ಸಿನಿವಾರ್ತೆ
ನಟಿ ರಚಿತಾ ರಾಮ್ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ‘ಸಂಜುವೆಡ್ಸ್ ಗೀತಾ 2’ ಚಿತ್ರತಂಡ ಆರೋಪ ಮಾಡಿತ್ತು. ಇನ್ನೊಂದೆಡೆ ‘ಉಪ್ಪಿ ರುಪೀ’ ಚಿತ್ರದ ನಿರ್ಮಾಪಕಿಯೂ ರಚಿತಾ ತನ್ನಿಂದ ಹಣ ತೆಗೆದುಕೊಂಡು ಶೂಟಿಂಗ್ಗೆ ಬರಲಿಲ್ಲ ಎಂದು ದೂರು ನೀಡಿದ್ದರು. ಈ ಎರಡೂ ವಿಚಾರಗಳ ಬಗ್ಗೆ ರಚಿತಾ ರಾಮ್ ನೀಡಿರುವ ಸ್ಪಷ್ಟನೆ ಇಲ್ಲಿದೆ.
- ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಚಿಕ್ಕ ಮಕ್ಕಳ ಕಾಲಿಗೆ ಬಿದ್ದು ಕ್ಷಮೆ ಕೇಳಲೂ ಸಿದ್ಧಳಿದ್ದೇನೆ. ತಪ್ಪೇ ಮಾಡಿಲ್ಲ ಅಂದ ಮೇಲೆ ಆ ದೇವರೇ ಬಂದರೂ ನಾನು ಕಾಲಿಗೆ ಬೀಳಲ್ಲ.
- ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ ಹಲವು ಪ್ರೆಸ್ಮೀಟ್ಗಳಲ್ಲಿ, ಸಂದರ್ಶನಗಳಲ್ಲಿ ನನ್ನ ಬಗ್ಗೆ ಆಡಿರುವ ಮಾತುಗಳು, ಕೊಟ್ಟಿರುವ ಹೇಳಿಕೆಗಳು ನನಗೆ ತುಂಬಾ ನೋವುಂಟು ಮಾಡಿವೆ. ಈ ಸಿನಿಮಾಕ್ಕಾಗಿ ನಾನು ಒಂದೂ ಮುಕ್ಕಾಲು ವರ್ಷ ಕೆಲಸ ಮಾಡಿದ್ದೇನೆ. ಚಿತ್ರದ ಪ್ರಚಾರದ ಕಾರ್ಯಕ್ರಮಗಳಲ್ಲಿ ನನ್ನ ಕೆಲಸ, ಬದ್ಧತೆ ಬಗ್ಗೆ ಹೊಗಳಿದ್ದಾರೆ. ಈಗ ಅದೇ ಚಿತ್ರತಂಡ ನನ್ನನ್ನು ಸುಳ್ಳುಗಾರ್ತಿ, ನಾಟಕ ಆಡೋಳು ಅಂತಿದ್ದಾರೆ.
- ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಶೂಟಿಂಗ್ ನಡೆಯುವ ಹೊತ್ತಿಗೆ ನನ್ನ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಇಡೀ ಚಿತ್ರತಂಡ ರಿಲೀಸ್ ಪ್ರಚಾರದಲ್ಲಿತ್ತು. ಆ ಚಿತ್ರದ ನಿರ್ಮಾಪಕರು, ನಿರ್ದೇಶಕರು ನನ್ನ ಒಂದು ದಿನ ಪ್ರಚಾರಕ್ಕೆ ಬನ್ನಿ ಅಂತ ಕೇಳಿಕೊಂಡರು. ಆ ಚಿತ್ರದ ಪ್ರಮೋಷನ್ಗೆ ಹೋಗಲು ಒಂದು ದಿನದ ಅವಕಾಶವನ್ನೂ ಇವರು ಕೊಡಲಿಲ್ಲ. ಈಗ ನನ್ನ ಹೊಸ ಸಿನಿಮಾ ತಂಡದವರು ಈ ಸಿನಿಮಾ ಪ್ರಚಾರಕ್ಕೆ ಬಿಟ್ಟುಕೊಡುತ್ತಿಲ್ಲ, ಅಷ್ಟೇ. ಅಷ್ಟಾಗಿಯೂ ನಾನು ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಏನು ಕೆಲಸ ಮಾಡಬೇಕೋ ಅದನ್ನ ಮಾಡಿದ್ದೇನೆ.
- ದುಡ್ಡು ತಗೊಂಡು ಸಿನಿಮಾ ಶೂಟಿಂಗ್ಗೆ ಡೇಟ್ಸ್ ಕೊಟ್ಟಿಲ್ಲ ಅನ್ನೋ ದೂರಿನ ಬಗ್ಗೆ ಹಿರಿಯರಾದ ಸಾ ರಾ ಗೋವಿಂದು ವಿಚಾರಣೆ ಮಾಡುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡುವ ತನಕ ನಾನು ಎಲ್ಲೂ ಮಾತನಾಡಬಾರದು ಅಂತ ಸೂಚನೆ ಕೊಟ್ಟಿದ್ದಾರೆ. ಅವರ ಮಾತನ್ನು ಗೌರವಿಸುತ್ತೇನೆ.
ನಾನು ಕ್ಷಮೆ ಕೇಳಬೇಕು ಅಂದರೆ ನನ್ನ ಅಭಿಮಾನಿಗಳಿಗೆ ಮಾತ್ರ. ಈ ಬೆಳವಣಿಗೆಗಳಿಂದ ನಿಮಗೆ ಬೇಸರ ಆಗಿದ್ದರೆ, ಅಭಿಮಾನಿಗಳೇ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.