;Resize=(412,232))
ಭಾರತೀಯ ಚಿತ್ರರಂಗದ ಪರಮೋಚ್ಛ ಗೌರವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಒಲಿದಿದೆ. ಈ ಕ್ಷಣದಲ್ಲಿ ನಿಮ್ಮ ಭಾವನೆಗಳೇನು?
ಕನ್ನಡಿಗರಿಗೆ ನಾನು ಮೊದಲು ನಮಿಸುತ್ತೇನೆ. ಅವರಿಂದಲೇ ಈ ಎಲ್ಲಾ ಮನ್ನಣೆ ನನಗೆ ದೊರಕುತ್ತಿದೆ. ಸಾಮಾನ್ಯವಾಗಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಐದಾರು ಜನ ತಜ್ಞರು ಇರುತ್ತಾರೆ. ಅಷ್ಟು ಜನರ ಮಧ್ಯೆ ಚರ್ಚೆಯಾಗಿ ನನ್ನ ಹೆಸರು ಅಂತಿಮಗೊಂಡಿದೆ ಎಂಬುದೇ ದೊಡ್ಡ ಹೆಮ್ಮೆ. ಇದು ನನ್ನೊಬ್ಬನದಲ್ಲ, ಜನರಿಗೆ ಸಂದ ಪ್ರಶಸ್ತಿ. ಸಮಸ್ತ ಕನ್ನಡಿಗರಿಗೆ ಬಂದ ಪ್ರಶಸ್ತಿ. ನಾನು ಯಾವತ್ತೂ ಪ್ರಶಸ್ತಿ ಬಯಸಿದವನಲ್ಲ. ಕನ್ನಡಿಗರ ಅಪಾರ ಪ್ರೀತಿಯೇ ನನಗೆ ಪ್ರಶಸ್ತಿ. ಕಳೆದ ವರ್ಷ ಅವರೇ ಪದ್ಮಭೂಷಣ ಪ್ರಶಸ್ತಿ ಬರುವಂತೆ ನೋಡಿಕೊಂಡರು. ಈಗ ಈ ಮನ್ನಣೆ ದೊರಕಿದೆ. ಈ ಗೌರವದ ಘೋಷಣೆಯನ್ನು ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಅಭಿನಂದಿಸಿರುವುದು ಮತ್ತಷ್ಟು ಸಂತೋಷ ಮತ್ತು ಹೆಮ್ಮೆ ತಂದಿದೆ.
ನಾನು ಶಾಲಾ ದಿನಗಳಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದ್ದೆ. ನಂತರ ನಟನೆ ಕಲಿಯಲೆಂದೇ ಮುಂಬೈಗೆ ಹೋದೆ. ಅಲ್ಲಿನ ರಂಗಭೂಮಿ ನನಗೆ ಅಭಿನಯದ ಅಡಿಪಾಯ ಹಾಕಿಕೊಟ್ಟಿತು. ಅದಾದ ಮೇಲೆ ಚಿತ್ರರಂಗದ ಪಯಣ ಶುರುವಾಯಿತು. ಇಲ್ಲಿಯವರೆಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಾನು ನಟಿಸಿದ ಎಲ್ಲಾ ಸಿನಿಮಾಗಳೂ ನನಗೆ ತೃಪ್ತಿ ನೀಡಿವೆ.
ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ನಿರ್ದೇಶಕರ ಬಗ್ಗೆಯೂ ನನಗೆ ಅಪಾರ ಮೆಚ್ಚುಗೆ ಹಾಗೂ ಗೌರವವಿದೆ.
ಬೆಂಗಳೂರಿಗೆ ಬಂದ ಆರಂಭಿಕ ದಿನಗಳು ಮತ್ತು ಇಲ್ಲಿ ನಿಮ್ಮ ಸಿನಿವಲಯ ಹೇಗಿತ್ತು?
ನಾನು ಆರಂಭದಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದಾಗ ಇಲ್ಲಿ ನನಗೆ ಯಾರೂ ಸ್ನೇಹಿತರು ಇರಲಿಲ್ಲ. ಆ ಸಮಯದಲ್ಲಿ ನನಗೆ ಆಪ್ತರಾಗಿದ್ದು ಪತ್ರಕರ್ತರು. ಪತ್ರಕರ್ತರೇ ನನ್ನ ನಿಜವಾದ ಸ್ನೇಹಿತರಾದರು. ನನ್ನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ್ದರಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಒಂದು ರೀತಿಯಲ್ಲಿ ಪತ್ರಕರ್ತರಿಂದಲೇ ನನಗೆ ಈ ಪ್ರಶಸ್ತಿ ಬಂದಿದೆ ಎಂದರೂ ತಪ್ಪಾಗಲಾರದು.
ರಾಜಕೀಯ ಅಧಿಕಾರ, ಚಿತ್ರರಂಗದ ವೈಭವ ಎರಡನ್ನೂ ಬಹಳ ಹತ್ತಿರದಿಂದ ನೋಡಿ, ಈಗ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದೀರಿ. ಈ ಪ್ರಶಸ್ತಿಯನ್ನು ಹೇಗೆ ನೋಡುತ್ತೀರಿ?
ಹೌದು, ನಾನು ರಾಜಕೀಯದಲ್ಲೂ ಇದ್ದೆ, ಸಚಿವನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದೆ. ಚಿತ್ರರಂಗದಿಂದ ಈಗಿನ ಪರಿಸ್ಥಿತಿ ನೋಡಿ ಕೊಂಚ ದೂರ ಉಳಿದಿದ್ದೇನೆ. ಇದೀಗ ನನ್ನ ನಟನೆಯನ್ನು ಪರಿಗಣಿಸಿ ಈ ಅತ್ಯುನ್ನತ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ.