಿನಿಮಾದ ವಿಶೇಷ ಬೈಕ್ ಅನಾವರಣ
ಕಿಕ್ಕಿರಿದು ನೆರೆದ ಸಾವಿರಾರು ಅಭಿಮಾನಿಗಳ ನಡುವೆ ರಿಯಲ್ ಸ್ಟಾರ್ ಉಪೇಂದ್ರ ಅವರ 57ನೇ ಜನ್ಮದಿನಾಚರಣೆ ಅದ್ದೂರಿಯಾಗಿ ನಡೆದಿದೆ. ಈ ವೇಳೆ ‘45’ ಸಿನಿಮಾ ತಂಡದವರು ವಿಶೇಷ ಬೈಕ್ ಅನಾವರಣಗೊಳಿಸಿದ್ದಾರೆ. ಇದು ‘45’ ಸಿನಿಮಾದಲ್ಲಿ ಉಪೇಂದ್ರ ಬಳಸುವ ವಿಶೇಷ ವಿನ್ಯಾಸದ ಬೈಕ್ ಆಗಿದ್ದು, ಪ್ರಚಾರದ ಭಾಗವಾಗಿ ದೇಶಾದ್ಯಂತ ಇದರಲ್ಲಿ ಸಂಚರಿಸುವ ಉದ್ದೇಶ ಚಿತ್ರತಂಡಕ್ಕಿದೆ.
ಈ ವೇಳೆ ಮಾತನಾಡಿದ ಉಪೇಂದ್ರ, ‘ಹೊಸ ಹೊಸ ಸಿನಿಮಾಗಳು ಬರುತ್ತಿವೆ. ಭಾರ್ಗವ, 45, ನೆಕ್ಸ್ಟ್ ಲೆವೆಲ್ ಮೊದಲಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇನೆ. ಇದರ ನಡುವೆ ಮತ್ತೆ ನಿರ್ದೇಶನ ಮಾಡುವ ಆಸೆಯೂ ಇದೆ. ನಾನು ಬದುಕಲ್ಲಿ ಕನಸು ಕಾಣುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುತ್ತಾ ಹೋದವನು. ಆ ಪ್ರೊಸೆಸ್ನಲ್ಲಿ ಮನೆ, ಕಾರು ಎಲ್ಲಾ ಬಂದವು. ಉಳಿದಂತೆ ಕಾಲ ಕಾಲಕ್ಕೆ ನನ್ನ ಹೇರ್ ಸ್ಟೈಲ್ ಚೇಂಜ್ ಆಗ್ತಿರುತ್ತೆ. ಒಳಗಿನ ಯೋಚನೆ ಬದಲಾಗಲ್ಲ’ ಎಂದಿದ್ದಾರೆ.
ಈ ವೇಳೆ ಉಪೇಂದ್ರ ಅಭಿಮಾನಿಗಳು ಸುಮಾರು 57 ಕೆಜಿ ತೂಕದ ಕೇಕ್, ಬೃಹತ್ ಹೂವಿನ ಹಾರವನ್ನು ಹಾಕಿ ನೆಚ್ಚಿನ ನಟನ ಜನ್ಮದಿನವನ್ನು ಸಂಭ್ರಮಿಸಿದರು.